ಲಖನೌದಿಂದ ಕೆಐಎಬಿಗೆ ಬಂದಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ: ಫ್ಲೈಟ್ನಲ್ಲಿದ್ದ ಪ್ರಯಾಣಿಕರಿಂದಲೇ ಕೃತ್ಯ ಶಂಕೆ
ಲಕ್ನೋದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ 6E-231 ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾದ್ದರಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭಾರಿ ಆತಂಕ ಸೃಷ್ಟಿಯಾಯಿತು. ಪೈಲಟ್ ಎಟಿಸಿಗೆ ಮಾಹಿತಿ ನೀಡಿದ ನಂತರ, ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿ, ಶ್ವಾನದಳ, ಸಿಐಎಸ್ಎಫ್ ಮತ್ತು ಪೊಲೀಸರಿಂದ ತೀವ್ರ ತಪಾಸಣೆ ನಡೆಸಲಾಯಿತು. ವಿಮಾನದ ಒಳಗೆ ಪತ್ರ ಸಿಕ್ಕಿದ ಕಾರಣ ಎಲ್ಲರಲ್ಲಿಯೂ ಗಲಿಬಿಲಿ ಉಂಟಾಗಿತ್ತು.
ದೇವನಹಳ್ಳಿ, ಆಗಸ್ಟ್ 26: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಏರ್ಪೋರ್ಟ್ನ ಟರ್ಮಿನಲ್-1ಕ್ಕೆ ಬಂದಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಲಖನೌದಿಂದ ಕೆಐಎಬಿಗೆ ಬಂದಿದ್ದ 6E-231 ಇಂಡಿಗೋ ವಿಮಾನ ಹಾರಾಟದಲ್ಲಿರುವಾಗಲೆ ಸಿಬ್ಬಂದಿಗೆ ಬೆದರಿಕೆ ಪತ್ರ ಸಿಕ್ಕಿದ್ದು, ಈ ಬಗ್ಗೆ ಎಟಿಸಿಗೆ ಪೈಲೆಟ್ ಮಾಹಿತಿ ನೀಡಿದ್ದರು. ಬೆದರಿಕೆ ಪತ್ರ ಹಿನ್ನೆಲೆ ರನ್ ವೇ ಪಕ್ಕದಲ್ಲಿ ಫ್ಲೈಟ್ ನಿಲ್ಲಿಸಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ಶ್ವಾನದಳ, ಸಿಐಎಸ್ಎಫ್ ಮತ್ತು ಪೊಲೀಸರಿಂದ ವಿಮಾನ ಪರಿಶೀಲನೆ ನಡೆಸಲಾಗಿದೆ. ಫ್ಲೈಟ್ನಲ್ಲಿದ್ದ ಪ್ರಯಾಣಿಕರೆ ಬಾಂಬ್ ಬೆದರಿಕೆ ಪತ್ರ ಬರೆದಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

