ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ಭಯಾನಕ ವಿಡಿಯೋ ವೈರಲ್

Edited By:

Updated on: Mar 16, 2026 | 2:47 PM

ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಭಯಾನಕ ರೋಡ್​ರೇಜ್ ಘಟನೆ ವರದಿಯಾಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಹೊಸೂರು, ಆನೇಕಲ್ ಮತ್ತು ಕರ್ನಾಟಕ-ತಮಿಳುನಾಡು ಗಡಿಯ ಸಮೀಪದಲ್ಲಿ ಸಂಭವಿಸಿದ ಈ ಭೀಕರ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹೊಸೂರು ಪೊಲೀಸರು ಈ ಸಂಬಂಧ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಆನೇಕಲ್, ಮಾರ್ಚ್ 16: ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ರೋಡ್ ರೇಜ್ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ತಮಿಳುನಾಡು ಗಡಿಯ ಸಮೀಪದ ಜೂಜುವಾಡಿ ಚೆಕ್​ಪೋಸ್ಟ್ ಬಳಿ ಪೊಲೀಸರು ತಡೆದಾಗ ಕಾರು ನಿಲ್ಲಿಸದ ಚಾಲಕ ಎದುರಿದ್ದ ಪೊಲೀಸ್ ಸಿಬ್ಬಂದಿಯನ್ನೇ ಬಾನೆಟ್ ಮೇಲೆ ಹಾರಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ತಮಿಳುನಾಡಿನಲ್ಲಿ ಗುಟ್ಕಾ ನಿಷೇಧ ಇರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಅಕ್ರಮವಾಗಿ ಗುಟ್ಕಾ ಮತ್ತು ಮದ್ಯವನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನಕ್ಕೆ ಪೊಲೀಸರು ಕಾರನ್ನು ತಡೆದು ಪರಿಶೀಲಿಸಲು ಮುಂದಾದರು. ಈ ವೇಳೆ ಕಾರು ಚಾಲಕ ಯಾರಬ್ ಪಾಷ (34) ಎಂಬಾತ ವಾಹನವನ್ನು ನಿಲ್ಲಿಸದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಹೆಡ್ ಕಾನ್ಸ್‌ಟೇಬಲ್ ರಾಜೀವ್ ಗಾಂಧಿ ಕಾರಿನ ಮುಂದೆ ಅಡ್ಡವಾಗಿ ನಿಂತಾಗ, ಲೆಕ್ಕಿಸದೇ ಚಾಲಕ ಕಾರನ್ನು ಮುನ್ನಡೆಸಿದ್ದಾನೆ. ಪರಿಣಾಮವಾಗಿ ಪೊಲೀಸ್ ಸಿಬ್ಬಂದಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಬಾನೆಟ್ ಮೇಲೆ ನೇತಾಡುತ್ತಿದ್ದಾಗಲೇ ಕೆಲದೂರ ಕಾರು ಚಲಾಯಿಸಿದ್ದಾನೆ. ಅದೃಷ್ಟವಶಾತ್ ಹೆಡ್ ಕಾನ್ಸ್‌ಟೇಬಲ್ ರಾಜೀವ್ ಗಾಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ನಂತರ ಹೊಸೂರು ಸಿಪ್ಕಾಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 390 ಕೆಜಿ ಗುಟ್ಕಾ ಹಾಗೂ ಮದ್ಯವನ್ನು ವಶಕ್ಕೆ ಪಡೆದಿದ್ದು, ಇದರ ಅಂದಾಜು ಮೌಲ್ಯ ಸುಮಾರು 2.20 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಪ್ರಸ್ತುತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 16, 2026 02:43 PM
Loading...
Unable to load recommendations.
Follow Us