ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಸಾಕಷ್ಟು ವರ್ಷಗಳ ಹಿಂದೆ ಮುಳುಗಿದ್ದ ದೇಗುಲದ ಅವಶೇಷ ಗೋಚರ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಹಿನ್ನೀರಿನಲ್ಲಿ 15 ವರ್ಷಗಳ ಬಳಿಕ ಪ್ರಾಚೀನ ಬಸವೇಶ್ವರ ದೇಗುಲದ ಅವಶೇಷಗಳು ಮತ್ತೆ ಗೋಚರವಾಗಿವೆ. ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲಿ ಬರಗಾಲದ ಭೀತಿ ಎದುರಾಗಿರುವ ಬಗ್ಗೆ ಚರ್ಚೆಗಳ ನಡುವೆ ಈ ವಿದ್ಯಮಾನವು ಆತಂಕವನ್ನು ಹೆಚ್ಚಿಸಿದೆ.
ಮೈಸೂರು, ಜೂನ್ 12: ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಸಾಕಷ್ಟು ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಬಸವೇಶ್ವರ ದೇಗುಲದ ಅವಶೇಷಗಳು ಈಗ ಮತ್ತೆ ಗೋಚರವಾಗಿವೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಬಹುದು ಎಂಬ ಚರ್ಚೆಯ ನಡುವೆಯೇ ಈ ವಿದ್ಯಮಾನ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ದೇವಸ್ಥಾನದ ಕಲ್ಲುಮಂಟಪದ ಭಾಗಗಳು ಕಾಣಿಸಿಕೊಳ್ಳುತ್ತಿವೆ. ಸ್ಥಳೀಯರ ಪ್ರಕಾರ, 15 ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಾದಾಗಲೂ ದೇಗುಲದ ಅವಶೇಷಗಳು ಗೋಚರಿಸಿದ್ದವು. ಮುಂಗಾರು ಮಳೆ ಕಡಿಮೆಯಾಗಿ ಒಳಹರಿವಿನ ಪ್ರಮಾಣ ಇಳಿಮುಖವಾದಾಗಲೆಲ್ಲಾ ಈ ದೇಗುಲದ ಭಾಗಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯಗಳಲ್ಲಿ ಕಬಿನಿಯೂ ಒಂದು. ಆದರೆ ಈಗಿನ ನೀರಿನ ಮಟ್ಟವು ಆತಂಕಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ತಲೆದೋರುತ್ತಿದೆಯೇ ಎಂಬ ಚರ್ಚೆಗೆ ಪುಷ್ಟಿ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
