ಟೊಮೆಟೋ ದರ ಕುಸಿತ: ಗದಗದಲ್ಲಿ ರೈತರ ಗೋಳು ಕೇಳುವವರೇ ಇಲ್ಲ
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ರೈತ ಚನ್ನಬಸವನಗೌಡ ಟೊಮ್ಯಾಟೋ ಬೆಳೆಯಲು ₹30-40 ಸಾವಿರ ಹೂಡಿಕೆ ಮಾಡಿದ್ದರು. ಉತ್ತಮ ಬೆಳೆ ಬಂದರೂ, ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ಗೆ ಕೇವಲ ₹30-40 ದೊರೆಯುತ್ತಿದ್ದು, ಸಾರಿಗೆ ವೆಚ್ಚವೂ ದುಬಾರಿಯಾಗಿದೆ. ಇದು ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ನೀಡಲು ಆಗ್ರಹಿಸಲಾಗಿದೆ.
ಗದಗ, ಆಗಸ್ಟ್ 27: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ರೈತ ಚನ್ನಬಸವನಗೌಡ ಅರ್ಧ ಎಕರೆ ಜಮೀನಿನಲ್ಲಿ ಸುಮಾರು ₹30,000-₹40,000 ಖರ್ಚು ಮಾಡಿ ಟೊಮೆಟೋ ಬೆಳೆದಿದ್ದರು. ಕಳೆದ ವರ್ಷಗಳ ಉತ್ತಮ ಬೆಲೆಯನ್ನು ಗಮನಿಸಿ ಈ ಬಾರಿಯೂ ಲಾಭದ ನಿರೀಕ್ಷೆಯಲ್ಲಿದ್ದರು. ಸಸಿಗಳ ನಾಟಿ, ಔಷಧಿ ಉಪಚಾರಗಳಿಗೆ ಭಾರಿ ಹೂಡಿಕೆ ಮಾಡಲಾಗಿತ್ತು. ಉತ್ತಮ ಇಳುವರಿ ಬಂದು ತೋಟದಲ್ಲಿ ಕೆಂಪು ಕೆಂಪಾದ ಟೊಮೆಟೋಗಳು ಕಣ್ಣಿಗೆ ಹಬ್ಬವಾಗಿದ್ದವು. ಆದರೆ, ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ, ಒಂದು ಬಾಕ್ಸ್ (ಸುಮಾರು 20 ಕೆ.ಜಿ.) ಟೊಮೆಟೋಗೆ ಕೇವಲ ₹30-₹40 ಸಿಗುತ್ತಿದೆ. ಬೆಳಗ್ಗೆ 10-15 ಬಾಕ್ಸ್ ಟೊಮೆಟೋಗಳನ್ನು ಮಾರುಕಟ್ಟೆಗೆ ಕೊಂಡೊಯ್ದ ರೈತ ಚನ್ನಬಸವನಗೌಡರಿಗೆ ಖರೀದಿದಾರರು ಸಿಗದೆ, ಸಾರಿಗೆ ವೆಚ್ಚ ₹20 ಖರ್ಚು ಮಾಡಿ ವಾಪಸ್ ತರುವಂತಾಗಿದೆ.
ಇದು ಚನ್ನಬಸವನಗೌಡರೊಬ್ಬರ ಸ್ಥಿತಿ ಅಲ್ಲ. ಗದಗ ಜಿಲ್ಲೆಯ ಬಹುತೇಕ ರೈತರ ಗೋಳು. ‘ಉತ್ತಮ ಬೆಳೆ ಬೆಳೆದರೆ ಬೆಲೆ ಇಲ್ಲ, ಬೆಲೆ ಸಿಕ್ಕರೆ ಬೆಳೆ ಇಲ್ಲ’ ಎಂಬ ಸ್ಥಿತಿಯಲ್ಲಿ ರೈತರು ಕಂಗಾಲಾಗಿದ್ದಾರೆ. ಬರಗಾಲದ ಬಗ್ಗೆಯೂ ಚರ್ಚಿಸದ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತರಿಗೆ ಸೂಕ್ತ ಬೆಂಬಲ ಬೆಲೆ ಹಾಗೂ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

