Viral: ಹುಲಿ ಘರ್ಜನೆ ಕೇಳಿ ಮರವೇರಿ ಕುಳಿತ ಫಾರೆಸ್ಟ್‌ ಗಾರ್ಡ್; ಮುಂದೇನಾಯ್ತು ನೋಡಿ…

ಕಾಡಿನಲ್ಲಿರುವ ಹುಲಿ, ಸಿಂಹಗಳನ್ನು ಕಂಡ್ರೆ ಯಾರಿಗೆ ತಾನೇ ಭಯವಾಗೊಲ್ಲ ಹೇಳಿ. ಬಹುತೇಕ ಎಲ್ಲರೂ ಹೆದರಿ ಕೂರುತ್ತಾರೆ. ಅದೇ ರೀತಿ ಇಲ್ಲೊಬ್ರು ಫಾರೆಸ್ಟ್‌ ಗಾರ್ಡ್‌ ಕೂಡಾ ಹುಲಿರಾಯನನ್ನು ಕಂಡು ಭಯದಲ್ಲಿ ಮರವೇರಿದ್ದಾರೆ. ಗಸ್ತು ತಿರುಗುವ ವೇಳೆ ಹುಲಿ ಎಂಟ್ರಿ ಕೊಟ್ಟಿದ್ದು, ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ರಕ್ಷಕ ಮರವೇರಿ ಕುಳಿತಿದ್ದಾರೆ. ಈ ಕುರಿತ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ.

ಹುಲಿ, ಸಿಂಹ, ಆನೆಗಳಂತಹ ದೈತ್ಯ ವನ್ಯ ಜೀವಿಗಳನ್ನು ಕಂಡಾಗ ಅಂತರ ಕಾಯ್ದುಕೊಳ್ಳಬೇಕಾದದ್ದು ಬಹಳ ಮುಖ್ಯ. ಇವುಗಳು ಯಾರಿಗೂ ತೊಂದರೆ ಕೊಡದಿದ್ದರೂ ಕೂಡಾ ಕೆಲವೊಂದು ಬಾರಿ ಕಿರಿಕಿರಿ ಉಂಟಾಗಿ ಹುಚ್ಚಾಟ ಮೆರೆದು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಮುಂಜಾಗ್ರತೆಯ ಕ್ರಮವಾಗಿ ಇಲ್ಲೊಬ್ರು ಅರಣ್ಯ ರಕ್ಷಕ ಗಸ್ತು ತಿರುಗುತ್ತಿದ್ದ ವೇಳೆ ಹುಲಿ ಘರ್ಜನೆಯನ್ನು ಕೇಳಿ ತಕ್ಷಣ ಮರವೇರಿದ್ದಾರೆ. ಮರವೇರುತ್ತಿದ್ದಂತೆ ದೈತ್ಯ ಹುಲಿಯೊಂದು ಅಲ್ಲಿಗೆ ಎಂಟ್ರಿ ಕೊಟ್ಟಿದ್ದು, ಎದೆ ಝಲ್‌ ಎನಿಸುವ ಈ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಮಧ್ಯಪ್ರದೇಶದ ನರ್ಮದಾಪುರಂನಲ್ಲಿರುವ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದು, ಫಾರೆಸ್ಟ್‌ ಗಾರ್ಡ್‌ಗಳಿಬ್ಬರು ಗಸ್ತು ತಿರುಗುತ್ತಿರುವ ವೇಳೆ ಹುಲಿಯೊಂದು ಎಂಟ್ರಿಕೊಟ್ಟಿದೆ. ವ್ಯಾಘ್ರದ ಘರ್ಜನೆ ಕೇಳಿಸುತ್ತಿದ್ದಂತೆ ಸುರಕ್ಷತೆಯ ದೃಷ್ಟಿಯಿಂದ ಈ ಇಬ್ಬರೂ ಎತ್ತರದ ಮರವನ್ನು ಏರಿದ್ದಾರೆ. ಹೌದು ಫಾರೆಸ್ಟ್‌ ಗಾರ್ಡ್‌ ಅನೂಲಾಲ್‌ ಭೂಸಾರೆ ಮತ್ತು ಅವರ ಸಹದ್ಯೋಗಿ ದಹಲ್‌ ಸಿಂಗ್‌ ಗಸ್ತು ತಿರುಗುತ್ತಿದ್ದ ವೇಳೆ ಹುಲಿ ಘರ್ಜನೆ ಕೇಳಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಇಬ್ಬರೂ ತಕ್ಷಣ ಮರವನ್ನೇರಿದ್ದಾರೆ. ಇವರ ಈ ಧೈರ್ಯಕ್ಕೆ ಇದೀಗ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

ಫಾರೆಸ್ಟ್‌ ಸರ್ವಿಸ್‌ ಆಫೀಸರ್‌ ಸುಧಾ ರೆಮೆನ್‌ (SudhaRamenIFS) ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಅರಣ್ಯ ರಕ್ಷಕ ಅನುಲಾಲ್‌ ಮರವೇರಿ ಕುಳಿತು ಸೆಲ್ಫಿ ವಿಡಿಯೋ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಅವರು ಮರವೇರಿ ಕುಳಿತ ಕೆಲವೇ ಹೊತ್ತಿನಲ್ಲಿ ಹುಲಿಯೊಂದು ಅಲ್ಲಿಗೆ ಎಂಟ್ರಿ ಕೊಟ್ಟಿದ್ದು, ಒಂದ್ಸಲ ಅತ್ತಿಂದಿತ್ತ ಕಣ್ಣಾಡಿಸಿ ಆ ಹುಲಿರಾಯ ಅಲ್ಲಿಂದ ಸೀದಾ ಹೊರಟು ಹೋಗಿದೆ.

ಇದನ್ನೂ ಓದಿ: ನ್ಯಾಚುರಲ್ ಆಗಿ ಸೇಬು ಹಣ್ಣಿನ ಜ್ಯೂಸ್ ನೋಡಿದ್ದೀರಾ?

ನವೆಂಬರ್‌ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕೆಚ್ಚೆದೆಯ ಅರಣ್ಯ ರಕ್ಷಕರಿಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವರ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us