ಮುಡಾ ಹಗರಣ: ಸಹಾಯಕ್ಕೆ ಬರಬೇಕೆಂದು ಹೈಕಮಾಂಡ್​ಗೆ ಸಿದ್ದರಾಮಯ್ಯ ಮನವಿ ಮಾಡಿದ್ಯಾಕೆ?

| Updated By: ರಮೇಶ್ ಬಿ. ಜವಳಗೇರಾ

Updated on: Jul 30, 2024 | 10:57 PM

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಜುಲೈ 30) ನವದೆಹಲಿಗೆ ಹೈಕಮಾಂಡ್​ಗೆ ಪ್ರಸಕ್ತ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತಂಕದ ಮಾತುಗಳನ್ನಾಡಿದ್ದಾರೆ.

ನವದೆಹಲಿ, (ಜುಲೈ 30): ಕರ್ನಾಟಕ ಸರ್ಕಾರ ವಿರುದ್ಧ ಹಗರಣ ಆರೋಪ ಕೇಳಿಬಂದಿವೆ. ಈ ಹಗರಣ ಇದೀಗ ದೆಹಲಿ ಅಂಗಳಕ್ಕೂ ತಲುಪಿದ್ದು, ಕಾಂಗ್ರೆಸ್ ಹೈಕಮಾಂಡ್ , ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಅವರಿಂದ ಹಗರಣ ಆರೋಪದ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಇಂದು (ಜುಲೈ 30) ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್​ಗೆ ಪಿನ್​ ಟು ಪಿನ್ ವರದಿ ಒಪ್ಪಿಸಿದ್ದಾರೆ. ಸಭೆ ಬಳಿಕ ಸಿದ್ದರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಹೈಕಮಾಂಡ್ ನಾಯಕರ ಜೊತೆಗೆ ಸಭೆ ಮಾಡಲಾಗಿದ್ದು. ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಜೆಡಿಎಸ್-ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ. ವಾಲ್ಮೀಕಿ ನಿಗಮ, ಮುಡಾ ಪ್ರಕರಣದಲ್ಲಿ ನನ್ನ ಟಾರ್ಗೆಟ್ ಮಾಡಿವೆ. ಮುಡಾ ಸೈಟ್​ ಹಂಚಿಕೆಯಲ್ಲಿ ಕಾನೂನು ಉಲ್ಲಂಘಿಸಿಲ್ಲ. ಹೈಕಮಾಂಡ್ ನಾಯಕರಿಗೆ ವಿವರಣೆ ಕೊಟ್ಟಿದ್ದೇವೆ. ನಾವು ತಪ್ಪು ಮಾಡದೇ ಇದ್ದರೂ ಸಹ ನನ್ನ ವಿರುದ್ಧ ಆರೋಪಿಸಲಾಗುತ್ತಿದೆ. ಹಾಗಾಗಿ ಸಹಾಯಕ್ಕೆ ಬರಬೇಕೆಂದು ಪಕ್ಷದ ಹೈಕಮಾಂಡ್ ನಾಯಕರಿಗೆ ಹೇಳಿದ್ದೇನೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಅಂದರೆ ಈ ಮಾತಿನ ಅರ್ಥ ಸಿಎಂ ಸಿದ್ದರಾಮಯ್ಯ ಅವರಿಗೆ ಬಂಧನದ ಭೀತಿ ಇದೆಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on