ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ? ಕತೆ ಕೇಳಿ ಮೋಸ ಹೋಗದಿರಿ
ಬೆಂಗಳೂರಿನ ಚಿನ್ಮಯ್ ಹೆಗಡೆ ಎಂಬ ಉದ್ಯಮಿ ಅನಿರೀಕ್ಷಿತವಾಗಿ ಅಂತಾರಾಷ್ಟ್ರೀಯ ಖಾತೆಯಿಂದ 50,000 ಪಡೆದಿದ್ದರು. ಇದರಿಂದ ಗೊಂದಲಕ್ಕೊಳಗಾದ ಅವರು ತನಿಖೆ ಮಾಡಲು ತಮ್ಮ ಬ್ಯಾಂಕ್ಗೆ ಭೇಟಿ ನೀಡಿದರು. ಅಲ್ಲಿ ಆ ಹಣ ಸೌದಿ ಅರೇಬಿಯಾದ ರಿಜ್ವಾನ್ ಎಂಬ ವ್ಯಕ್ತಿಯಿಂದ ಬಂದಿದೆ ಎಂದು ಅವರಿಗೆ ಗೊತ್ತಾಯಿತು. ಸಿನಿಮೀಯ ಕತೆಯೆಂಬಂತೆ ಆ ಹಣವನ್ನು ನೀಡಲು ಚಿನ್ಮಯ್ ಅವರ ಮನೆಗೆ ಹೋದರು, ಆ ಹಣದಿಂದ ರಿಜ್ವಾನ್ನ ತಂಗಿಯ ಶಿಕ್ಷಣಕ್ಕೆ ಹೇಗೆಲ್ಲ ಸಹಾಯವಾಯಿತು ಎಂಬುದು ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಹರಿದಾಡುತ್ತಿರುವ ಸ್ಪೂರ್ತಿಯ ಕತೆ. ಆದರೆ, ಅದು ಕತೆಯಷ್ಟೇ. ಈ ರೀತಿ ಸುಳ್ಳು ಕತೆ ಕಟ್ಟಿ ಯಾಮಾರಿಸುವವರಿಂದ ನಾವು ಎಚ್ಚರಿಕೆಯಿಂದಿರಬೇಕು.

ಬೆಂಗಳೂರು, ಮೇ 3: ಸುಮಾರು 2 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ಮಯ್ ಹೆಗ್ಡೆ (Chinmay Hegde) ಎಂಬ ಉದ್ಯಮಿ, ಕ್ರೀಡಾಪಟುಗೆ ತಪ್ಪಾಗಿ ಬೇರಾವುದೋ ಅಕೌಂಟಿನಿಂದ 50 ಸಾವಿರ ರೂ. ಬಂದಿತ್ತಂತೆ. ಆ ಹಣದ ಮೂಲ ಹುಡುಕಿಕೊಂಡು ಹೋದ ಅವರಿಗೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಮುಸ್ಲಿಂ ವ್ಯಕ್ತಿಯೊಬ್ಬ ಬಹಳ ಕಷ್ಟದಲ್ಲಿರುವುದು ಗೊತ್ತಾಗಿ, ಮನಸು ಕರಗಿ ಆ ಹಣವನ್ನು ಅವರಿಗೆ ವಾಪಾಸ್ ನೀಡಿದ್ದು ಮಾತ್ರವಲ್ಲದೆ ತಾವೇ ಕೈಯಾರೆ 5 ಸಾವಿರ ರೂ. ನೀಡಿದ್ದರಂತೆ. ಇಂಥದ್ದೊಂದು ಕತೆ ಟ್ವಿಟ್ಟರ್, ಫೇಸ್ಬುಕ್ನಲ್ಲಿ ನಿನ್ನೆಯಿಂದ ಓಡಾಡುತ್ತಿದೆ. ಆದರೆ, ಆ ಚಿನ್ಮಯ್ ಹೆಗ್ಡೆ ಹೇಳಿದ ಕತೆ ನಿಜವೇ ಎಂದು ಟಿವಿ9 ಡಿಜಿಟಲ್ ಪರಿಶೀಲಿಸಿದಾಗ ಅದೆಲ್ಲ ಕಟ್ಟುಕತೆ ಎಂಬುದು ಬಯಲಾಗಿದೆ.
ಚಿನ್ಮಯ್ ಹೆಗ್ಡೆ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡ ಮಾಹಿತಿ ಹೀಗಿದೆ.
“ಎರಡು ವರ್ಷಗಳ ಹಿಂದೆ, ನನಗೆ ಅಂತಾರಾಷ್ಟ್ರೀಯ ಖಾತೆಯಿಂದ 50,000 ರೂ. ಬಂದಿತು. ನಾನು ಯಾವುದೇ ಹಣವನ್ನು ನಿರೀಕ್ಷಿಸಿರಲಿಲ್ಲ, ಆದ್ದರಿಂದ ನಾನು ಬ್ಯಾಂಕಿಗೆ ಹೋಗಿ ಪರಿಶೀಲಿಸಿದೆ. ಹಣದ ವರ್ಗಾವಣೆ ಸೌದಿಯಲ್ಲಿ ಕೆಲಸ ಮಾಡುತ್ತಿರುವ ರಿಜ್ವಾನ್ ಎಂಬ ವ್ಯಕ್ತಿಯಿಂದ ಆಗಿದೆ ಎಂದು ತಿಳಿದುಬಂದಿತು. ಖಾತೆ ಸಂಖ್ಯೆಯಲ್ಲಿನ ಸಣ್ಣ ದೋಷದಿಂದಾಗಿ ಆ ಹಣ ನನ್ನ ಖಾತೆಗೆ ಬಂದಿತ್ತು. ನಾನು ಅವರನ್ನು ಸಂಪರ್ಕಿಸಿದೆ. ಅವರು ಫೋನ್ನಲ್ಲಿ ಅಳುತ್ತಿದ್ದರು. “ದಯವಿಟ್ಟು ನನ್ನ ಕುಟುಂಬಕ್ಕಾಗಿ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಆ ಹಣವನ್ನು ವಾಪಾಸ್ ಕೊಡಿ” ಎಂದು ಹೇಳಿದರು. ನಾನು ಆ ಹಣ ನೀಡುವುದಾಗಿ ಅವರಿಗೆ ಭರವಸೆ ನೀಡಿದ್ದೆ.
ನಾನು ಅವರ ವಿಳಾಸವನ್ನು ತೆಗೆದುಕೊಂಡು ಅವರ ಕುಟುಂಬವನ್ನು ಭೇಟಿ ಮಾಡಲು ಹೋದೆ. ಅವರ ಮನೆ ಭೀಕರ ಸ್ಥಿತಿಯಲ್ಲಿತ್ತು. ಅದು ಯಾವಾಗ ಬೇಕಾದರೂ ಕುಸಿಯಬಹುದು ಎಂದು ತೋರುತ್ತಿತ್ತು. ವೀಲ್ಚೇರ್ನಲ್ಲಿದ್ದ ಅವರ ತಂದೆ ಕಟ್ಟಡ ನಿರ್ಮಾಣ ಕೆಲಸಗಾರರಾಗಿದ್ದರು. ಆದರೆ 3 ನೇ ಮಹಡಿಯಿಂದ ಬಿದ್ದು ಕಾಲುಗಳ ಸ್ವಾಧೀನ ಕಳೆದುಕೊಂಡರು ಎಂದು ನನಗೆ ಹೇಳಿದರು. ರಿಜ್ವಾನ್ ಇತ್ತೀಚೆಗೆ ಶೇ. 92 ಅಂಕ ಪಡೆದು ಬಿಕಾಂ ಮುಗಿಸಿ ಕುಟುಂಬವನ್ನು ಪೋಷಿಸಲು ವಿದೇಶಕ್ಕೆ ಹೋಗಿದ್ದರು. ಒಂದು ಕಾಲದಲ್ಲಿ ಖಾಸಗಿ ಶಾಲೆಯಲ್ಲಿ ಟಾಪರ್ ಆಗಿದ್ದ ಅವರ ತಂಗಿ, ಶಾಲೆಯ ಶುಲ್ಕವನ್ನು ಭರಿಸಲು ಸಾಧ್ಯವಾಗದ ಕಾರಣ ಸರ್ಕಾರಿ ಶಾಲೆಗೆ ಹೋಗಬೇಕಾಯಿತು. ಅವರ ಕಷ್ಟವನ್ನು ನೋಡಿ ನಾನು ಅವರ 50 ಸಾವಿರ ರೂ. ಹಣವನ್ನು ಕೊಟ್ಟು ಅದರ ಜೊತೆಗೆ ನನ್ನ 5 ಸಾವಿರ ರೂ. ಹಣ ಸೇರಿಸಿ ಕೊಟ್ಟೆ.
Two years ago, I received ₹50,000 from an international account. I wasn’t expecting any money, so I went to the bank to check. It turned out the transfer was from a man named Rizwan, working in Saudi. Due to a small error in the account number, the money had landed in my…
— Chinmay Hegde (@Chinmay16206171) May 2, 2025
ನನ್ನ ತಂದೆಗೆ ಅವರ ಕಥೆ ಹೇಳಿದಾಗ ಅವರು ತುಂಬಾ ಭಾವುಕರಾದರು. ಮರುದಿನವೇ ಅವರು ಬಾ ನಾನೂ ಬರುತ್ತೇನೆ, ಅವರ ಮನೆಗೆ ಹೋಗೋಣ ಎಂದರು. ನಾವು ಮತ್ತೆ ಅವರನ್ನು ಭೇಟಿ ಮಾಡಿದೆವು. ನನ್ನ ತಂದೆ ಅವರಿಗೆ, “ನಿಮ್ಮ ಮಗಳ ಪೂರ್ಣ ಶಿಕ್ಷಣವನ್ನು ನಾವು ನೋಡಿಕೊಳ್ಳುತ್ತೇವೆ. ಅವಳು ಎಲ್ಲಿ ಓದಬೇಕೋ ಅಲ್ಲಿಯೇ ಓದಲಿ” ಎಂದು ಹೇಳಿದರು. ಅಪ್ಪ ಆಕೆಯ ಆ ವರ್ಷದ ಶುಲ್ಕವನ್ನು ಪಾವತಿಸಿದರು ಮತ್ತು ಪ್ರತಿ ತಿಂಗಳು ಹಣ ಹಾಕಲು ನನಗೆ ಹೇಳಿದ್ದರು.
ಇಂದು, ಅವಳ 10ನೇ ತರಗತಿಯ ಬೋರ್ಡ್ ಫಲಿತಾಂಶಗಳು ಬಂದವು. ಅವಳು 97% – 606/625 ಅಂಕಗಳನ್ನು ಗಳಿಸಿದ್ದಾಳೆ. ಅವಳು ಕರೆ ಮಾಡಿ “ನನ್ನ ನಿಜವಾದ ಸಹೋದರನಿಗಿಂತ ಮೊದಲು ನಿಮಗೆ ಫೋನ್ ಮಾಡಿದ್ದೇನೆ. ನೀನು ನನಗೆ ನಿಜವಾದ ಅಣ್ಣನಂತೆ.” ಎಂದಳು. ಅದು ನನಗೆ ಎಷ್ಟು ಭಾವನಾತ್ಮಕ ಭಾವನೆಯನ್ನುಂಟುಮಾಡಿತು ಎಂಬುದನ್ನು ನಾನು ವರ್ಣಿಸಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆಯ ಎಡವಟ್ಟಿನಿಂದ ಆದ ಒಂದು ತಪ್ಪಿನಿಂದ ಆಕೆಯ ಜೀವನ ಸುಂದರವಾಯಿತು” ಎಂದು ಚಿನ್ಮಯ್ ಬರೆದುಕೊಂಡಿದ್ದಾರೆ.
ಅಸಲಿ ಕತೆಯೇನು?:
ಈ ಕತೆ ಕೇಳಿದಾಗ ಚಿನ್ಮಯ್ ಹೆಗ್ಡೆಯಂತಹ ಸಹಾಯ ಮಾಡುವ ಮನಸ್ಥಿತಿ ಎಲ್ಲರಿಗೂ ಇದ್ದರೆ ಎಷ್ಟು ಚೆನ್ನಾಗಿರುತ್ತದೆ! ಎಂಬ ಭಾವನೆ ಮೂಡುವುದು ಸಹಜ. ಟಿವಿ9 ಕೂಡ ಇದೇ ಕಾರಣಕ್ಕೆ ಚಿನ್ಮಯ್ ಹೆಗ್ಡೆಯನ್ನು ಎಕ್ಸ್ ಖಾತೆಯ ಮೂಲಕ ಸಂಪರ್ಕಿಸಿದಾಗ ಅವರು ಸರಿಯಾಗಿ ಸ್ಪಂದಿಸಲಿಲ್ಲ. ಎಸ್ಎಸ್ಎಲ್ಸಿಯಲ್ಲಿ ಅಷ್ಟು ಅಂಕ ಪಡೆದ ಆ ಬಾಲಕಿಯ ಫೋನ್ ನಂಬರ್ ಕೊಡಿ, ನಾವು ಆಕೆಯ ಸಂದರ್ಶನ ಮಾಡುತ್ತೇವೆ ಎಂದಾಗ ಅದಕ್ಕೂ ಒಪ್ಪದೆ ನಮ್ಮ ಖಾತೆಯನ್ನೇ ಬ್ಲಾಕ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಎಂಬ ಮಾಯೆಯಲ್ಲಿ ಬರುವುದೆಲ್ಲ ನಿಜವೆಂದು ನಂಬಿ ಹಣ ಕಳೆದುಕೊಂಡವರು ಕೂಡ ಬಹಳಷ್ಟು ಜನರಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Sat, 3 May 25