
ಕ್ರಿಕೆಟ್ನ ಕಾಶಿ ಎಂದೇ ಕರೆಯಲ್ಪಡುವ ಲಂಡನ್ನ ಐತಿಹಾಸಿಕ ಲಾರ್ಡ್ಸ್ ಮೈದಾನ ಮತ್ತೊಮ್ಮೆ ಭಾರತೀಯ ಕ್ರಿಕೆಟ್ನ ಐತಿಹಾಸಿಕ ಮತ್ತು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬುಧವಾರ (ಆಗಸ್ಟ್ 19) ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಮಿಕ್ಸ್ಡ್ ಡಿಸಾಬಿಲಿಟಿ ಕ್ರಿಕೆಟ್ ಟೀಮ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಭಾರತೀಯ ಆಟಗಾರರು ಲಾರ್ಡ್ಸ್ ಬಾಲ್ಕನಿಯಲ್ಲಿ ನಿಂತು ತಮ್ಮ ಟಿ-ಶರ್ಟ್ಗಳನ್ನು ಗಾಳಿಯಲ್ಲಿ ಬೀಸುವ ಮೂಲಕ, 2002ರಲ್ಲಿ ಸೌರವ್ ಗಂಗೂಲಿ ಮಾಡಿದ ಐತಿಹಾಸಿಕ ಸಂಭ್ರಮಾಚರಣೆಯನ್ನು ಮರುಸೃಷ್ಟಿಸಿದ್ದಾರೆ!
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ಗಳ ಬೃಹತ್ ಮೊತ್ತ ಪೇರಿಸಿತು. ಅರ್ಜುನ್ ಗಾವ್ರೆ ಕೇವಲ 44 ಎಸೆತಗಳಲ್ಲಿ 68 ರನ್ ಬಾರಿಸಿ ತಂಡಕ್ಕೆ ಬಲ ತುಂಬಿದರೆ, ನಾಯಕ ಮಜೀದ್ ಮಗ್ರಾಯ್ ಬಿರುಗಾಳಿ ಬ್ಯಾಟಿಂಗ್ ನಡೆಸಿ ಕೇವಲ 19 ಎಸೆತಗಳಲ್ಲಿ ಅಜೇಯ 63 ರನ್ ಚಚ್ಚಿದರು. ಈ ಮೂಲಕ ಆತಿಥೇಯ ತಂಡಕ್ಕೆ 207 ರನ್ಗಳ ಗುರಿ ನೀಡಿದರು.
207 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 88 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಹಿಲಾಲ್ ಅಹ್ಮದ್ ವಾನಿ 21 ರನ್ ನೀಡಿ 4 ವಿಕೆಟ್ ಕಸಿದರೆ, ಜಯೇಶ್ ಪರ್ಮಾರ್ 3 ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಈ ಮೂಲಕ ಟೀಮ್ ಇಂಡಿಯಾ 118 ರನ್ಗಳ ಐತಿಹಾಸಿಕ ಗೆಲುವು ದಾಖಲಿಸಿತು. ಈ ಪಂದ್ಯವನ್ನು ಇಂಗ್ಲೆಂಡ್ ಸೋತರೂ, ಒಟ್ಟಾರೆ ಸರಣಿಯನ್ನು 4-3 ರಿಂದ ತನ್ನದಾಗಿಸಿಕೊಂಡಿತು.
ಪಂದ್ಯ ಮುಗಿಯುತ್ತಿದ್ದಂತೆ ಭಾರತೀಯ ಆಟಗಾರರು ಮತ್ತು ಅಧಿಕಾರಿಗಳು ಲಾರ್ಡ್ಸ್ನ ಪ್ರಸಿದ್ಧ ಬಾಲ್ಕನಿಯಲ್ಲಿ ಜಮಾಯಿಸಿದರು. 24 ವರ್ಷಗಳ ಹಿಂದೆ (2002ರ ನ್ಯಾಟ್ವೆಸ್ಟ್ ಸರಣಿ ಫೈನಲ್ ಗೆಲುವಿನ ನಂತರ) ಅಂದಿನ ನಾಯಕ ಸೌರವ್ ಗಂಗೂಲಿ ಇಂಗ್ಲೆಂಡ್ಗೆ ತಿರುಗೇಟು ನೀಡಲು ಜೆರ್ಸಿ ಬಿಚ್ಚಿ ಗಾಳಿಯಲ್ಲಿ ಹಾರಿಸಿದ್ದನ್ನು ಇಡೀ ವಿಶ್ವವೇ ನೆನಪಿಸಿಕೊಳ್ಳುವಂತೆ ಈ ಆಟಗಾರರು ಮಾಡಿದರು.
ತಮ್ಮ ಬ್ಲೇಜರ್ಗಳನ್ನು ಕಳಚಿ, ಟಿ-ಶರ್ಟ್ಗಳನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಬೀಸುತ್ತಾ ಆಟಗಾರರು ಜಯಘೋಷ ಮೊಳಗಿಸಿದರು. ಡಿಫರೆಂಟ್ಲಿ ಏಬಲ್ಡ್ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ (DCCI) ಹಂಚಿಕೊಂಡಿರುವ ಈ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದೆ.
लार्ड्स की बालकनी में सौरव गांगुली मूवमेंट… भारतीय मिक्स्ड डिसेबिलिटी टीम ने लार्ड्स में इंग्लैंड की टीम को आसानी से पराजित किया तो उनके खिलाड़ियों ने टीशर्ट उतारकर जश्न मनाया। pic.twitter.com/rZukhY1lyZ
— Abhishek Tripathi / अभिषेक त्रिपाठी (@abhishereporter) August 19, 2026
ಮಿಕ್ಸ್ಡ್ ಡಿಸಾಬಿಲಿಟಿ ಕ್ರಿಕೆಟ್ ಟೀಮ್ ಎಂದರೆ ದೈಹಿಕ ವಿಭಿನ್ನ ಸಾಮರ್ಥ್ಯದ ಆಟಗಾರರನ್ನು ಒಳಗೊಂಡ ತಂಡ. ಅಂದರೆ ಈ ತಂಡವು ದೈಹಿಕ ವಿಕಲಚೇತನರು, ಶ್ರವಣದೋಷವುಳ್ಳವರು ಮತ್ತು ಕಲಿಕಾ ನ್ಯೂನತೆ ಹೊಂದಿರುವ ಆಟಗಾರರನ್ನು ಒಳಗೊಂಡಿರುತ್ತದೆ. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು, ದೇಶಕ್ಕಾಗಿ ಆಡಿ, ಕ್ರಿಕೆಟ್ನ ಅತ್ಯುನ್ನತ ಮೈದಾನದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದ ಈ ಆಟಗಾರರ ಸಾಧನೆ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ.