ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದು ಟಿಕೆಟ್ ಪಡೆಯುವುದು ಅನ್ಯಾಯ: ವೀಣಾ ಕಾಶಪ್ಪನವರ್​

|

Updated on: Mar 29, 2024 | 2:54 PM

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ​ಅವರಿಗೆ ಒಲಿದಿದೆ. ಇದರಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳೂ ಕೇಳಿಬಂದಿವೆ. ಈ ವಿಚಾರವಾಗಿ ವೀಣಾ ಕಾಶಪ್ಪನವರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

ಬಾಗಲಕೋಟೆ ಮಾರ್ಚ್​ 29: ಬಾಗಲಕೋಟೆ ಲೋಕಸಭಾ ಕ್ಷೇತ್ರದ (Bagalkote Lok Sabha Constituency) ಟಿಕೆಟ್​ ಬಗ್ಗೆ ನಾಯಕರು ಯಾವ ಭರವಸೆ ನೀಡಿಲ್ಲ. ಬಾಗಲಕೋಟೆ ಅಭ್ಯರ್ಥಿ ಬದಲಾವಣೆ ಮಾಡಿ ಅಂತಾ ನಾನು ಕೇಳಿದ್ದೆ. ಪಕ್ಷದ ನಾಯಕರು ಅಭ್ಯರ್ಥಿ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ. ಆಶಾ ಮನೊಭಾವನೆಯಿಂದ ನಾವು ಮುಖ್ಯಮಂತ್ರಿಗಳ ಭೇಟಿಗೆ ಬಂದಿದ್ದೇವು. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಎಂದಾಗಲೂ ನಾನು ಒಪ್ಪಿರಲಿಲ್ಲ. ಸಂಸತ್ ಚುನಾವಣೆಗೆ ನಿಲ್ಲಬೇಕು ಎಂದು ನಿರ್ಧರಿಸಿದ್ದೆ. ಆದರೆ ನನಗೆ ಟಿಕೆಟ್ ನೀಡದೆ, ಹೊರ ಜಿಲ್ಲೆಯಿಂದ ಬಂದ ಸಂಯುಕ್ತಾ ಪಾಟೀಲ್ ಅವರಿಗೆ ಬಾಗಲಕೋಟೆ ಟಿಕೆಟ್​ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ (Veena Kashappanavar) ಹೇಳಿದರು.

ಬಾಗಲಕೋಟೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ​ಅವರಿಗೆ ಒಲಿದಿದೆ. ಇದರಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಅಸಮಾಧಾನಗೊಂಡಿದ್ದು, ಇಂದು (ಮಾ.29) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದು ಟಿಕೆಟ್ ಪಡೆಯುವುದು ಅನ್ಯಾಯ ಎಂದು ವಾಗ್ದಾಳಿ ಮಾಡಿದರು.

ನಾನು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ತಳಮಟ್ಟದಲ್ಲಿ ಕೆಲಸ ಮಾಡಿದ್ದೇ ನನಗೆ ಮುಳುವಾಯ್ತಾ? ಕೇವಲ ಸಂಘಟನೆ ಕಾರ್ಯಕರ್ತಳಾಗಿ ದುಡಿಯುವುದಕ್ಕೆ ಮಾತ್ರ ನಾನು ಸೀಮಿತನಾ? ಚುನಾವಣೆಗಾಗಿ ಕೆಲಸ ಮಾಡು ಅಂದಾಗ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಬಾಗಲಕೋಟೆ, ವಿಜಯಪುರ ಎರಡೂ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕು ಅಂತ ಕೆಲವರು ಬಯಸಿದ್ದಾರೆ. ಚುನಾವಣೆ ಕೆಲಸ ಮಾಡುವುದಕ್ಕೆ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಬಂಡಾಯ ಅಭ್ಯರ್ಥಿ ಆಗುವ ಬಗ್ಗೆ ನಾನು ಇನ್ನೂ ಎರಡು ದಿನಗಳಲ್ಲಿ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿ ನೋಡಲು ಇಲ್ಲಿ ಕ್ಲಿಕ್​ ಮಾಡಿ

Published On - 1:44 pm, Fri, 29 March 24

Follow us on