Glenn Maxwell: ಭಾರತದಲ್ಲಿ ಹೆಚ್ಚಿದ ಕೊರೊನಾ; ಮನೆಗೆ ಹೋಗಲು ಹೊಸ ಉಪಾಯ ಮಾಡಿದ ಗ್ಲೆನ್ ಮ್ಯಾಕ್ಸ್​ವೆಲ್

RCB: ಕೊರೊನಾ ಹರಡುವುದನ್ನು ತಪ್ಪಿಸಲು ಭಾರತದಿಂದ ಹೊರಡುವ ಎಲ್ಲ ವಿಮಾನಗಳನ್ನು ನಿರ್ಬಂಧಿಸಲಾಗಿದೆ ಈ ನಡುವೆ ಆಸ್ಟ್ರೇಲಿಯಾ ಕ್ರಿಕೆಟ್​ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಒಂದು ಉಪಾಯ ಮಾಡಿದ್ದಾರೆ.

Glenn Maxwell: ಭಾರತದಲ್ಲಿ ಹೆಚ್ಚಿದ ಕೊರೊನಾ; ಮನೆಗೆ ಹೋಗಲು ಹೊಸ ಉಪಾಯ ಮಾಡಿದ ಗ್ಲೆನ್ ಮ್ಯಾಕ್ಸ್​ವೆಲ್
ಗ್ಲೆನ್ ಮ್ಯಾಕ್ಸ್ವೆಲ್
Edited By:

Updated on: May 01, 2021 | 4:26 PM

ಭಾರತದಲ್ಲಿ ಕೊರೊನಾ ಸೋಂಕು​ ಶರವೇಗದಲ್ಲಿ ಹಬ್ಬುತ್ತಿದೆ. ಕಲವು ಕಡೆ ಲಾಕ್​ಡೌನ್​ ಮಾಡಿದ್ದರೂ ಸಹ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಸೂಕ್ತ ಸಮಯದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಜನರು ಬೀದಿಯಲ್ಲಿ ಹೆಣವಾಗುತ್ತಿರುವ ದೃಶ್ಯ ಕಾಣಿಸುತ್ತಿದೆ. ಆಕ್ಸಿಜನ್​ ಸಿಲಿಂಡರ್​ಗಳಿಗಾಗಿ ರೋಗಿಗಳು ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಐಪಿಎಲ್​ಗಾಗಿ ಬಂದಿರುವ ವಿದೇಶಿ ಆಟಗಾರರಿಗೆ ಮನೆಗೆ ಹೋಗುವ ಚಿಂತೆ ಶುರು ಆಗಿದೆ.

ಭಾರತದಲ್ಲಿ ಕೊರೊನಾ ಹೆಚ್ಚಿರುವುದರಿಂದ ಬೇರೆಲ್ಲ ದೇಶಗಳೂ ಭಾರತಕ್ಕೆ ವಿಮಾನಯಾನ ನಿರ್ಬಂಧಿಸಿವೆ. ಐಪಿಎಲ್​ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರ ತಲೆನೋವಿಗೆ ಇದು ಕಾರಣ ಆಗಿದೆ. ಇನ್ನೊಂದು ತಿಂಗಳಲ್ಲಿ ಐಪಿಎಲ್​ ಪಂದ್ಯಗಳು ಮುಗಿಯಲಿದ್ದು, ಆ ಬಳಿಕ ಮನೆಗೆ ಹೋಗುವುದು ಹೇಗೆ ಎಂದು ಅವರೆಲ್ಲ ತಲೆ ಕೆಡಿಸಿಕೊಂಡಿದ್ದಾರೆ. ಈ ನಡುವೆ ಆಸ್ಟ್ರೇಲಿಯಾ ಕ್ರಿಕೆಟ್​ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಒಂದು ಉಪಾಯ ಮಾಡಿದ್ದಾರೆ.

ಆರ್​ಸಿಬಿ ಪರವಾಗಿ ಆಡುತ್ತಿರುವ ಮಾಕ್ಸ್​ವೆಲ್​ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಭಾರತದಿಂದ ತೆರಳುವ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿರುವುದರ ನಡುವೆಯೂ ಅವರು ಆಸ್ಟ್ರೇಲಿಯಾಗೆ ತೆರಳಲು ಒಂದು ಮಾಸ್ಟರ್​ ಪ್ಲ್ಯಾನ್​ ಮಾಡಿದ್ದಾರೆ. ಜೂನ್​ ಮೂರನೇ ವಾರದಲ್ಲಿ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್ ಪಂದ್ಯ ನಡೆಯಲಿದೆ.​ ಅದಕ್ಕಾಗಿ ಚಾರ್ಟರ್ಡ್​ ಫ್ಲೈಟ್​ ಮೂಲಕ ಭಾರತ, ಇಂಗ್ಲೆಂಡ್​, ನ್ಯೂಜಿಲೆಂಡ್​ ಆಟಗಾರರು ಇಂಗ್ಲೆಂಡ್​ಗೆ ತೆರಳಲಿದ್ದಾರೆ. ಅದೇ ವಿಮಾನದಲ್ಲಿ ತಾವೂ ಪ್ರಯಾಣ ಮಾಡಬಹುದು ಎಂಬ ಬಗ್ಗೆ ಮ್ಯಾಕ್ಸ್​ವೆಲ್​ ಆಲೋಚಿಸಿದ್ದಾರೆ.

ಈ ರೀತಿಯಾಗಿ ಮೊದಲ ಭಾರತದಿಂದ ಇಂಗ್ಲೆಂಡ್​ಗೆ ತೆರಳಿ, ನಂತರ ಅಲ್ಲಿಂದ ಎಲ್ಲಾ ಆಟಗಾರರು ಅವರವರ ದೇಶಕ್ಕೆ ತೆರಳಬಹುದು ಎಂಬುದು ಮ್ಯಾಕ್ಸ್​ವೆಲ್​ ಉಪಾಯ. ಇದನ್ನು ಬಿಸಿಸಿಐ ಕೂಡ ಪರಿಗಣಿಸುವ ಸಾಧ್ಯತೆ ಇದೆ. ‘ಬಿಸಿಸಿಐ ಕೂಡ ಆಟಗಾರರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಮೊದಲು ಇಂಗ್ಲೆಂಡ್​ ಕಳಿಸಿ, ನಂತರ ಅಲ್ಲಿಂದ ಅವರವರ ದೇಶಕ್ಕೆ ಹೋಗಲು ವ್ಯವಸ್ಥೆ ಮಾಡುವ ಆಯ್ಕೆ ಸೂಕ್ತವಾಗಿದೆ’ ಎಂದು ಬಿಸಿಸಿಐ ಖಜಾಂಜಿ ಅರುಣ್​ ಧುಮಲ್​​ ಹೇಳಿದ್ದಾರೆ.

ಸದ್ಯ ಆಟಗಾರರೆಲ್ಲರೂ ಸುರಕ್ಷಿತವಾಗಿದ್ದಾರೆ. ಕೊವಿಡ್​ ಸೋಂಕು ತಗುಲದಂತೆ ಬಯೋ ಬಬಲ್​ನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ. ಆದರೆ ಐಪಿಎಲ್​ ಮುಗಿದ ಬಳಿಕ ಇಷ್ಟೆಲ್ಲ ಸುರಕ್ಷತೆಯನ್ನು ನಿರೀಕ್ಷಿಸುವುದು ಕಷ್ಟ. ಹಾಗಾಗಿ ಐಪಿಎಲ್​ ಮುಗಿಯುತ್ತಿದ್ದಂತೆಯೇ ಮನೆ ಸೇರುವುದು ಹೇಗೆ ಎಂದು ವಿದೇಶಿ ಆಟಗಾರರು ಈಗಲೇ ಆಲೋಚಿಸುತ್ತಿದ್ದಾರೆ.

ಇದನ್ನೂ ಓದಿ: IPL 2021: ಈ ಸೀಸನ್​ನ 10 ಕೋಟಿ ಚಿಯರ್ ಲೀಡರ್! ಸೆಹ್ವಾಗ್ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಂಡ ಮ್ಯಾಕ್ಸ್​ವೆಲ್

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us