7 ತಿಂಗಳ ಗರ್ಭಿಣಿ ಹತ್ಯೆ ಪ್ರಕರಣ: ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಹುಬ್ಬಳ್ಳಿಯಲ್ಲಿ ನಡೆದ ಆಘಾತಕಾರಿ ಮರ್ಯಾದಾ ಹತ್ಯೆ ಪ್ರಕರಣದಲ್ಲಿ, ತಂದೆಯೊಬ್ಬರು ತಮ್ಮ 7 ತಿಂಗಳ ಗರ್ಭಿಣಿ ಮಗಳನ್ನು ಕೊಂದಿದ್ದಾರೆ. ಈ ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹತ್ಯೆಗೈದವರ ಬಂಧನ ಹಾಗೂ ನ್ಯಾಯಕ್ಕಾಗಿ ಒತ್ತಾಯಿಸಿ ಆಂಬ್ಯುಲೆನ್ಸ್ ಎದುರು ಪ್ರತಿಭಟನೆ ನಡೆಸಿವೆ. ಜಾತಿವಾದ ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲಾಗಿದೆ.
ಹುಬ್ಬಳ್ಳಿ, ಡಿ.22: ಹುಬ್ಬಳ್ಳಿಯಲ್ಲಿ ನಡೆದ ಭೀಕರ ಘಟನೆಯು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ತಂದೆಯೊಬ್ಬ ತನ್ನ 7 ತಿಂಗಳ ಗರ್ಭಿಣಿ ಮಗಳನ್ನು ಕೊಚ್ಚಿ ಕೊಂದಿರುವ ಘಟನೆಯೊಂದು ನಡೆದಿದೆ. ಇದು ಮರ್ಯಾದಾ ಹತ್ಯೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಜಾತಿ ಆಧಾರಿತ ಮದುವೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಹತ್ಯೆಯಾಗಿರುವ ಮಹಿಳೆಯನ್ನು ಮಾನ್ಯಾ ಎಂದು ಗುರುತಿಸಲಾಗಿದ್ದು, ಇದೀಗ ಆಂಬ್ಯುಲೆನ್ಸ್ನಲ್ಲಿ ಆಕೆಯ ದೇಹವನ್ನು ಸಾಗಿಸುವಾಗ ದಲಿತ ಸಂಘಟನೆಗಳ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಧಿಕ್ಕಾರ, ಧಿಕ್ಕಾರ, ಬೇಕು ಬೇಕು ನ್ಯಾಯ ಬೇಕು, ಜಸ್ಟಿಸ್ ಫಾರ್ ಮಾನ್ಯಾ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಮರ್ಯಾದಾ ಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ದಲಿತ ವಿರೋಧಿಗಳಿಗೆ, ಜಾತಿವಾದಿಗಳಿಗೆ ಮತ್ತು ಜಾತಿ ರಾಕ್ಷಸರಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುವ ಮೂಲಕ ಘಟನೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 7 ತಿಂಗಳ ಗರ್ಭಿಣಿಯ ಹತ್ಯೆಯನ್ನು ಖಂಡಿಸಿ, ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

