ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್: ಕಾಂಗ್ರೆಸ್ಗೆ ಆಡಳಿತ ಮಾಡಲು ಬರುತ್ತಿಲ್ಲವೆಂದು ಕಿಡಿ
ದೇಶದ್ರೋಹಿಗಳು ಯಾವ ಪಕ್ಷದವರೇ ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಥವರು ಯಾವತ್ತಿದ್ದರೂ ದೇಶದ್ರೋಹಿಗಳೇ. ಪಕ್ಷ, ಜಾತಿ, ಧರ್ಮ ಇತ್ಯಾದಿಗಳನ್ನು ನೋಡದೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಬೇಕು. ಆಗ ಮಂಗಳೂರಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಬೀದರ್, ಜೂನ್ 1: ಮಂಗಳೂರಿನಲ್ಲಿ ಕೇವಲ ಹಿಂದೂ ಹಾಗೂ ಮುಸ್ಲಿಮರಷ್ಟೇ ಅಲ್ಲ, ಎಲ್ಲ ಧರ್ಮದವರೂ ಇದ್ದಾರೆ. ಶಾಂತಿಯಿಂದ ಎಲ್ಲರೂ ಬದುಕುವುದು ಮುಖ್ಯ ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಹೇಳಿದರು. ಬೀದರ್ನಲ್ಲಿ ಭಾನುವಾರ ಮಾತನಾಡಿದ ಅವರು, ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ಬಹಳ ಒಳ್ಳೆಯವರು. ಹಿಂದಿನಿಂದಲೂ ಅವರ ಬಗ್ಗೆ ಗೊತ್ತಿದೆ. ಆದರೆ, ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆ. ಅವರಿಗೆ ಏನೇನು ಒತ್ತಡಗಳಿದ್ದಾವೆಯೋ ಗೊತ್ತಿಲ್ಲ. ಅದರಿಂದಾಗಿ, ಪರಿಸ್ಥಿತಿ ಹೀಗಾಗಿದೆ. ಕಾಂಗ್ರೆಸ್ ಪಕ್ಷದವರಿಗೆ ಆಡಳಿತ ಮಾಡಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರಮೇಶ್ವರ್ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ. ಅವರಿಗೆ ಸರಿಯಾಗಿ ಕೆಲಸ ಮಾಡಲು ಬಿಡಬೇಕು ಎಂದು ಸೋಮಣ್ಣ ಹೇಳಿದರು.