ಬೆಂಗಳೂರು, ಮಾರ್ಚ್ 29: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗೂಂಡಾ, ರೌಡಿ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಮಾಡಿರುವ ಟೀಕೆಗೆ ಬಿಜೆಪಿ ನಾಯಕ ಸಿಟಿ ರವಿ (CT Ravi) ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆಯೇ. ಇವರು ಎಂದಾದರೂ ಪಕ್ಷದ ಕೆಲಸವನ್ನ ಮಾಡಿದ್ದಾರೆಯೇ ಎಂದು ಯತೀಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
1982ರಲ್ಲಿಯೇ ಅಮಿತ್ ಶಾ ಬಿಜೆಪಿಯ ಬೂತ್ ಅಧ್ಯಕ್ಷರಾಗಿದ್ದರು. ಆಗ ಇವರಪ್ಪ ಎಂಎಲ್ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕ ಆದವರು ಎಂದು ಯತೀಂದ್ರ ವಿರುದ್ಧ ರವಿ ಕೆಂಡಕಾರಿದ್ದಾರೆ.
ನಾವು ವಿದ್ಯಾರ್ಥಿಗಳಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ನಮ್ಮ ಮೇಲೂ ಗೂಂಡಾ ಆ್ಯಕ್ಟ್ ಕೇಸ್ ಹಾಕಿದ್ದರು. ಹಾಗಾದ್ರೆ, ನಾನು ಗೂಂಡಾನಾ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಯತೀಂದ್ರ ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇಂಥವರಿಗೆ ಬಡವರ ಕಷ್ಟ ಕಾಣಿಸುತ್ತದೆಯೇ? ಚುನಾವಣೆ ಮುಗಿದ ಮೇಲೆ ಇವರೆಲ್ಲ ಎಲ್ಲಿರುತ್ತಾರೋ ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂಂಡಾ, ರೌಡಿ ಎಂದ ಯತೀಂದ್ರ ಸಿದ್ದರಾಮಯ್ಯ
ಚಾಮರಾಜನಗರದ ಹನೂರಿನಲ್ಲಿ ಗುರುವಾರ ಕಾಂಗ್ರೆಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ, ಅಮಿತ್ ಶಾ ಗುಜರಾತ್ನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಪರಾಧ ಚಟುವಟಿಕೆಗಳ ಹಿನ್ನೆಲೆ ಇದೆ. ಆದರೆ ಈಗ ಅವರು ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅವರೊಬ್ಬ ‘ಗೂಂಡಾ, ರೌಡಿ’ ಎಂದು ಟೀಕಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ