Viral Video: ಕೇರಳ ಪ್ರವಾಹ; ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲು ಉಕ್ಕಿ ಹರಿವ ನದಿಯಲ್ಲೇ ಕಾರು ಚಲಾಯಿಸಿದ ಗಂಡ

ಕೇರಳದಲ್ಲಿ ಉಂಟಾದ ಮಹಾ ಪ್ರವಾಹ ಹಾಗೂ ಭಾರೀ ಮಳೆಯಿಂದ ಭೂಕುಸಿತ ಹೆಚ್ಚಾಗುತ್ತಲೇ ಇದೆ. ಕೇರಳದ ದಕ್ಷಿಣ ಭಾಗದ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ಇಡುಕ್ಕಿಯಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಧೈರ್ಯಶಾಲಿ ಪತಿ ಮಾರುತಿ ಆಲ್ಟೊ ಕಾರಿನಿಂದ ಉಕ್ಕಿ ಹರಿಯುವ ನದಿ ದಾಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ಕೇರಳ ಪ್ರವಾಹ; ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲು ಉಕ್ಕಿ ಹರಿವ ನದಿಯಲ್ಲೇ ಕಾರು ಚಲಾಯಿಸಿದ ಗಂಡ
ಗರ್ಭಿಣಿ ಪತ್ನಿಯೊಂದಿಗೆ ಕಾರಿನಲ್ಲಿ ಉಕ್ಕಿ ಹರಿಯುವ ನದಿ ದಾಟಿದ ಗಂಡ

Updated on: Jul 31, 2024 | 10:24 PM

ಇಡುಕ್ಕಿ: ಕೇರಳದ ವಯನಾಡು ಜಿಲ್ಲೆಯಲ್ಲಿ ಈಗಾಗಲೇ ಭಾರೀ ಭೂಕುಸಿತವಾಗಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಯನಾಡು ಮಾತ್ರವಲ್ಲದೆ ರಾಜ್ಯದ ಇತರೆ ಭಾಗಗಳಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಇಡುಕ್ಕಿಯಲ್ಲಿಯೂ ನದಿಗಳು ಉಕ್ಕಿ ಹರಿಯುತ್ತಿವೆ. ಯಾವ ಕ್ಷಣದಲ್ಲಿ ಬೇಕಾದರೂ ನದಿಯ ನೀರು ಊರುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುವ ಅಪಾಯ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಗಂಡನೊಬ್ಬ ಧೈರ್ಯ ಮಾಡಿ ತನ್ನ ಆಲ್ಟೋ ಕಾರಿನಲ್ಲಿ ಗರ್ಭಿಣಿ ಪತ್ನಿಯನ್ನು ಕೂರಿಸಿಕೊಂಡು ಉಕ್ಕಿ ಹರಿಯುವ ನದಿಯನ್ನು ದಾಟಿದ್ದಾನೆ.

ಸಮುದ್ರದಂತೆ ನದಿಯ ಸುತ್ತಮುತ್ತಲಿನ ಪ್ರದೇಶಕ್ಕೂ ಆವರಿಸಿಕೊಂಡ ಕೆಂಪು ಬಣ್ಣದ ನೀರು ಸೇತುವೆಯನ್ನು ಮುಳುಗಿಸಿ ಹರಿಯುತ್ತಿತ್ತು. ಆ ಉಕ್ಕಿ ಹರಿಯುವ ನದಿಯಲ್ಲೇ ನೀರು ನಿಂತ ಸೇತುವೆಯ ಮೇಲೆ ಕಾರು ಸಾಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಆ ನೀರಿನ ರಭಸಕ್ಕೆ ಕಾರು ಆಚೀಚೆ ಓಲಾಡುತ್ತಾ ಸಾಗುತ್ತಿರುವ ವಿಡಿಯೋ ನೊಡಿದರೆ ಮೈ ಜುಮ್ಮೆನ್ನದೆ ಇರದು. ಆದರೆ, ಆತನ ಪತ್ನಿಗೆ ಡೆಲಿವರಿಗೆ ದಿನ ಸಮೀಪಿಸಿದ್ದರಿಂದ ಆಸ್ಪತ್ರೆಗೆ ಹೋಗಲೇಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ, ದೇವರ ಮೇಲೆ ಭಾರ ಹಾಕಿ ಅವರಿಬ್ಬರೂ ಕಾರಿನಲ್ಲಿ ನದಿ ದಾಟಿದ್ದಾರೆ.


ಇದನ್ನೂ ಓದಿ: Shocking Video: ಬೈಕ್​ನಲ್ಲಿ ಹೋಗುತ್ತಿದ್ದ ಯುವತಿಗೆ ರಸ್ತೆಯಲ್ಲಿ ನಿಂತ ಮಳೆನೀರು ಎರಚಿ ಪುರುಷರಿಂದ ಕಿರುಕುಳ; ವಿಡಿಯೋ ವೈರಲ್ 

ಇಂದು ಎಕ್ಸ್‌ನಲ್ಲಿ ಕಾಣಿಸಿಕೊಂಡಿರುವ ಈ ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ತನ್ನ ಗರ್ಭಿಣಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ವೇಗವಾಗಿ ತನ್ನ ಕಾರಿನಲ್ಲಿ ತುಂಬಿ ಹರಿಯುವ ಸೇತುವೆಯನ್ನು ದಾಟುತ್ತಿರುವುದನ್ನು ನೋಡಬಹುದು. ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕೇರಳದ ಇಡುಕ್ಕಿ ಜಿಲ್ಲೆಯ ವಿಡಿಯೋ ಇದಾಗಿದೆ. ಅದೃಷ್ಟವಶಾತ್ ಆ ವ್ಯಕ್ತಿ ಮತ್ತು ಅವರ ಗರ್ಭಿಣಿ ಪತ್ನಿ ಯಶಸ್ವಿಯಾಗಿ ಯಾವುದೇ ಅಪಾಯವಿಲ್ಲದೆ ಆಸ್ಪತ್ರೆ ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us