Video : ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ
ಮಾಯಾನಗರಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡವರು ಹಲವರು. ಆದರೆ ಕೆಲವರು ಈ ಬೆಂಗಳೂರನ್ನು ಇಷ್ಟಪಟ್ಟು, ಇಲ್ಲಿಯೇ ಉಳಿದುಕೊಂಡು ಒಂದಿಷ್ಟು ಕಾಸು ಸಂಪಾದಿಸುತ್ತಿದ್ದಾರೆ. ಇನ್ನು ಕೆಲ ಜನರು ಅನಿವಾರ್ಯ ಕಾರಣಕ್ಕೆ ಎಷ್ಟೇ ಕಷ್ಟವಾದರೂ ಸರಿಯೇ ದಿನ ದೂಡುತ್ತಿದ್ದಾರೆ. ಆದರೆ ಇಲ್ಲೊಬ್ಬರು ಯುವ ಉದ್ಯಮಿ ದಂಪತಿ ರಾಜಧಾನಿ ಬೆಂಗಳೂರನ್ನು ತೊರೆಯಲು ನಿರ್ಧರಿಸಿದ್ದಾರೆ. ಈ ದಂಪತಿ ತಮ್ಮ ನಿರ್ಧಾರ ಹಿಂದಿನ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಉದ್ಯೋಗ ಹರಸುತ್ತಾ ಬೆಂಗಳೂರಿನತ್ತ (Bengaluru) ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗೆ ಬಂದ ಜನರಲ್ಲಿ ಕೆಲವರು ಈ ದುಬಾರಿ ಬೆಂಗಳೂರಿನಲ್ಲಿ ಬದುಕುವುದು ಕಷ್ಟ, ಆರೋಗ್ಯ ಕೈಕೊಡುತ್ತಿದೆ ಹೀಗೆ ನಾನಾ ಕಾರಣಕ್ಕೆ ಬೆಂಗಳೂರನ್ನು ತೊರೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ರಾಜಧಾನಿಯಲ್ಲಿ ವಾಸವಿರುವ ಯುವ ಉದ್ಯಮಿ ಅಶ್ವಿನ್ ಹಾಗೂ ಅಪರ್ಣ (Ashwin and Aparna) ದಂಪತಿ ಬೆಂಗಳೂರನ್ನು ತೊರೆಯುವ ನಿರ್ಧಾರ ಮಾಡಿದ್ದಾರಂತೆ. ಅಷ್ಟೇ ಅಲ್ಲದೇ, ಈ ದಂಪತಿಯೂ ಆರೋಗ್ಯ ದೃಷ್ಟಿಯಿಂದ ಈ ಬೆಂಗಳೂರು ಎಷ್ಟು ಮಾರಕವಾಗಿದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ತಮ್ಮ ಈ ಕಠಿಣ ನಿರ್ಧಾರಕ್ಕೆ ಮೂಲ ಕಾರಣವೇನು? ಎನ್ನುವ ಬಗ್ಗೆ ಹೇಳಿಕೊಂಡಿದ್ದು, ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬೆಂಗಳೂರು ತ್ಯಜಿಸಿದ ದಂಪತಿ ಬಿಚ್ಚಿಟ್ಟ ಕಾರಣವಿದು
zindagified ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಉದ್ಯಮಿ ಅಶ್ವಿನಿ ಹಾಗೂ ಅಪರ್ಣ ದಂಪತಿ ತಾವು ಬೆಂಗಳೂರನ್ನು ತೊರೆದು ಹೋಗುತ್ತಿರುವ ಹಿಂದಿನ ಕಾರಣವನ್ನು ತಿಳಿಸಿದ್ದಾರೆ. ಈ ವಿಡಿಯೋದೊಂದಿಗೆ, ನಾವು ಫೆಬ್ರವರಿಯಲ್ಲಿ, ವಾಯು ಗುಣಮಟ್ಟ ಸೂಚ್ಯಂಕವನ್ನು ಪರಿಶೀಲಿಸಿದಾಗ ಅದು 297 ಕ್ಕೆ ತಲುಪಿರುವುದನ್ನು ನೋಡಿ ಶಾಕ್ ಆದೆವು. ನಮ್ಮ ಬೆಂಗಳೂರು ಅದ್ಭುತ. ಬ್ಯುಸಿನೆಸ್ ಪ್ರಾರಂಭಿಸಲು ಅತ್ಯುತ್ತಮ ಸ್ಥಳವಾಗಿದೆ. ಆದರೆ ನಾವು ಸಾಧ್ಯವಾದಷ್ಟು ಬೇಗ ಬೇರೆ ಆಯ್ಕೆಯನ್ನು ಮಾಡಬೇಕಾಗಿತ್ತು. ಈ ನಗರವು ನಮ್ಮನ್ನು ಮುಳುಗಿಸುವ ಮೊದಲು, ನಾವು ಬೆಂಗಳೂರು ತೊರೆದಿದ್ದೇವೆ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಈ ಇಬ್ಬರೂ ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡಿದ್ದು, ತಮ್ಮದೇ ಬ್ಯುಸಿನೆಸ್ ಕೂಡ ಇದೆ. ಆದರೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದೇ ತಾವು ಬೆಂಗಳೂರನ್ನು ತ್ಯಜಿಸಲು ಮುಖ್ಯ ಕಾರಣ ಎಂದಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ಈ ದಂಪತಿಗಳು ನೀವು ನಮ್ಮನ್ನು ದ್ವೇಷಿಸಬಹುದು. ಆದರೆ ಬೆಂಗಳೂರು ನಿಧಾನವಾಗಿ ನಮ್ಮನ್ನು ಕೊಲ್ಲುತ್ತಿದೆ ಎನ್ನುವ ಕಹಿ ಸತ್ಯವನ್ನು ತಿಳಿಸಿದ್ದಾರೆ.
ಆರೋಗ್ಯವು ಹದಗೆಟ್ಟಿತು ಎಂದ ದಂಪತಿ
ಬೆಂಗಳೂರಿನಲ್ಲಿ ತಾಜಾ ಗಾಳಿ ಮತ್ತು ಉತ್ತಮ ಹವಾಮಾನವಿದೆ ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ, ನಾವು ಇಲ್ಲಿಗೆ ಬಂದ ಬಳಿಕ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದೆವು. ನನಗೆ ಉಸಿರಾಟದ ತೊಂದರೆ ಮತ್ತು ಅಲರ್ಜಿಗಳು ಬಂದವು” ಎಂದು ಅಶ್ವಿನ್ ಹೇಳಿದರೆ, ಶೀತ ಕೂಡ ಬರದ ನನಗೆ ಇಲ್ಲಿಗೆ ಬಂದ ಬಳಿಕ ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದೇನೆ ಎಂದಿದ್ದಾರೆ ಅಪರ್ಣ. ಬೆಂಗಳೂರಿನ ಗಾಳಿಯ ಗುಣಮಟ್ಟವು ತಮ್ಮ ಸಮಸ್ಯೆಗಳಿಗೆ ಮೂಲ ಕಾರಣ ಎಂದು ನಮಗೆ ಅರಿವಿಗೆ ಬಂದಿತು. ಹೀಗಾಗಿ ಈ ಬೆಂಗಳೂರನ್ನು ತ್ಯಜಿಸಲು ನಿರ್ಧರಿಸಿದೆವು ಎಂದಿದ್ದಾರೆ.
ಇದನ್ನೂ ಓದಿ :Video : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ಪವಾಡ ಸದೃಶದಂತೆ ಪಾರಾದ ಮಹಿಳೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ದಂಪತಿಗಳ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ನಿಮ್ಮ ನಿರ್ಧಾರರಿಂದ ಬೆಂಗಳೂರಿಗರಿಗೆ ಖುಷಿಯಾಯಿತು, ನೀವು ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಿ ಎಂದಿದ್ದಾರೆ. ಮತ್ತೊಬ್ಬರು, ಉತ್ತಮ ನಿರ್ಧಾರ, ಈ ವಿಚಾರವನ್ನು ಎಲ್ಲೆಡೆ ತಿಳಿಸಿ, ನಿಮ್ಮೊಂದಿಗೆ ಎಲ್ಲರನ್ನು ಕರೆದುಕೊಂಡು ಹೋಗಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮತ್ತೆ ಈ ಬೆಂಗಳೂರಿಗೆ ಬರಬೇಡಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








