ಹನಿಟ್ರ್ಯಾಪ್​ ಕೇಸ್: ಡಿಕೆ ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ

Updated on: Mar 20, 2025 | 6:31 PM

ಇವತ್ತಿನ ಸದನ ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ. ಶಾಸಕ ಯತ್ನಾಳ್​ ಸಿಡಿಸಿದ ಹನಿಟ್ರ್ಯಾಪ್​ ಬಾಂಬ್,​ ಸಂಚಲನವನ್ನೇ ಸೃಷ್ಟಿಸಿದೆ. ಸಹಕಾರಿ ಸಚಿವ ಕೆಎನ್​ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಆಗಿದೆ ಎಂದು ಸದನದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದರ ಬೆನ್ನಲ್ಲೇ ಸ್ವತಃ ರಾಜಣ್ಣ ಎದ್ದು ನಿಂತ ತಮ್ಮ ಮೇಲೆ ಹನಿಟ್ರ್ಯಾಪ್​ ಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದರು. ಬಳಿಕ ಬಿಜೆಪಿ ಶಾಸಕ ಮುನಿರತ್ನ ರದ್ದು ನಿಂತು ಈ ಬಗ್ಗೆ ರೋಷಾವೇಶವಾಗಿ ಮಾತನಾಡಿದರು.

ಬೆಂಗಳೂರು, (ಮಾರ್ಚ್​ 20): ಹಿರಿಯ ಸಚಿವ ಕೆಎನ್​ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಯತ್ನ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ರಾಜಕೀಯವಾಗಿ ಮುಗಿಸೋ ಹುನ್ನಾರದಿಂದ ಹನಿಟ್ರ್ಯಾಪ್​ಗೆ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇದರ ಹಿಂದೆ ಇರುವವರನ್ನು ಹಿಡಿಯಬೇಕೆಂದು ರಾಜಣ್ಣ ಸದನದಲ್ಲಿ ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಈ ಹನಿಟ್ರ್ಯಾಪ್ ವಿಚಾರದ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಬಿಜೆಪಿ ಶಾಸಕ ಮುನಿರತ್ನ ಅವರು ರೋಷಾವೇಶದಲ್ಲಿ ಮಾತನಾಡಿದ್ದು, ನನಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರಿಂದ ಅನ್ಯಾಯ ಆಗಿದೆ. ನನ್ನ ವಿರುದ್ಧ ಅತ್ಯಾಚಾರದ ಕೇಸ್ ಹಾಕಿಸಿದ್ದಾರೆ. ನೀನು ರಾಜೀನಾಮೆ ಕೊಟ್ರೆ ಜಾತಿ ನಿಂದನೆ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಹೆಚ್‌.ಡಿ ರೇವಣ್ಣ ಮೇಲೂ ಇದೇ ಕುತಂತ್ರ ಮಾಡಿದ್ರು. ಈಗ ಸಚಿವ ರಾಜಣ್ಣ ಅವರ ಮೇಲೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಒಂದು ಕಿವಿಮಾತು ಹೇಳುತ್ತೇನೆ. ನಿಮ್ಮ ಹನಿಟ್ರ್ಯಾಪ್ ಟೀಂ ನನಗೆ ಗೊತ್ತಿದೆ. ನೀವು ರಾತ್ರಿ ಮಿಟೀಂಗ್ ಮಾಡಿದ್ದು ಗೊತ್ತಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದರು.

ಅವರಿಗೆ ಈ ಮಹಾ ಪಾಪದ ಕೆಲಸ ಯಾಕೆ ಬೇಕು? ನನಗೆ ಆಗಿರುವ ನೋವನ್ನು ನಾನು ಹೇಳಿದ್ದೀನಿ. ಸಿಸಿಟಿವಿ, ಆಡಿಯೋ ಎಲ್ಲಾ ಸಾಕ್ಷಿಗಳು ಇವೆ. ರಮೇಶ್ ಜಾರಕಿಹೊಳಿ, ನಾನು ಕಾಂಗ್ರೆಸ್‌ನಲ್ಲಿ ಇದ್ದಿದ್ದು. ರಾಜಣ್ಣ ಸಹ ಕಾಂಗ್ರೆಸ್‌ನಲ್ಲಿ ಇರೋದು. ಇದು ಒಳ್ಳೆಯದು ಅಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಶಾಸಕ ಮುನಿರತ್ನ ತೀವ್ರ ವಾಗ್ದಾಳಿ ನಡೆಸಿದರು.

 

Published on: Mar 20, 2025 06:31 PM