Viral: 2.3 ಕೋಟಿ ರೂಪಾಯಿ ನೋಟಿನ ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ವಿಘ್ನ ನಿವಾರಕ

ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ದೇವರಿಗೆ ಗರಿ ಗರಿ ನೋಟುಗಳ ಹಾಗೂ ನಾಣ್ಯಗಳ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸುವಂತಹ ಸುದ್ದಿಗಳ ಕೇಳುತ್ತಲೇ ಇರುತ್ತೇವೆ. ಇದೀಗ ಇಲ್ಲೊಂದು ಕಡೆ ಗಣೇಶ ಚತುರ್ಥಿಯ ಪ್ರಯುಕ್ತ ಈ ಏರಿಯಾದಲ್ಲಿ ಕೂರಿಸಿದ ಗಣೇಶನಿಗೆ ಬರೋಬ್ಬರಿ 2.3 ಕೋಟಿ ರೂ. ಮೌಲ್ಯದ ನೋಟುಗಳಿಂದ ಅಲಂಕಾರ ಮಾಡಲಾಗಿದೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 13, 2024 | 5:55 PM

ಹಬ್ಬ ಹರಿ ದಿನಗಳ ಸಂದರ್ಭದಲ್ಲಿ ದೇವಾಲಯಗಳಲ್ಲಿ ದೇವರಿಗೆ ಹೂವುಗಳು, ಹಣ್ಣುಗಳು, ಆಭರಣಗಳು, ನೋಟು ಹಾಗೂ ನಾಣ್ಯಗಳ ವಿಶೇಷ ಅಲಂಕಾರಗಳನ್ನು ಮಾಡುವ ವಾಡಿಕೆಯಿದೆ. ದೇವರನ್ನು ಈ ವಿಶೇಷ ಅಲಂಕಾರಗಳಲ್ಲಿ ನೋಡಲೆಂದೇ ಭಕ್ತರು ಬರುತ್ತಾರೆ. ಅದೇ ರೀತಿ ಗಣೇಶ ಚತುರ್ಥಿಯ ಪ್ರಯುಕ್ತ ಇಲ್ಲೊಂದು ಕಡೆ ಗಣೇಶನಿಗೆ ಸುಮಾರು 2.3 ಕೋಟಿ ರೂ. ಮೌಲ್ಯದ ಗರಿ ಗರಿ ನೋಟುಗಳಿಂದ ವಿಶೇಷ ಅಲಂಕಾರವನ್ನು ಮಾಡಲಾಗಿದ್ದು, ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್‌ ಆಗುತ್ತಿದೆ.

ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ಗಣೇಶ ಚತುರ್ಥಿಯಂದು ಕೂರಿಸಿದ ಗಣೇಶನಿಗೆ ಕೋಟಿ ಕೋಟಿ ನೋಟುಗಳಿಂದ ಅಲಂಕಾರವನ್ನು ಮಾಡಲಾಗಿದೆ. ಇಲ್ಲಿ ಪ್ರತೀ ವರ್ಷ ಭಕ್ತರು ನೀಡುವ ಕಾಣಿಕೆಯಿಂದ ಗಣಪನಿಗೆ ನೋಟಿನ ಅಲಂಕಾರವನ್ನು ಮಾಡಲಾಗುತ್ತಿದೆ. ಇಲ್ಲಿನ ಸಂಕ ಬಾಲಾಜಿ ಗುಪ್ತಾ ಬ್ರದರ್ಸ್‌ ಮತ್ತು ಆರ್ಯ ವೈಶ್ಯ ಸಂಘ ಜಂಟಿಯಾಗಿ ಆಯೋಜಿಸುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಕೂಡಾ ಭಕ್ತರಿಂದ ಹಣ ಸಂಗ್ರಹಿಸಿ ಗಣೇಶನಿಗೆ ನೋಟುಗಳ ವಿಶೇಷ ಅಲಂಕಾರವನ್ನು ಮಾಡುತ್ತಾರೆ. ಈ ಬಾರಿ 10, 20 ರೂ. ನೋಟುಗಳಿಂದ ಹಿಡಿದು 500 ರೂಪಾಯಿ ನೋಟಿನ ವರೆಗೆ 2.3 ಕೋಟಿ ರೂಪಾಯಿಗಳ ಬಗೆ ಬಗೆ ಮಾಲೆಗಳಿಂದ ಇಂದು (ಸೆಪ್ಟೆಂಬರ್‌ 13) ಗಣೇಶನಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದೆ.

ಇದನ್ನೂ ಓದಿ: ರೀಲ್ಸ್‌ ತಂದ ಪಜೀತಿ, ಟೆರೇಸ್‌ ಮೇಲೆ ರೀಲ್ಸ್‌ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ

ಕಳೆದ 18 ವರ್ಷಗಳಿಂದ ಇಲ್ಲಿ ಉದ್ಯಮಿ ಬಾಲಾಜಿ ಗುಪ್ತಾ ನೇತೃತ್ವದಲ್ಲಿ ಗಣೇಶನಿಗೆ ನೋಟುಗಳ ವಿಶೇಷ ಅಲಂಕಾರವನ್ನು ಮಾಡಲಾಗುತ್ತಿದ್ದು, ಮೊದಲಿಗೆ ಒಂದು ಲಕ್ಷ ಮೌಲ್ಯದ ನೋಟುಗಳಿಂದ ಗಣೇಶನಿಗೆ ಅಲಂಕಾರ ಮಾಡಲಾಗಿತ್ತು. ಅಂದಿನಿಂದ ಪ್ರತಿ ವರ್ಷ ಅದರ ಮೌಲ್ಯ ಹೆಚ್ಚಾಗುತ್ತಿದ್ದು, ಕಳೆದ ವರ್ಷ 2 ಕೋಟಿ ರೂ. ನೋಟುಗಳಿಂದ ಅಲಂಕಾರ ಮಾಡಲಾಗಿತ್ತು. ಈ ಬಾರಿ ಸುಮಾರು 2.3 ಕೋಟಿ ನೋಟುಗಳಿಂದ ಗಣೇಶನನ್ನು ಅಲಂಕಾರ ಮಾಡಲಾಗಿದೆ. ಪ್ರತಿವರ್ಷ ಕೂಡಾ ನೋಟುಗಳ ಅಲಂಕಾರವನ್ನು ಮಾಡಲಾಗುತ್ತಿದ್ದು ಇಲ್ಲಿ ಯಾವುದೇ ಕಳ್ಳತನವಾಗಿರಲಿ ಅಥವಾ ಇನ್ಯಾವುದೇ ಅಹಿತಕ ಘಟನೆಗಳು ನಡೆದಿಲ್ಲ ಎಂಬುವುದು ವಿಶೇಷ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ