
ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದೆ. ಮೊದಲ ಮ್ಯಾಚ್ನಲ್ಲಿ 34 ರನ್ಗಳಿಂದ ಸೋತಿದ್ದ ಭಾರತ ತಂಡ ದ್ವಿತೀಯ ಪಂದ್ಯದಲ್ಲಿ 1 ರನ್ನಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ ಸರಣಿ ಸೋತಿದೆ. ಈ ಸೋಲಿನ ಬಗ್ಗೆ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗುತ್ತಿದೆ. ಇಲ್ಲಿ ಟೀಮ್ ಇಂಡಿಯಾದ ಈ ಆಘಾತಕಾರಿ ವೈಫಲ್ಯಕ್ಕೆ ಕಾರಣವಾದ ಪ್ರಮುಖ ಅಂಶಗಳನ್ನು ನೋಡುವುದಾದರೆ…
ಭಾರತದ ಫ್ಲಾಟ್ ಮತ್ತು ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಆಡಿ ಬಂದಿದ್ದ ಟೀಮ್ ಇಂಡಿಯಾ ಆಟಗಾರರಿಗೆ, ಬೆಲ್ಫಾಸ್ಟ್ನ ಮಂದಗತಿಯ ಮತ್ತು ಅನಿರೀಕ್ಷಿತ ಬೌನ್ಸ್ ಹೊಂದಿದ್ದ ಪಿಚ್ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚೆಂಡು ನಿಧಾನವಾಗಿ ಬ್ಯಾಟ್ಗೆ ಬರುತ್ತಿದ್ದರಿಂದ ಭಾರತದ ಪ್ರಮುಖ ಆಟಗಾರರು ರನ್ ಗಳಿಸಲು ತಿಣುಕಾಡಿದರು.
ಈ ಪಿಚ್ನ ಅತ್ಯಂತ ಅಪಾಯಕಾರಿ ಗುಣವೆಂದರೆ ಅದು ‘ಟೂ-ಪೇಸ್ಡ್’ ಆಗಿತ್ತು. ಅಂದರೆ, ಬೌಲರ್ ಎಸೆದ ಎಲ್ಲಾ ಚೆಂಡುಗಳು ಒಂದೇ ವೇಗದಲ್ಲಿ ಬ್ಯಾಟ್ಗೆ ಬರುತ್ತಿರಲಿಲ್ಲ. ಕೆಲವೊಮ್ಮೆ ಚೆಂಡು ನಿರೀಕ್ಷೆಗಿಂತ ವೇಗವಾಗಿ ಬಂದರೆ, ಇನ್ನು ಕೆಲವು ಎಸೆತಗಳು ಪಿಚ್ಗೆ ಬಿದ್ದ ನಂತರ ಅತ್ಯಂತ ನಿಧಾನವಾಗಿ ಬ್ಯಾಟರ್ ಕಡೆಗೆ ಬರುತ್ತಿದ್ದವು.
ಆದರೆ ಐಪಿಎಲ್ನ ಫ್ಲಾಟ್ ಪಿಚ್ಗಳ ಗುಂಗಿನಲ್ಲೇ ಇದ್ದ ಭಾರತೀಯ ಬ್ಯಾಟರ್ಗಳು, ಐರ್ಲೆಂಡ್ನ ಮಂದಗತಿಯ ಪಿಚ್ನಲ್ಲಿ ಕ್ರೀಸ್ನಲ್ಲಿ ಸೆಟ್ ಆಗಲು ಸಮಯ ತೆಗೆದುಕೊಳ್ಳಲೇ ಇಲ್ಲ. ಪಿಚ್ ಹೇಗಿದೆ ಎಂದು ಅರಿಯುವ ಮುನ್ನವೇ ಮೊದಲ ಓವರ್ನಿಂದಲೇ ದೊಡ್ಡ ಶಾಟ್ಗಳನ್ನು ಹೊಡೆಯಲು ಮುಂದಾಗಿದ್ದರು. ಇದಕ್ಕೆ ಸಾಕ್ಷಿ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮೊದಲ ಓವರ್ನಲ್ಲೇ ಶೂನ್ಯಕ್ಕೆ ಔಟಾಗಿದ್ದು.
ಭಾರತೀಯ ಬ್ಯಾಟರ್ಗಳು ಐರ್ಲೆಂಡ್ನ ಮೈದಾನದ ಆಯಾಮಗಳು ಮತ್ತು ಹವಾಮಾನಕ್ಕೆ ಹೊಂದಿಕೊಳ್ಳಲು ವಿಫಲರಾದರು ಎಂದು ಸ್ವತಃ ಅಭಿಷೇಕ್ ಶರ್ಮಾ ಒಪ್ಪಿಕೊಂಡಿದ್ದಾರೆ. ಬೆಲ್ಫಾಸ್ಟ್ ಮೈದಾನದ ಸ್ಕ್ವೇರ್ ಬೌಂಡರಿಗಳು ದೊಡ್ಡದಾಗಿದ್ದವು ಮತ್ತು ಗಾಳಿ ಜೋರಾಗಿತ್ತು. ಐರ್ಲೆಂಡ್ ಬೌಲರ್ಗಳು ಭಾರತೀಯರನ್ನು ನೇರವಾಗಿ ಹೊಡೆಯಲು ಬಿಡದೆ, ಸೈಡ್ ಬೌಂಡರಿ ಕಡೆ ಆಡುವಂತೆ ಬೌಲಿಂಗ್ ಮಾಡಿದರು. ಇದರಿಂದಾಗಿ ಭಾರತದ ಬಹುತೇಕ ಬ್ಯಾಟರ್ಗಳು ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾದರು.
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮತ್ತು ಮ್ಯಾನೇಜ್ಮೆಂಟ್ ತೆಗೆದುಕೊಂಡ ಕೆಲವು ನಿರ್ಧಾರಗಳು ತೀವ್ರ ಟೀಕೆಗೆ ಗುರಿಯಾಗಿವೆ. ಮೊದಲ ಪಂದ್ಯದಲ್ಲಿ 51 ರನ್ಗಳಿಗೆ 4 ವಿಕೆಟ್ ಪಡೆದು ಐರ್ಲೆಂಡ್ ಅನ್ನು ಕಟ್ಟಿಹಾಕಿದ್ದಾಗ, ವೇಗಿ ಪ್ರಸಿದ್ಧ್ ಕೃಷ್ಣ ಅವರ ದುಬಾರಿ ಓವರ್ಗಳಿಂದಾಗಿ ಐರ್ಲೆಂಡ್ 180 ರನ್ ದಾಟಲು ಸಾಧ್ಯವಾಯಿತು.
ಮತ್ತೊಂದೆಡೆ ಐಪಿಎಲ್ನಲ್ಲಿ 776 ರನ್ ಸಿಡಿಸಿ ಫಾರ್ಮ್ನಲ್ಲಿದ್ದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಬೆಂಚ್ ಕಾಯಿಸಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
ಅಂದರೆ ಇನ್ ಫಾರ್ಮ್ನಲ್ಲಿರುವ ಆಟಗಾರರನ್ನು ಕಣಕ್ಕಿಳಿಸದೇ ಟೀಮ್ ಇಂಡಿಯಾ ತಪ್ಪು ಮಾಡಿರುವುದು ಸ್ಪಷ್ಟ. ಅದರಲ್ಲೂ ಟಿ20 ಕ್ರಿಕೆಟ್ನಲ್ಲಿ ಕಳಪೆ ದಾಖಲೆ ಹೊಂದಿರುವ ಪ್ರಸಿದ್ಧ್ ಕೃಷ್ಣ ಅವರನ್ನು ಯಾವ ಮಾನದಂಡದ ಮೇಲೆ ಗಂಭೀರ್ ಟೀಮ್ ಇಂಡಿಯಾಗೆ ಆಯ್ಕೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪ್ರಶ್ನೆಗಳೆದ್ದಿವೆ. ಇದರ ಜೊತೆಗೆ ಔಟ್ ಫಾರ್ಮ್ನಲ್ಲಿರುವ ಅಕ್ಷರ್ ಪಟೇಲ್ ಹೇಗೆ ಆಡುವ ಬಳಗಕ್ಕೆ ಆಯ್ಕೆಯಾಗಿದ್ದಾರೆ ಎಂಬುದೇ ಅಚ್ಚರಿ.
ಎರಡೂ ಪಂದ್ಯಗಳ ಚೇಸಿಂಗ್ ವೇಳೆ ಆರಂಭಿಕ ವಿಕೆಟ್ಗಳು ಬಿದ್ದ ತಕ್ಷಣ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ತೀವ್ರ ಒತ್ತಡಕ್ಕೆ ಒಳಗಾದರು. ಸ್ಟ್ರೈಕ್ ರೊಟೇಟ್ ಮಾಡುವ ಬದಲು ಸತತ ಡಾಟ್ ಬಾಲ್ಗಳನ್ನು ಆಡಿ ಒತ್ತಡವನ್ನು ಹೆಚ್ಚಿಸಿಕೊಂಡರು. ಎರಡನೇ ಪಂದ್ಯದಲ್ಲಿ ಕೇವಲ 155 ರನ್ಗಳ ಸುಲಭ ಗುರಿ ಇದ್ದರೂ, ಕೊನೆಯ ಓವರ್ಗಳಲ್ಲಿ ಆತುರಪಟ್ಟು ವಿಕೆಟ್ ಕಳೆದುಕೊಂಡು ಕೇವಲ 1 ರನ್ನಿಂದ ಪಂದ್ಯ ಸೋತಿದ್ದು ಆಟಗಾರರ ಮಾನಸಿಕ ವೈಫಲ್ಯವನ್ನು ತೋರಿಸುತ್ತದೆ.
ಇದನ್ನೂ ಓದಿ: ಸಿರಾಜ್ರನ್ನು ಕೈ ಬಿಟ್ಟಿದ್ದೇಕೆ? ಟೀಮ್ ಇಂಡಿಯಾ ಮಾಜಿ ಆಟಗಾರನ ಪ್ರಶ್ನೆ
ಒಟ್ಟಾರೆಯಾಗಿ ಹೇಳುವುದಾದರೆ, ಬೆಲ್ಫಾಸ್ಟ್ನ ಈ ಪರಾಜಯವು ಟೀಮ್ ಇಂಡಿಯಾ ಪಾಲಿಗೆ ಒಂದು ಕಠಿಣ ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಐಪಿಎಲ್ ತರಹದ ಫ್ಲಾಟ್ ಪಿಚ್ಗಳ ಬ್ಯಾಟಿಂಗ್ ಶೈಲಿಯನ್ನು ನೆಚ್ಚಿಕೊಳ್ಳದೆ, ವಿದೇಶಿ ಮಣ್ಣಿನ ಕಠಿಣ ಹವಾಮಾನ ಮತ್ತು ಅನಿರೀಕ್ಷಿತ ಪಿಚ್ಗಳಿಗೆ ತಕ್ಕಂತೆ ತಾಂತ್ರಿಕವಾಗಿ ಹೊಂದಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಈ ಸರಣಿ ಭಾರತಕ್ಕೆ ನೆನಪಿಸಿದೆ.