ಯತ್ನಾಳ್ಗೆ ಕಾಂಗ್ರೆಸ್ನಿಂದ ಆಫರ್: ಸ್ಫೋಟಕ ಹೇಳಿಕೆ ಕೊಟ್ಟ ಬಿಜೆಪಿ ಉಚ್ಛಾಟಿತ ಶಾಸಕ
ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಪಕ್ಷನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. ಎಂಎಲ್ಸಿ ಆಗಿದ್ದಾಗ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್ ನೀಡಿದ ಕಾಂಗ್ರೆಸ್ ಟಿಕೆಟ್ ಮತ್ತು ಅಭಿವೃದ್ಧಿ ನಿಧಿಯ ಆಮಿಷಗಳನ್ನು ನಿರಾಕರಿಸಿ, ಡಿ.ಎಸ್. ಶಂಕರ್ ಮೂರ್ತಿ ಪರವಾಗಿ ಮತ ಹಾಕಿದ ಘಟನೆಯನ್ನು ಸ್ಮರಿಸಿದ್ದಾರೆ. ಬಿಜೆಪಿಯ ಚಿಹ್ನೆಯಿಂದ ಗೆದ್ದಿದ್ದೇನೆ, ಅದಕ್ಕೆ ನನ್ನ ನಿಷ್ಠೆ ಎಂದಿದ್ದಾರೆ.
ಬೆಂಗಳೂರು, ಜೂನ್ 18: ಶಾಸಕ ಬಸನಗೌಡ ಪಾಟೀಲ್ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದರೂ ತಾವು ಪಕ್ಷಕ್ಕೆ ತೋರುತ್ತಿರುವ ನಿಷ್ಠೆಯನ್ನು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ರಾಜಕೀಯದಲ್ಲಿ ತಮ್ಮ ನಿಲುವು ದೃಢವಾಗಿದೆ ಎಂದು ಹೇಳಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ಮುಕ್ತಿ ಸಿಗುವವರೆಗೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೊಮ್ಮೆ ಎಂಎಲ್ಸಿ ಆಗಿದ್ದಾಗ ನಡೆದ ಘಟನೆಯನ್ನು ಯತ್ನಾಳ್ ನೆನಪಿಸಿಕೊಂಡಿದ್ದು, ಶಂಕರ್ ಮೂರ್ತಿ ವಿರುದ್ಧ ಉಗ್ರಪ್ಪನವರು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಂ.ಬಿ. ಪಾಟೀಲ್ ಅವರು ತಮ್ಮನ್ನು ಭೇಟಿ ಮಾಡಿದ್ದರು. ಸಿಂದಗಿ ಅಥವಾ ದೇವರಿಪ್ಪಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಹಾಗೂ ಸಾಕಷ್ಟು ಅಭಿವೃದ್ಧಿ ಹಣ ನೀಡುವುದಾಗಿ ಆಮಿಷವೊಡ್ಡಿ, ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವಂತೆ ಕೇಳಿದ್ದರು. ಆದರೆ, ತಾವು ಬಿಜೆಪಿ ಚಿಹ್ನೆಯಿಂದ ಆಯ್ಕೆಯಾಗಿದ್ದು, ತಮ್ಮ ನಿಷ್ಠೆ ಬಿಜೆಪಿಗೆ ಮಾತ್ರ ಎಂದು ಸ್ಪಷ್ಟಪಡಿಸಿ ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದೆ. ಆ ಮತದಿಂದಾಗಿಯೇ ಡಿ.ಎಸ್. ಶಂಕರ್ ಮೂರ್ತಿ ಸಭಾಪತಿಯಾಗಿ ಮುಂದುವರೆಯಲು ಸಾಧ್ಯವಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

