Viral Video: ಕಸದ ತೊಟ್ಟಿಯಲ್ಲಿ ಸಿಕ್ಕ ಡೈಮಂಡ್‌ ನೆಕ್ಲೇಸ್;‌ ಮಾಲೀಕರಿಗೆ ಹಿಂದಿರುಗಿಸಿ ಸ್ವಚ್ಛತಾ ಸಿಬ್ಬಂದಿ

ಮಾನವೀಯತೆ, ಪ್ರಾಮಾಣಿಕತೆ ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಕಸದೊಂದಿದೆ ಬಂದಿದ್ದ ಬೆಲೆಬಾಳುವ ವಜ್ರದ ನೆಕ್ಲೇಸ್‌ ಅನ್ನು ಸ್ವಚ್ಛತಾ ಸಿಬ್ಬಂದಿಯೋರ್ವರು ಅದರ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Viral Video: ಕಸದ ತೊಟ್ಟಿಯಲ್ಲಿ ಸಿಕ್ಕ ಡೈಮಂಡ್‌ ನೆಕ್ಲೇಸ್;‌ ಮಾಲೀಕರಿಗೆ ಹಿಂದಿರುಗಿಸಿ ಸ್ವಚ್ಛತಾ ಸಿಬ್ಬಂದಿ
ವೈರಲ್​​ ವಿಡಿಯೋ
Edited By:

Updated on: Jul 22, 2024 | 11:59 AM

ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನಲ್ಲಿ ಪ್ರಾಮಾಣಿಕತೆ, ಮಾನವೀಯತೆ ಮಾಯವಾಗುತ್ತಿದೆ ಎಂದು ಹಲವರು ಹೇಳುತ್ತಿರುತ್ತಾರೆ. ಆದ್ರೆ ಇಲ್ಲಿ ನಡೆಯುವ ಕೆಲವೊಂದು ಘಟನೆಗಳು ಮನುಷ್ಯನಲ್ಲಿ ಮಾನವೀಯತೆ, ಪ್ರಾಮಾಣಿಕತೆ ಇಂದಿಗೂ ಜೀವಂತವಾಗಿ ಎಂಬುದನ್ನು ತೋರಿಸುತ್ತದೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಸ್ವಚ್ಛತಾ ಸಿಬ್ಬಂದಿಯೋರ್ವರು ಕಸದಲ್ಲಿ ಸಿಕ್ಕ ಬೆಲೆಬಾಳುವ ಡೈಮಂಡ್‌ ನೆಕ್ಲೇಸ್‌ ಅನ್ನು ಅದರ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್‌ ಆಗಿದ್ದು, ಇವರ ಪ್ರಾಮಾಣಿಕ ಕಾರ್ಯಕ್ಕೆ ಭಾರೀ ಮೆಚ್ಚು ಲಭಿಸಿದೆ.

ಈ ಘಟನೆ ಚೆನ್ನೈನಲ್ಲಿ ನಡೆದಿದ್ದು, ಸ್ವಚ್ಛತಾ ಸಿಬ್ಬಂದಿಯೋರ್ವರು ಆಕಸ್ಮಿಕವಾಗಿ ಕಸದೊಂದಿಗೆ ಬಂದಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಜ್ರದ ನೆಕ್ಲೇಸ್‌ ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಇಲ್ಲಿನ ವಿರುಗಂಪಕ್ಕಂ ನಿವಾಸಿ ದೇವರಾಜ್‌ ಅವರ ಮನೆಯವರು ಆಕಸ್ಮಿಕವಾಗಿ ಕಸದೊಂದಿಗೆ ವಜ್ರದ ನೆಕ್ಲೇಸ್‌ ಅನ್ನು ಕೂಡಾ ಕಸದ ತೊಟ್ಟಿಗೆ ಎಸೆದಿದ್ದಾರೆ. ಕಸದೊಂದಿಗೆ ನೆಕ್ಲೇಸ್‌ ಕೂಡಾ ಹೋಗಿದೆ ಎಂದು ಗೊತ್ತಾದ ತಕ್ಷಣ ದೇವರಾಜ್‌ ಕೂಡಲೇ ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ (ಜಿಸಿಸಿ) ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಜಿಸಿಸಿ ಗುತ್ತಿಗೆದಾರರ ಚಾಲಕ ಜೆ. ಆಂಥೋನಿಸಾಮಿ ಸ್ವಚ್ಛತಾ ಸಿಬ್ಬಂದಿಗಳ ಜೊತೆ ಸೇರಿ ಹತ್ತಿರದ ಕಸದ ತೊಟ್ಟಿಗಳಲ್ಲಿ ನೆಕ್ಲೇಸ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಯಲ್ಲಿ ಸ್ವಚ್ಛತಾ ಸಿಬ್ಬಂದಿಯೋರ್ವರಿಗೆ ಈ ನೆಕ್ಲೇಸ್‌ ಸಿಕ್ಕಿದ್ದ, ಅದನ್ನು ದೇವರಾಜ್‌ ಅವರಿಗೆ ಹಿಂದಿರುಸಿದ್ದಾರೆ. ನೆಕ್ಲೇಸ್‌ ಹಿಂದಿರುಗಿಸಲು ಸಹಾಯ ಮಾಡಿದ ಆಂಥೋನಿಸಾಮಿ ಮತ್ತು ಸ್ವಚ್ಛತಾ ಸಿಬ್ಬಂದಿಗೆ ದೇವರಾಜ್‌ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

ಈ ಕುರಿತ ಪೋಸ್ಟ್‌ ಒಂದನ್ನು chennaicorp ಅಧೀಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಸ್ವಚ್ಛತಾ ಸಿಬ್ಬಂದಿಯೋರ್ವರು ಕಸದಲ್ಲಿ ಸಿಕ್ಕಂತಹ ಬೆಲೆಬಾಳುವ ಡೈಮಂಡ್‌ ನೆಕ್ಲೇಸ್‌ ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಭಾರೀ ಮಳೆಗೆ ತೋಟ ಮುಳುಗಿದರೂ ತಿಳಿಯಾಗಿ ಸ್ವಚ್ಛಂದವಾಗಿರುವ ಬಾವಿ ನೀರು; ಪ್ರಕೃತಿಯ ವಿಶೇಷತೆಯೇ ಇದಲ್ಲವೇ….

ಜುಲೈ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 23 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ʼಪ್ರಾಮಾಣಿಕತೆ ಇಂತಹ ಬಡವರಲ್ಲಿ ಮಾತ್ರ ಇರುತ್ತದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಸ್ವಚ್ಛತಾ ಸಿಬ್ಬಂದಿಯ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us