ಡಬ್ಲ್ಯೂಎಫ್ಇಬಿ ವಿಶ್ವ ಶೃಂಗಸಭೆ: ಕ್ರೀಡೆಯಲ್ಲಿ ನೈತಿಕತೆ, ನಾಯಕತ್ವದ ಬಗ್ಗೆ ಗುರುದೇವ್ ಶ್ರೀ ಶ್ರೀ ರವಿಶಂಕರ್ ಮಾತು
ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಅವರು ಕ್ರೀಡೆಯಲ್ಲಿ ನೀತಿ ಮತ್ತು ನಾಯಕತ್ವದ ಮಹತ್ವವನ್ನು ಒತ್ತಿಹೇಳಿದ್ದಾರೆ. ವಿಶ್ವ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಗೆಲುವು ಮತ್ತು ಸೋಲನ್ನು ಆಚರಿಸುವುದು, ಮಾನಸಿಕ ಆರೋಗ್ಯ, ಮತ್ತು ಕ್ರೀಡೆಯಲ್ಲಿ ನೈತಿಕತೆಯನ್ನು ಕಾಪಾಡುವುದು ಮುಖ್ಯ ಎಂದು ಹೇಳಿದ್ದಾರೆ. ಕ್ರೀಡೆಯನ್ನು ಶಾಂತಿ ಮತ್ತು ಸಮಾನತೆಗೆ ಒಂದು ಸಾಧನವಾಗಿ ಬಳಸಬೇಕು ಎಂದಿದ್ದಾರೆ.

ಬೆಂಗಳೂರು, ಜುಲೈ 27: ಇಂದು ಯುದ್ಧಗಳನ್ನು ಕ್ರೀಡೆಗಳಂತೆ ನಡೆಸಲಾಗುತ್ತಿದೆ ಮತ್ತು ಕ್ರೀಡೆಗಳನ್ನು ಯುದ್ಧಗಳಂತೆ ಆಡಲಾಗುತ್ತಿದೆ ಎಂದು ಗುರುದೇವ್ ಶ್ರೀ ಶ್ರೀ ರವಿ ಶಂಕರ್ (Sri Sri Ravi Shankar) ಅವರು ಹೇಳಿದ್ದಾರೆ. ಕ್ರೀಡೆಯಲ್ಲಿ ನೈತಿಕತೆ ಮತ್ತು ನಾಯಕತ್ವದ ಬಗ್ಗೆ ಡಬ್ಲ್ಯೂಎಫ್ಇಬಿ (WFEB)ಯ 7ನೇ ವಿಶ್ವ ಶೃಂಗಸಭೆಯಲ್ಲಿ ಜಾಗತಿಕ ಸಂವಾದ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ವರ್ಲ್ಡ್ ಫೋರಮ್ ಫಾರ್ ಎಥಿಕ್ಸ್ ಇನ್ ಬಿಸಿನೆಸ್ ಆಯೋಜಿಸಿದ್ದ ಕ್ರೀಡೆಯಲ್ಲಿ ನೀತಿ ಮತ್ತು ನಾಯಕತ್ವದ ಕುರಿತಾದ 7ನೇ ವಿಶ್ವ ಶೃಂಗಸಭೆಯು ಕ್ರೀಡೆ, ರಾಜಕೀಯ, ವ್ಯವಹಾರ, ಶೈಕ್ಷಣಿಕ, ಎನ್ಜಿಒಗಳು ಮತ್ತು ಚಿಂತಕರನ್ನು ಜಗತ್ತಿನ ಎಲ್ಲೆಡೆಗಳಿಂದ ಸೆಳೆಯಿತು. ಮೌಲ್ಯಗಳನ್ನು ರಾಜಿ ಮಾಡಿಕೊಂಡು ಯಶಸ್ಸನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಸಾಧ್ಯವಿದೆಯೇ; ಮತ್ತು ಹೆಚ್ಚಿನ ಒತ್ತಡವಿರುವ ಈ ಜಗತ್ತಿನಲ್ಲಿ ಸಮಗ್ರತೆಯನ್ನು ಕಾಪಾಡಿಕೊಂಡು ಯಶಸ್ಸು ಸಾಧಿಸುವುದು ಹೇಗೆ ಎಂಬುದರ ಕುರಿತು ಚಿಂತನಶೀಲ ವಿಚಾರ-ವಿನಿಮಯ ನಡೆಸಲಾಯಿತು.
ಸೋಲು-ಗೆಲವು ಎರಡನ್ನೂ ಆಚರಿಸಲು ಕಲಿಯಬೇಕು: ಗುರುದೇವ್
ಈ ವೇಳೆ ಮಾತನಾಡಿದ ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಅವರು, ‘ಕ್ರೀಡೆಗಳಲ್ಲಿ ನೀವು ಗೆಲ್ಲುತ್ತೀರಿ ಅಥವಾ ಇತರರು ಗೆಲ್ಲುವಂತೆ ಮಾಡುತ್ತೀರಿ. ನಾವು ಎರಡನ್ನೂ ಆಚರಿಸಲು ಕಲಿಯಬೇಕು. ಆಡುವ ಕ್ರಿಯೆಯೇ ಸಂತೋಷವನ್ನು ತರುತ್ತದೆ. ನಾವು ಇದನ್ನು ಅರ್ಥಮಾಡಿಕೊಂಡಾಗ, ನಾವು ಕ್ರೀಡೆಗಳಲ್ಲಿ ಸ್ವಾಭಾವಿಕವಾಗಿಯೇ ನೈತಿಕತೆಯಿಂದಿರುತ್ತೇವೆ, ಇಲ್ಲದಿದ್ದರೆ ಕ್ರೀಡಾ ಮೈದಾನಗಳು ಹಿಂಸಾತ್ಮಕವಾಗಿ ಬದಲಾಗುವುದನ್ನು ನಾವು ಕಾಣುತ್ತೇವೆ’ ಎಂದರು.
ಮಾನಸಿಕ ಆರೋಗ್ಯ ವಹಿಸುವ ಪಾತ್ರದ ಬಗ್ಗೆ ಮಾತನಾಡಿದ ಗುರುದೇವರು, ‘ಒಂದು ಮಗುವು ನಡೆಯಲು ಪ್ರಾರಂಭಿಸುವ ಮೊದಲೇ ಆಟವಾಡಲು ಪ್ರಾರಂಭಿಸುತ್ತದೆ. ಕ್ರೀಡೆ ನಮಗೆ ಅಷ್ಟೊಂದು ಸ್ವಾಭಾವಿಕವಾಗಿರುವಾಗ, ಇಂದು ನಾವು ಎಲ್ಲಿ ಎಡವಿದ್ದೇವೆ? ಎಂದು ಹಂಚಿಕೊಂಡರು. ಕ್ರೀಡೆ ಮತ್ತು ಸಂಗೀತದ ಹೊರತಾಗಿಯೂ, ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಒಂಟಿತನ, ಖಿನ್ನತೆ ಮತ್ತು ಅತೃಪ್ತಿಯನ್ನು ಅನುಭವಿಸುತ್ತಿದ್ದಾರೆ ಎಂಬ ಅಂಶದತ್ತ ಬೊಟ್ಟು ಮಾಡುತ್ತಾ ಇದು ಯೋಚಿಸಬೇಕಾದ ವಿಷಯ. ನಾವು ಇಡೀ ಜೀವನವನ್ನು ಕ್ರೀಡೆಯಾಗಿ ಸ್ವೀಕರಿಸಲು ಸಾಧ್ಯವಾದರೆ, ಜಗತ್ತಿನಲ್ಲಿ ಯಾವುದೇ ಯುದ್ಧವಾಗಲೀ, ಬೇಗುದಿಯಾಗಲೀ ಮತ್ತು ಅಪನಂಬಿಕೆಯಾಗಲೀ ಇರುವುದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Duologue with Barun Das: ಶ್ರೀ ಶ್ರೀ ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್ ಸಂವಾದ
ಕ್ರೀಡೆಗಳಲ್ಲಿ ದಾಖಲೆಗಳು ಮತ್ತು ಚರಿತ್ರೆ ಸೃಷ್ಟಿ ಲೋಸುಗ ನೈತಿಕ ಉಲ್ಲಂಘನೆಗಳು ನಡೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಇವು ಆಗಾಗ್ಗೆ ಪರಿಶೀಲನೆಗೆ ಒಳಪಡುತ್ತಿದ್ದು, ವೀಕ್ಷಕರ ನಂಬಿಕೆಯನ್ನು ಕುಗ್ಗಿಸುತ್ತವೆ. ಅದೇ ಸಮಯದಲ್ಲಿ, ಕ್ರೀಡಾ ಮನೋಭಾವ, ಕ್ರೀಡೆಯಲ್ಲಿ ಶ್ರೇಷ್ಠತೆ ಮತ್ತು ನೈತಿಕತೆಯು ಆಟದಲ್ಲಿನ ಹುರುಪನ್ನು ಹೇಗೆ ಹೆಚ್ಚಿಸುತ್ತದೆ ಹಾಗೂ ಇಡೀ ಪೀಳಿಗೆಯನ್ನು ಹೇಗೆ ಒಗ್ಗೂಡಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.
ಶಾಂತಿ ನಿರ್ಮಾಣ, ಲಿಂಗ ಸಮಾನತೆ, ಮಾನಸಿಕ ಆರೋಗ್ಯ, ಅತ್ಯುತ್ತಮ ಮಟ್ಟದ ಕಾರ್ಯಕ್ಷಮತೆ ಮತ್ತು ದೀರ್ಘಾಯುಷ್ಯಗಳಿಗಾಗಿ ಕ್ರೀಡೆಯನ್ನು ಒಂದು ಸಾಧನವನ್ನಾಗಿ ಹೇಗೆ ಬಳಸಬಹುದು ಮತ್ತು ಕ್ರೀಡೆಯಲ್ಲಿ ಮಾತ್ರವಲ್ಲದೆ ಜೀವನ ಮತ್ತು ನಾಯಕತ್ವದಲ್ಲಿಯೂ ಉತ್ಕೃಷ್ಟತೆಯನ್ನು ಹೇಗೆ ಸಾಧಿಸುವುದು ಎಂಬುದರ ಕುರಿತು ಶೃಂಗಸಭೆಯು ಗಹನವಾದ ಚರ್ಚೆಗಳನ್ನು ಆಯೋಜಿಸಿತು. ಆಟದ ಮೈದಾನದಲ್ಲಿ ಕಲಿಯುವಂತಹ ನ್ಯಾಯಯುತ ಆಟ, ತಂಡದ ಮನೋಭಾವ ಮತ್ತು ಸಹಿಷ್ಣುತೆಯಂತಹ ಪಾಠಗಳು, ರಾಜಕೀಯ ಮತ್ತು ವ್ಯವಹಾರದಲ್ಲಿ ನೈತಿಕ ನಾಯಕತ್ವವನ್ನು ಹೇಗೆ ರೂಪಿಸಬಹುದು ಎಂಬುದರ ಬಗ್ಗೆ ಸಹ ಅನ್ವೇಷಿಸಲಾಯಿತು.
ನೀತಿಯಿಲ್ಲದ ಯಶಸ್ಸು ದುರ್ಬಲ: ಹನಿ ಥಾಲ್ಜೀಹ್
ಅಡೆತಡೆಗಳನ್ನು ಮುರಿಯುವಲ್ಲಿ ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಕ್ರೀಡೆಗಳು ವಹಿಸಬಹುದಾದ ಪಾತ್ರದ ಬಗ್ಗೆ ಗಮನ ಸೆಳೆದ ಪ್ಯಾಲೆಸ್ಟೀನಿಯನ್ ಮಹಿಳಾ ಫುಟ್ಬಾಲ್ ತಂಡದ ಮೊದಲ ನಾಯಕಿ ಹನಿ ಥಾಲ್ಜೀಹ್ ಮಾತನಾಡಿ, ‘ಉದ್ದೇಶವಿಲ್ಲದ ಪ್ರದರ್ಶನವು ಟೊಳ್ಳಾಗಿದೆ. ನೀತಿಯಿಲ್ಲದ ಯಶಸ್ಸು ದುರ್ಬಲವಾಗಿದೆ. ಜವಾಬ್ದಾರಿಯಿಲ್ಲದ ಶಕ್ತಿಯು ಅಪಾಯಕಾರಿಯಾದದ್ದು’ ಎಂದರು.
‘ನಿಜವಾದ ಯಶಸ್ಸು ಎಂದರೆ ಬರೀ ಟ್ರೋಫಿಗಳನ್ನು ಎತ್ತುವುದಲ್ಲ, ಬದಲಾಗಿ ದಾರಿಯುದ್ದಕ್ಕೂ ನಾವು ಮೇಲೆತ್ತುವ ಜೀವನಗಳ ಬಗ್ಗೆ ಇರುವಂಥದ್ದು. ಏಕೆಂದರೆ ಕ್ರೀಡೆ ಪ್ರತ್ಯೇಕವಾಗಿ ಇರುವಂಥದ್ದಲ್ಲ. ಅದು ಸಮಾಜವನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.
ಒಂದು ವಿಶಿಷ್ಟ ಅಧಿವೇಶನದಲ್ಲಿ ಪ್ಯಾನೆಲಿಸ್ಟ್ಗಳು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಕ್ರೀಡಾಪಟುಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ವಸ್ತುಗಳನ್ನು ಬಳಸಲು ಅನುವು ಮಾಡಿಕೊಡುವ ಉನ್ನತ ಮಟ್ಟದ ಕ್ರೀಡೆಯ ಬಗ್ಗೆ ಚರ್ಚಿಸಿದರು. ಕೆಲವರು ಇದನ್ನು ಮಾನವ ಸಾಧನೆಯ ಭವಿಷ್ಯ ಎಂದು ಹೇಳಿದರೆ, ಇತರರು ಇದನ್ನು ನೈತಿಕ ಕುಸಿತವೆಂದು ವ್ಯಾಖ್ಯಾನಿಸಿದರು.
ಕ್ರೀಡಾ ಮನೋಭಾವ ಮತ್ತು ನೈತಿಕತೆಯಲ್ಲಿ ಮಾನದಂಡವನ್ನು ನಿಗದಿಪಡಿಸುವ ಪ್ರದರ್ಶನಗಳನ್ನು ಎಥಿಕ್ಸ್ ಇನ್ ಸ್ಪೋರ್ಟ್ಸ್ ಪ್ರಶಸ್ತಿಗಳು ಗುರುತಿಸಿವೆ. ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆ ಝೆರ್ಡಾನ್ ಶಕಿರಿ ಅವರಿಗೆ, ‘ಕ್ರೀಡೆಯ ಮೂಲಕ ಏಕೀಕರಣ, ನ್ಯಾಯಸಮ್ಮತತೆ ಮತ್ತು ಅಂತರಸಾಂಸ್ಕೃತಿಕ ಸಂವಾದಕ್ಕೆ ಅವರ ದೀರ್ಘಕಾಲದ ಬದ್ಧತೆ’ಗಾಗಿ ಅತ್ಯುತ್ತಮ ವ್ಯಕ್ತಿಗತ ಪ್ರಶಸ್ತಿಯನ್ನು ನೀಡಲಾಯಿತು.
ಇದನ್ನೂ ಓದಿ: 70 ಗಂಟೆ ಕೆಲಸ ಮಾಡುವುದಕ್ಕಿಂತ, ಎಷ್ಟು ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎನ್ನುವುದು ಮುಖ್ಯ: ರವಿಶಂಕರ್ ಗುರೂಜಿ
ವಿಶ್ವಸಂಸ್ಥೆಯಲ್ಲಿ ವಿಶೇಷ ಸಲಹಾ ಸ್ಥಾನಮಾನವನ್ನು ಹೊಂದಿರುವ, ವ್ಯವಹಾರದಲ್ಲಿ ನೈತಿಕತೆಗಾಗಿ ವಿಶ್ವ ವೇದಿಕೆಯು (ವರ್ಲ್ಡ್ ಫೋರಮ್ ಫಾರ್ ಎಥಿಕ್ಸ್ ಇನ್ ಬಿಸಿನೆಸ್) ಎರಡು ದಶಕಗಳಿಗೂ ಹೆಚ್ಚು ಕಾಲ ನೈತಿಕ ವಕಾಲತ್ತುಗಳಲ್ಲಿ ಮುಂಚೂಣಿಯಲ್ಲಿದೆ. ಗುರುದೇವ್ ಶ್ರೀ ಶ್ರೀ ರವಿ ಶಂಕರ್ ರವರ ದೃಷ್ಟಿಕೋನದಡಿಯಲ್ಲಿ, ಮೌಲ್ಯಗಳು ಮತ್ತು ಕಾರ್ಯಕ್ಷಮತೆ ವಿರುದ್ಧವಾದುದಲ್ಲ, ಅವುಗಳು ಅವಿಭಾಜ್ಯ ಸಹಯೋಗಿಗಳು ಎಂಬ ಸಂದೇಶವನ್ನು ಪ್ರಚಾರ ಮಾಡಲು WFEB ಯು ಯುರೋಪಿಯನ್ ಪಾರ್ಲಿಮೆಂಟ್, FIFA, ಮ್ಯಾಕ್ಸ್ ಪ್ಲಾಂಕ್ ಸಂಸ್ಥೆ ಮತ್ತು ಜಿನೀವಾದಲ್ಲಿ UN ನಂತಹ ಜಾಗತಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಇನ್ನು ಶೃಂಗಸಭೆಯಲ್ಲಿ ಏಳು ಖಂಡಗಳ ಅತ್ಯುನ್ನತ ಶಿಖರಗಳನ್ನು ಏರಿದ 17 ವರ್ಷದ ಪರ್ವತಾರೋಹಣ ಪ್ರತಿಭೆ ಕಾಮ್ಯ ಕಾರ್ತಿಕೇಯನ್, ಒಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು 400 ಮೀಟರ್ ಹರ್ಡಲ್ಸ್ನಲ್ಲಿ ಮಾಜಿ ವಿಶ್ವ ದಾಖಲೆ ಹೊಂದಿರುವ ಕೆವಿನ್ ಯಂಗ್, ಉಕ್ರೇನ್ನ ಸಂಸತ್ ಸದಸ್ಯೆ ಗೌರವಾನ್ವಿತ ಸ್ವ್ಯಾಟೋಸ್ಲಾವ್ ಯುರಾಶ್, ಪ್ಯಾಲೆಸ್ಟೀನಿಯನ್ ಫುಟ್ಬಾಲ್ ಪ್ರವರ್ತಕ ಹನಿ ಥಾಲ್ಜೀಹ್, ಯುರೋ 96 ಚಾಂಪಿಯನ್ ಮತ್ತು ಟಿವಿ ವ್ಯಕ್ತಿತ್ವ ಥಾಮಸ್ ಹೆಲ್ಮರ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುದುರೆ ಸವಾರರಾದ ದಿವ್ಯಕೃತಿ ಸಿಂಗ್ ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:08 am, Sun, 27 July 25
