AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾಗೆ ‘ಕಿಂಗ್ ಆಫ್ ಗಾಲೆ’ಯ ಬಗ್ಗೆ ಎಚ್ಚರಿಕೆ!

IND vs SL: ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಭಾರತ ತಂಡಕ್ಕೆ ಈಗಿನಿಂದಲೇ ಸ್ಪಿನ್ ಆತಂಕ ಶುರುವಾಗಿದೆ. ಲಂಕಾದ ಮಾಜಿ ಆಟಗಾರ ಫರ್ವೀಝ್ ಮಹರೂಫ್ ಭಾರತೀಯ ಬ್ಯಾಟರ್‌ಗಳಿಗೆ ಅಪಾಯದ ಮುನ್ಸೂಚನೆ ನೀಡಿದ್ದು, 'ಕಿಂಗ್ ಆಫ್ ಗಾಲೆ' ಖ್ಯಾತಿಯ ಪ್ರಭಾತ್ ಜಯಸೂರ್ಯ ಸರಣಿಯ ದಿಕ್ಸೂಚಿ ಬದಲಿಸಬಲ್ಲರು ಎಂದು ಎಚ್ಚರಿಸಿದ್ದಾರೆ.

ಟೀಮ್ ಇಂಡಿಯಾಗೆ 'ಕಿಂಗ್ ಆಫ್ ಗಾಲೆ'ಯ ಬಗ್ಗೆ ಎಚ್ಚರಿಕೆ!
Prabath JayasuriyaImage Credit source: AP
ಝಾಹಿರ್ ಯೂಸುಫ್
|

Updated on: Aug 12, 2026 | 8:06 AM

Share

ಭಾರತ ಹಾಗೂ ಶ್ರೀಲಂಕಾ ನಡುವಿನ ಬಹುನಿರೀಕ್ಷಿತ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಶ್ರೀಲಂಕಾದ ಮಾಜಿ ಆಲ್ ರೌಂಡರ್ ಫರ್ವೀಝ್ ಮಹರೂಫ್ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅದು ಸಹ ‘ಕಿಂಗ್ ಆಫ್ ಗಾಲೆ’ಯ ಎಚ್ಚರಿಕೆ!.

ಯಾರು ಈ ಕಿಂಗ್ ಆಫ್ ಗಾಲೆ?

34 ವರ್ಷದ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪ್ರಸ್ತುತ ಶ್ರೀಲಂಕಾ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇವರನ್ನೇ ಕಿಂಗ್ ಆಫ್ ಗಾಲೆ ಎಂದು ಬಣ್ಣಿಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗಾಲೆ ಮೈದಾನದಲ್ಲಿ ಪ್ರಭಾತ್ ಅವರ ಪ್ರದರ್ಶನ.

  •  ಪ್ರಭಾತ್ ಜಯಸೂರ್ಯ ಗಾಲೆ ಮೈದಾನದಲ್ಲಿ ಆಡಿರುವ ಕೇವಲ 11 ಟೆಸ್ಟ್ ಪಂದ್ಯಗಳಿಂದ ಪಡೆದಿರುವುದು ಬರೋಬ್ಬರಿ 81 ವಿಕೆಟ್‌ಗಳನ್ನು ಎಂದರೆ ನಂಬಲೇಬೇಕು.
  • ಅಲ್ಲದೆ ಪ್ರಭಾತ್ ಇದುವರೆಗೆ ಆಡಿರುವ 23 ಟೆಸ್ಟ್ ಪಂದ್ಯಗಳಿಂದ ಒಟ್ಟು 125 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಗಾಲೆ ಮೈದಾನದಲ್ಲೇ 81 ವಿಕೆಟ್ ಕಬಳಿಸಿರುವುದು ವಿಶೇಷ.

ಇದೇ ಕಾರಣದಿಂದಾಗಿ ಫರ್ವೀಝ್ ಮಹರೂಫ್ ‘ಕಿಂಗ್ ಆಫ್ ಗಾಲೆ’ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪಿಚ್ ತಂತ್ರ ಹಾಗೂ ಭಾರತದ ಸಿದ್ಧತೆ:

ಗಾಲೆ ಕ್ರೀಡಾಂಗಣದ ಪಿಚ್‌ಗಳು ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ಸ್ವರ್ಗ ಎನಿಸಿಕೊಂಡಿವೆ. ಇಲ್ಲಿನ ಒಣ ಹವೆ ಮತ್ತು ಒರಟಾದ ಮೇಲ್ಮೈಯಿಂದಾಗಿ ಚೆಂಡು ಬೇಗನೇ ಸವೆಯುತ್ತದೆ. ಇದು ಸ್ಪಿನ್ ಮಾತ್ರವಲ್ಲದೆ ರಿವರ್ಸ್ ಸ್ವಿಂಗ್‌ಗೂ ಹೆಚ್ಚಿನ ನೆರವು ನೀಡುತ್ತದೆ. ಈ ಭೀತಿಯನ್ನು ಎದುರಿಸಲು ಭಾರತದ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಈಗಾಗಲೇ ನೆಟ್ಸ್‌ನಲ್ಲಿ ಹಳೆಯ ಕೂಕಬುರ್ರಾ ಚೆಂಡುಗಳನ್ನು ಬಳಸಿ ವಿಶೇಷ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ಗಾಯದ ಸಮಸ್ಯೆಯಲ್ಲಿ ಟೀಮ್ ಇಂಡಿಯಾ:

ಈ ಮಹತ್ವದ ಸರಣಿಗೂ ಮುನ್ನ ಭಾರತ ತಂಡಕ್ಕೆ ಗಾಯದ ದೊಡ್ಡ ಆಘಾತ ಎದುರಾಗಿದೆ. ಪ್ರಮುಖ ಆಟಗಾರರಾದ ಸಾಯಿ ಸುದರ್ಶನ್ (ಕಾಲ್ಬೆರಳ ಗಾಯ), ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ (ಮೊಣಕಾಲು ಗಾಯ) ಮತ್ತು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ (ಹ್ಯಾಮ್‌ಸ್ಟ್ರಿಂಗ್ ಗಾಯ) ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಸ್ಪಿನ್ ಪಿಚ್‌ಗಳನ್ನು ಚೆನ್ನಾಗಿ ಆಡಬಲ್ಲ ಸರ್ಫರಾಝ್ ಖಾನ್, ಬೌಲರ್‌ಗಳಾದ ಸರಂಶ್ ಜೈನ್ ಮತ್ತು ಆಖಿಬ್ ನಬಿ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಭಾರತ vs ಬಾಂಗ್ಲಾ ಸರಣಿ ಡೌಟ್: ಡೇಟ್ ಫಿಕ್ಸ್ ಮಾಡಿದ ಅಫ್ಘಾನಿಸ್ತಾನ್!

ಒಟ್ಟಾರೆಯಾಗಿ, ಯಾವುದೇ ಉಪಖಂಡದ ಪ್ರವಾಸದಲ್ಲಿ ಸ್ಪಿನ್ ಸವಾಲನ್ನು ಎದುರಿಸುವುದು ಭಾರತೀಯ ಬ್ಯಾಟರ್‌ಗಳಿಗೆ ಹೊಸದೇನಲ್ಲ. ಆದರೆ, ಗಾಲೆ ಮೈದಾನದಲ್ಲಿ ಪ್ರಭಾತ್ ಜಯಸೂರ್ಯ ಸೃಷ್ಟಿಸಿರುವ ದಾಖಲೆಗಳು ಮತ್ತು ಪ್ರಸ್ತುತ ಭಾರತ ತಂಡವನ್ನು ಕಾಡುತ್ತಿರುವ ಗಾಯದ ಸಮಸ್ಯೆಗಳು ಈ ಸರಣಿಯನ್ನು ಮತ್ತಷ್ಟು ರೋಚಕಗೊಳಿಸಿವೆ.

Follow Us