ಸಿವಿಲ್ ಜಡ್ಜ್  ಪರೀಕ್ಷೆ ಬರೆದ 2 ದಿನದ ಬಾಣಂತಿ: ಇದೀಗ ಈ ಗಟ್ಟಿಗಿತ್ತಿ ಮೊದಲ ಬುಡಕಟ್ಟು ಮಹಿಳಾ ಸಿವಿಲ್ ನ್ಯಾಯಾಧೀಶೆ

ಯಾವುದೇ ಸೌಲಭ್ಯಗಳಿಲ್ಲದ ಕುಗ್ರಾಮದಲ್ಲಿನ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಸಿವಿಲ್ ಜಡ್ಜ್  ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಇದೀಗ ಮೊದಲ ಆದಿವಾಸಿ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ  ಇವರ ಮಹತ್ತರ ಸಾಧನೆಯನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಶ್ಲಾಘಿಸಿದ್ದಾರೆ. 

ಸಿವಿಲ್ ಜಡ್ಜ್  ಪರೀಕ್ಷೆ ಬರೆದ 2 ದಿನದ ಬಾಣಂತಿ: ಇದೀಗ ಈ ಗಟ್ಟಿಗಿತ್ತಿ ಮೊದಲ ಬುಡಕಟ್ಟು ಮಹಿಳಾ ಸಿವಿಲ್ ನ್ಯಾಯಾಧೀಶೆ
ಶ್ರೀಪತಿ
Edited By:

Updated on: Feb 14, 2024 | 5:21 PM

ಸಮಾಜದಲ್ಲಿ ತಳಮಟ್ಟದಲ್ಲಿರುವವರೂ ಯಶಸ್ಸು ಸಾಧಿಸಿ ಮುನ್ನಡೆಯಲು ಇರುವ  ಏಕೈಕ ಅಸ್ತ್ರ ಶಿಕ್ಷಣ. ಶಿಕ್ಷಣ ಎನ್ನುವುದು ಸಮಾಜದ ಮೂಲ ಅಡಿಪಾಯ ಎಂದೆನಿಸಿದ್ದು ಲಿಂಗ, ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿ  ಮತ್ತು ಧರ್ಮವನ್ನು ಲೆಕ್ಕಿಸದೆ ಆರ್ಥಿಕ ಸ್ವಾತಂತ್ರ್ಯ, ಜ್ಞಾನ ಸೇರಿದಂತೆ ಜೀವನದ ವಿವಿಧ ಅಂಶಗಳನ್ನು ಸುಧಾರಿಸಲು ಹಾಗೂ ಮಹೋನ್ನತ ಗುರಿಯನ್ನು ಸಾಧಿಸಲು ಅವಕಾಶವನ್ನೊದಗಿಸುವ ಕ್ಷೇತ್ರವಾಗಿದೆ. ಶಿಕ್ಷಣದ ಮೂಲಕವೇ ಜೀವನದಲ್ಲಿ ಯಶಸ್ಸು ಸಾಧಿಸಿದ ಅದೆಷ್ಟೋ ಸಾಧಕರಿದ್ದಾರೆ. ಇದೀಗ ಈ ಸಾಧಕರ ಪಟ್ಟಿಗೆ ತಮಿಳುನಾಡಿನ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಸೇರ್ಪಡೆಯಾಗಿದ್ದಾರೆ. ಹೌದು  ಕಡು ಬಡತನದಲ್ಲಿ ಜನಿಸಿದ ಇವರು ಪತಿ ಹಾಗೂ ಕುಟುಂಬದ ಬೆಂಬಲದೊಂದಿಗೆ ಸಿ.ವಿ.ಲ್ ಜಡ್ಜ್  ಪರೀಕ್ಷೆಯನ್ನು ಉತ್ತೀರ್ಣರಾಗುವ ಮೂಲಕ ತಮಿಳುನಾಡಿನ ಮೊದಲ ಆದಿವಾಸಿ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಮಿಳುನಾಡಿನ ಮೊದಲ ಬುಡಕಟ್ಟು ಮಹಿಳಾ ನ್ಯಾಯಾಧೀಶೆ ಶ್ರೀಪತಿ ಅವರ ಹೋರಾಟದ ಕಥೆ:

23 ವರ್ಷ ವಯಸ್ಸಿನ  ಶ್ರೀಪತಿ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಜವ್ವಾಡುಮಲೈ ಪಕ್ಕದ ಪುಲಿಯೂರು ಗ್ರಾಮದವರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಎಳಗಿರಿ ಬೆಟ್ಟದಲ್ಲಿ ಪೂರ್ಣಗೊಳಿಸಿ ನಂತರ   ಬಿ.ಎ ಮತ್ತು ಕಾನೂನು ಪದವಿಯನ್ನು ಪಡೆಯುತ್ತಾರೆ.  ಶಿಕ್ಷಣ ಪಡೆಯುತ್ತಿರುವಾಗಲೇ ಅವರು ವೆಂಕಟ್ರಮಣ ಎಂಬವರನ್ನು ವಿವಾಹವಾದರು. ಮದುವೆಯ ನಂತರ ಇವರ ಶಿಕ್ಷಣಕ್ಕೆ ಅಡ್ಡಿ ಪಡಿಸದ ಇವರ ಪತಿ, ಶ್ರೀಪತಿಯವರಿಗೆ ಎಲ್ಲಾ ರೀತಿಯಲ್ಲೂ  ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಹೀಗೆ ಕಾನೂನು ಪದವಿಯನ್ನು ಪೂರ್ಣಗೊಳಿಸಿದ ನಂತರ ಅವರು TNPSC ಸಿವಿಲ್ ಜಡ್ಜ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.  ಇದೇ ವೇಳೆಯಲ್ಲಿ ತಮ್ಮ ಚೊಚ್ಚಳ ಮಗುವಿನ ನಿರೀಕ್ಷೆಯಲ್ಲಿದ್ದ ಶ್ರೀಪತಿ  ಕಾಕತಾಳಿಯವೆಂಬಂತೆ  ಸಿವಿಲ್ ಜಡ್ಜ್ ಪರೀಕ್ಷೆಯ ಎರಡು ದಿನಗಳ ಮುಂಚೆ ಮಗುವಿಗೆ ಜನ್ಮ ನೀಡಿದ್ದಾರೆ. ತನ್ನ ಕನಸುಗಳು ಯಾವುದೇ ಕಾರಣಕ್ಕೂ ಕಮರಿ ಹೋಗಬಾರದೆಂದು  ಪತಿ ಹಾಗೂ ಕುಟುಂಬಸ್ಥರ ಸಹಾಯದಿಂದ ಹೆರಿಗೆಯಾದ ಎರಡು ದಿನಗಳ ಬಳಿಕ  ಶ್ರೀಪತಿ ಚೆನ್ನೈಗೆ ಬಂದು ಸಿವಿಲ್ ಜಡ್ಜ್  ಪರೀಕ್ಷೆಯನ್ನು ಬರೆದಿದ್ದಾರೆ. ಇದೀಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ  ಸಿವಿಲ್ ನ್ಯಾಯಾಧೀಶೆಯಾಗಿ  ಆಯ್ಕೆಯಾಗಿದ್ದಾರೆ. ಈ ಮೂಲಕ ಶ್ರೀಪತಿ ತಮಿಳುನಾಡಿನ ಮೊದಲ ಅದಿವಾಸಿ  ಮಹಿಳಾ ಸಿವಿಲ್ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಸಂದರ್ಭದಲ್ಲಿ ಟಿ.ಎನ್.ಪಿ.ಎಸ್.ಸಿ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣರಾದ  ಶ್ರೀಪತಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಭಿನಂದಿಸಿದ್ದಾರೆ.  ಸಿ.ಎಂ ಸ್ಟಾಲಿನ್ ಈ ಕುರಿತ ಪೋಸ್ಟ್ ಒಂದನ್ನು  X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​​ ಫೋಟೋ ಇಲ್ಲಿದೆ:

ತಮಿಳುನಾಡು ಲೋಕಸೇವಾ ಆಯೋಗ ಕಚೇರಿಯ ಮುಂದೆ ಶ್ರೀಪತಿ ಮಗುವಿನೊಂದಿಗೆ ನಿಂತಿರುವಂತಹ  ಫೋಟೋವನ್ನು ಹಂಚಿಕೊಂಡಿರುವ ಸಿ.ಎಂ ಸ್ಟಾಲಿನ್, “ತಿರುವಣ್ಣಾಮಲೈ ಜಿಲ್ಲೆಯ ಜವ್ವಾಡುಮಲೈ ಪಕ್ಕದ ಪುಲಿಯೂರ್ ಗ್ರಾಮದ ಶ್ರೀಮತಿ ಶ್ರೀಪತಿ 23 ವಯಸ್ಸಿನಲ್ಲಿ ಸಿ.ವಿ.ಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಬುಡಕಟ್ಟು ಜನಾಂಗದ ಹುಡುಗಿಯೊಬ್ಬಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ನನಗೆ ಖುಷಿ ತಂದಿದೆ. ನಮ್ಮ ದ್ರಾವಿಡ ಮಾದರಿ ಸರ್ಕಾರವು  ತಮಿಳು ಭಾಷೆಯಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಆದ್ಯತೆಯನ್ನು ನೀಡಬೇಕು ಎಂಬ  ಆದೇಶದ ಮೂಲಕ ಶ್ರೀಪತಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ನನಗೆ ಹೆಮ್ಮೆ ತಂದಿದೆ. ಆಕೆಯ  ಯಶಸ್ಸಿಗೆ ಬೆಂಬಲ ನೀಡಿದ ತಾಯಿ ಮತ್ತು ಪತಿಗೆ ಧನ್ಯವಾದಗಳು!”  ಎಂಬ ಸುದೀರ್ಘ  ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us