ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸಿದ್ದು ಬಹಿರಂಗವಾಗಿದೆ. ಪೋಷಕರು ಸೇರಿ ಹಲವರೊಂದಿಗೆ ಸಂಪರ್ಕದಲ್ಲಿದ್ದ ಪ್ರಜ್ವಲ್ ಎರಡು ಮೊಬೈಲ್ಗಳನ್ನು ಬಳಸಿದ್ದರು. ಪ್ರತಾಪ್ ರಾಯ್ ಮೂಲಕ ನವೀನ್ ಎಂಬಾತ ಮೊಬೈಲ್ ಪೂರೈಸಿದ್ದು, ಆತನ ಬಂಧನವಾಗಿದೆ. ಡಿಐಜಿ ಜಿನೇಂದ್ರ ಗಣಗಾವಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು, ಜೈಲು ಸಿಬ್ಬಂದಿಗೂ ಸಂಕಷ್ಟ ಎದುರಾಗಿದೆ.
ಬೆಂಗಳೂರು, ಆಗಸ್ಟ್ 22: ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿಗಳು ಬಹಿರಂಗವಾಗಿವೆ. ಪ್ರಜ್ವಲ್ ತಮ್ಮ ಪೋಷಕರು ಸೇರಿದಂತೆ ಹಲವರೊಂದಿಗೆ ಸಂಪರ್ಕದಲ್ಲಿರುವುದು ತನಿಖೆಯಿಂದ ಗೊತ್ತಾಗಿದೆ. ಪ್ರಜ್ವಲ್ ಒಂದು ಕೀಪ್ಯಾಡ್ ಮತ್ತು ಒಂದು ಆಂಡ್ರಾಯ್ಡ್ ಹೀಗೆ ಎರಡು ಮೊಬೈಲ್ಗಳನ್ನು ಬಳಸುತ್ತಿದ್ದರು. ಪೊಲೀಸರ ತನಿಖೆ ವೇಳೆ, ಬಾಣಸವಾಡಿ ನಿವಾಸಿ ನವೀನ್ ಎಂಬಾತ ಪ್ರಜ್ವಲ್ಗೆ ಮೊಬೈಲ್ ಪೂರೈಕೆ ಮಾಡಿದ್ದು ಬೆಳಕಿಗೆ ಬಂದಿದೆ. ಪ್ರಜ್ವಲ್ ಇದ್ದ ಬ್ಯಾರಕ್ನಲ್ಲೇ ಇದ್ದ ಪ್ರತಾಪ್ ರಾಯ್ ಮೂಲಕ ನವೀನ್ ಮೊಬೈಲ್ಗಳನ್ನು ತಲುಪಿಸಿದ್ದಾನೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ನವೀನ್ ಜೈಲಿಗೆ ಹೋಗಿದ್ದಾಗ ಪ್ರತಾಪ್ ರಾಯ್ನ ಪರಿಚಯವಾಗಿದೆ. ನವೀನ್ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಪ್ರಜ್ವಲ್ ಬಳಸುತ್ತಿದ್ದ ಸಿಮ್ ಕಾರ್ಡ್ಗಳು ಬೇರೆಯವರ ಹೆಸರಿನಲ್ಲಿ ಖರೀದಿಸಲ್ಪಟ್ಟಿದ್ದು, ಒಂದು ಸಿಮ್ ಆಂಧ್ರಪ್ರದೇಶದಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿದೆ. ಡಿಐಜಿ ಜಿನೇಂದ್ರ ಗಣಗಾವಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಪ್ರಕರಣದಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೈ-ಸೆಕ್ಯುರಿಟಿ ಬ್ಯಾರಕ್ನಲ್ಲಿ ಮೊಬೈಲ್ ಪೂರೈಕೆಯಾಗಿದ್ದು ಹೇಗೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
