ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಶ್ರೇಯಸ್ ಅಯ್ಯರ್ ಖಡಕ್ ಸೂಚನೆ..!
Ireland vs India, 1st T20I: ಭಾರತದ ವಿರುದ್ಧ ಮೊದಲ ಟಿ20 ಪಂದ್ಯದಲ್ಲೇ ಐರ್ಲೆಂಡ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು 20 ಓವರ್ಗಳಲ್ಲಿ 182 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 18.5 ಓವರ್ಗಳಲ್ಲಿ 148 ರನ್ಗಳಿಸಿ ಆಲೌಟ್ ಆಗುವ ಮೂಲಕ 34 ರನ್ಗಳಿಂದ ಸೋಲೊಪ್ಪಿಕೊಂಡಿದೆ.

ಭಾರತ ಮತ್ತು ಐರ್ಲೆಂಡ್ ನಡುವಣ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಬೆಲ್ಫಾಸ್ಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 182 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 148 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಐರ್ಲೆಂಡ್ ತಂಡ 34 ರನ್ಗಳ ಐತಿಹಾಸಿಕ ಗೆಲುವು ದಾಖಲಿಸಿದೆ. ಇತ್ತ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾದ ನೂತನ ನಾಯಕ ಶ್ರೇಯಸ್ ಅಯ್ಯರ್, ಬೌಲಿಂಗ್ ವಿಭಾಗದಲ್ಲಿನ ತಪ್ಪುಗಳು ಹಾಗೂ ಮಧ್ಯದ ಓವರ್ಗಳಲ್ಲಿ ರನ್ ನಿಯಂತ್ರಿಸಲು ವಿಫಲವಾದದ್ದೇ ಸೋಲಿಗೆ ಪ್ರಮುಖ ಕಾರಣ ಎಂದಿದ್ದಾರೆ.
ನಾವು ಆರಂಭದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದೆವು. ಪಿಚ್ನಿಂದ ಸಿಕ್ಕ ಸ್ವಿಂಗ್ ಮತ್ತು ಲ್ಯಾಟರಲ್ ಮೂವ್ಮೆಂಟ್ ಬಳಸಿಕೊಂಡು ನಮ್ಮ ಬೌಲರ್ಗಳು 36 ರನ್ಗಳಿಗೆ 3 ವಿಕೆಟ್ ಉರುಳಿಸಿ ಐರ್ಲೆಂಡ್ ತಂಡಕ್ಕೆ ಆಘಾತ ನೀಡಿದ್ದರು. ಆದರೆ, ಆ ಬಳಿಕ ಭಾರತ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು.
ಉತ್ತಮ ಆರಂಭ ಪಡೆದರೂ, ನಮ್ಮ ಬೌಲರ್ಗಳು ಮಧ್ಯದ ಓವರ್ಗಳಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲರಾದರು. ಈ ಮೈದಾನದ ಮುಂಭಾಗದ ಬೌಂಡರಿಗಳು ಚಿಕ್ಕದಾಗಿವೆ ಎಂದು ಎಲ್ಲರಿಗೂ ಗೊತ್ತಿದೆ. ಇದಾಗ್ಯೂ ನಮ್ಮ ಬೌಲರ್ಗಳು ನೇರವಾಗಿ ಶಾಟ್ ಬಾರಿಸಲು ಹೆಚ್ಚಿನ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ ನಮಗೆ ಸಿಕ್ಕ ಆರಂಭವನ್ನು ನೋಡಿದರೆ, ಐರ್ಲೆಂಡ್ ತಂಡವನ್ನು 140 ರನ್ಗಳ ಒಳಗೆ ನಿಯಂತ್ರಿಸಬೇಕಿತ್ತು. ಹಾಗಾಗಿದ್ದಲ್ಲಿ ಈ ಪಿಚ್ನಲ್ಲಿ ಆ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದಿತ್ತು. ಆದರೆ ನಮ್ಮ ಬೌಲರ್ಗಳು ಡೆತ್ ಓವರ್ಗಳನ್ನು ಸಿಕ್ಕಾಪಟ್ಟೆ ರನ್ ನೀಡಿದ್ದಾರೆ. ಇದರಿಂದಾಗಿ ಐರ್ಲೆಂಡ್ ತಂಡಕ್ಕೆ 182 ರನ್ಗಳನ್ನು ಪೇರಿಸಲು ಸಾಧ್ಯವಾಗಿದೆ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ಅಯ್ಯರ್ ಖಡಕ್ ಸೂಚನೆ:
ಟೀಮ್ ಇಂಡಿಯಾ ದೀರ್ಘ ಬಿಡುವಿನ ನಂತರ ಮತ್ತೆ ಮೈದಾನಕ್ಕಿಳಿದಿದೆ. ಇದರಿಂದ ಆಟಗಾರರಲ್ಲಿ ತುಸು ಜಡತ್ವ ಎದ್ದು ಕಾಣುತ್ತಿತ್ತು ಎಂಬುದನ್ನು ಒಪ್ಪಿಕೊಂಡ ಶ್ರೇಯಸ್ ಅಯ್ಉರ್, ತಂಡದ ಸಹ ಆಟಗಾರರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.
ಯಾವುದೇ ಪರಿಸ್ಥಿತಿಯನ್ನು ಅಥವಾ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ. ಸುಮ್ಮನೆ ಮೈದಾನಕ್ಕೆ ಬಂದು ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಕಷ್ಟಪಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಅಲ್ಲದೆ ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡು, ಸಂಪೂರ್ಣ ಸಿದ್ಧತೆಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ ಎಂದು ಶ್ರೇಯಸ್ ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಸೋಲಿಗೆ ಕಾರಣರಾದ ‘ಇಬ್ಬರು ಭಾರತೀಯರು’
ಅಂದಹಾಗೆ ಭಾರತ ಮತ್ತು ಐರ್ಲೆಂಡ್ ನಡುವಣ 2ನೇ ಟಿ20 ಪಂದ್ಯ ಕೂಡ ಬೆಲ್ಫಾಸ್ಟ್ನಲ್ಲೇ ನಡೆಯಲಿದ್ದು, ಈ ಮ್ಯಾಚ್ ಭಾನುವಾರ (ಜೂ.28) ಜರುಗಲಿದೆ.
Published On - 8:16 am, Sat, 27 June 26




