ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸದ್ಯಕ್ಕಂತೂ ಸಾಧ್ಯವೇ ಇಲ್ಲ: ರಮೀಜ ರಾಜಾ, ಪಿಸಿಬಿ ಚೇರ್ಮನ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 14, 2021 | 1:21 AM

2008 ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಎರಡು ದೇಶಗಳ ನಡುವೆ ಕ್ರಿಕೆಟ್ ಸಂಬಂಧಗಳು ಮುರಿದುಬಿದ್ದವು. ಐಸಿಸಿ ಆಯೋಜಿಸುವ ಮತ್ತು ಏಷ್ಯಾ ಕಪ್ ಗಳಲ್ಲಿ ಮಾತ್ರ ಇವೆರಡರ ನಡುವೆ ಪಂದ್ಯಗಳು ನಡೆಯುತ್ತಿವೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸದ್ಯಕ್ಕಂತೂ ಸಾಧ್ಯವೇ ಇಲ್ಲ: ರಮೀಜ ರಾಜಾ, ಪಿಸಿಬಿ ಚೇರ್ಮನ್
ರಮೀಜ್​ ರಾಜಾ
Follow us on

ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸದ್ಯಕ್ಕಂತೂ ಆರಂಭವಾಗುವುದು ಅಸಂಭವ ಎಂದು ಸೋಮವಾರವಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ಮಾಜಿ ಆರಂಭ ಆಟಗಾರ ರಮೀಜ್ ರಾಜಾ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿ ನಡೆಯುವುದು ಸಾಧ್ಯವಿಲ್ಲ ಎಂದು ಹೇಳಿದರು. ಎರಡು ರಾಷ್ಟ್ರಗಳ ಕ್ರೀಡಾ ಸಂಬಂಧವನ್ನು ರಾಜಕಾರಣ ಹಾಳುಮಾಡಿದೆ ಎಂದು ರಾಜಾ ಹೇಳಿದರು.

‘ನಿಜ ಹೇಳಬೇಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಅತ್ಯುತ್ತಮ ಕ್ರೀಡಾ ಬಾಂಧವ್ಯ ಇತ್ತು. ಆದರೆ ಅದನ್ನು ರಾಜಕಾರಣ ಹಾಳು ಮಾಡಿದೆ. ಈಗ ಯಥಾ ಸ್ಥಿತಿ ಮುಂದುವರಿದಿದೆ. ಅವಸರದಲ್ಲಿ ಯಾವುದೇ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ. ದೇಶೀಯ ಮತ್ತು ಸ್ಥಳೀಯ ಕ್ರಿಕೆಟ್ ಮೇಲೆ ಫೋಕಸ್ ಮಾಡುವುದು ನಮ್ಮ ಆದ್ಯತೆಯಾಗಿದೆ,’ ಎಂದು ರಾಜಾ ನೆರೆ ರಾಷ್ಟ್ರಗಳ ನಡುವೆ ಕ್ರಿಕೆಟ್ ಸಂಬಂಧ ಪುನರಾರಂಭಗೊಳ್ಳುವುದೇ ಎಂದು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು.

2008 ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಎರಡು ದೇಶಗಳ ನಡುವೆ ಕ್ರಿಕೆಟ್ ಸಂಬಂಧಗಳು ಮುರಿದುಬಿದ್ದವು. ಐಸಿಸಿ ಆಯೋಜಿಸುವ ಮತ್ತು ಏಷ್ಯಾ ಕಪ್ ಗಳಲ್ಲಿ ಮಾತ್ರ ಇವೆರಡರ ನಡುವೆ ಪಂದ್ಯಗಳು ನಡೆಯುತ್ತಿವೆ. 2012-13ರಲ್ಲಿ ಪಾಕಿಸ್ತಾನ ಮೂರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ಸರಣಿ ಆಡಲು ಆಗಮಿಸಿತ್ತಾದರೂ ಅದಾದ ಬಳಿಕ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ.

ಎರಡು ತಂಡಗಳ ನಡುವೆ ಕೊನೆಯ ಟೆಸ್ಟ್ ಪಂದ್ಯವೊಂದು ನಡೆದಿದ್ದು 2007 ಬೆಂಗಳೂರುನಲ್ಲಿ. ಮುಂಬರುವ ಟಿ29 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಅಕ್ಟೋಬರ್ 24 ರಂದು ನಡೆಯಲಿರುವ ಪಂದ್ಯದ ಬಗ್ಗೆಯೂ ರಾಜಾ ಆವರಿಗೆ ಕೇಳಲಾಯಿತು.

‘ಆ ಪಂದ್ಯ ನಿಸ್ಸಂದೇಹವಾಗಿ ಶೋ ಸ್ಟಾಪರ್ ಆಗಲಿದೆ. ಪಾಕಿಸ್ತಾನದ ಆಟಗಾರರನ್ನು ಭೇಟಿಯಾದಾಗ ಈ ಬಾರಿಯ ಫಲಿತಾಂಶ ಭಿನ್ನವಾಗಿರಬೇಕೆಂದು ಹೇಳಿದ್ದೇನೆ. ಪಂದ್ಯ ಗೆಲ್ಲಲು ಅವರು ಶೇಕಡಾ 100 ಕ್ಕಿಂತ ಹೆಚ್ಚು ಶ್ರಮವಹಿಸಬೇಕು ಎನ್ನುವುದನ್ನು ಸ್ಪಷ್ಟಪಡಿಸಿದ್ದೇನೆ,’ ಎಂದು ರಾಜಾ ಹೇಳಿದರು.

ಪಾಕಿಸ್ತಾನದ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಟಗಾರರು ನಿರ್ಭೀತಿ ಕ್ರಿಕೆಟ್ ಆಡುವುದನ್ನು ನೋಡಲು ಇಚ್ಛಿಸುವುದಾಗಿ ಪಿಸಿಬಿ ಚೇರ್ಮನ್ ಹೇಳಿದರು.

‘ಸಮಸ್ಯೆಗಳು ಇರಲಾರವು ಅಂತೇನಿಲ್ಲ, ಅದರೆ ಸಮಸ್ಯೆ ಮತ್ತು ಸೋಲುಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ತಂಡದಲ್ಲಿ ತಮ್ಮ ಸ್ಥಾನಗಳ ಭದ್ರತೆ ಬಗ್ಗೆ ಯೋಚಿಸುವದನ್ನು ಬಿಟ್ಟು ನಿರ್ಭೀತಿಯ ಕ್ರಿಕೆಟ್ ಆಡುವಂತೆ ಅವರಿಗೆ ಸೂಚಿಸಿದ್ದೇನೆ,’ ಎಂದು ರಾಜಾ ಹೇಳಿದರು.

ಪಿಸಿಬಿ ಚೇರ್ಮನ್ ಹುದ್ದೆಗೆ ಅವಿರೋಧವಾಗಿ ಆಯ್ಕೆ ಆಗಿರುವ ರಾಜಾ, ಕ್ರಿಕೆಟ್​ನಲ್ಲಿ ಈ ಚೇರ್ಮನ್ ಹುದ್ದೆ ನಿಭಾಯಿಸುವುದು ಅತ್ಯಂತ ಕಷ್ಟಕರ ಅಂತ ಹೇಳಿದರು.

‘ಬಹು ದೊಡ್ಡ ಸವಾಲಿನ ಜವಾಬ್ದಾರಿ ಇದಾಗಿದೆ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಈ ಜವಾಬ್ದಾರಿಯನ್ನು ನನಗೆ ವಹಿಸಿಕೊಡುವ ಮೊದಲು ಹಲವಾರು ಖಾಲಿ ಬಾಕ್ಸ್​ಗಳನ್ನು ಟಿಕ್ ಮಾಡಬೇಕಿತ್ತು,’ ಎಂದು ರಾಜಾ ಹೇಳಿದರು.

ಇದನ್ನೂ ಓದಿ:  ಐಪಿಎಲ್ ನಂತರ 3 ಬಾರಿ ಬಯೋ ಬಬಲ್ ವಿಫಲ! ಕ್ರಿಕೆಟ್​ ಲೋಕದೊಳಗೆ ಕೊರೊನಾ ಎಂಟ್ರಿ; ಇದಕ್ಕೆಲ್ಲ ಯಾರು ಹೊಣೆ?