ಚಾಮರಾಜನಗರ: ಅಸನೂರು ಬಳಿ ಕಬ್ಬು ತುಂಬಿದ ಲಾರಿಯ ಅಡ್ಡಗಟ್ಟಿದ ಕಾಡಾನೆಗಳು, ಸಂಚಾರ ಅಸ್ತವ್ಯಸ್ತ
ಚಾಮರಾಜನಗರದ ಅಸನೂರು ಬಳಿ ಕಬ್ಬು ತುಂಬಿದ ಲಾರಿಯನ್ನು ಕಾಡಾನೆಗಳ ಹಿಂಡು ತಡೆದಿದ್ದು, ಸಂಚಾರ ಅಸ್ತವ್ಯಸ್ತವಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಇದೇ ರೀತಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಂಗಾವರ ಸೇರಿದಂತೆ ಹಲವೆಡೆ ಕಾಡಾನೆಗಳಿಂದ ಬೆಳೆ ನಾಶವಾಗಿದ್ದು, ಆನೆ-ಮಾನವ ಸಂಘರ್ಷ ತೀವ್ರಗೊಂಡಿದೆ.
ಚಾಮರಾಜನಗರ, ಸೆಪ್ಟೆಂಬರ್ 8: ಚಾಮರಾಜನಗರ ಜಿಲ್ಲೆ ಗಡಿಭಾಗದ ಅಸನೂರು ಬಳಿ ಕಬ್ಬು ತುಂಬಿದ ಲಾರಿಗೆ ಕಾಡಾನೆಗಳ ಹಿಂಡು ಅಡ್ಡಗಟ್ಟಿ ಸಂಚಾರಕ್ಕೆ ಅಡ್ಡಿಪಡಿಸಿದೆ. ಇದರಿಂದಾಗಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು, ಹಲವು ವಾಹನಗಳು ತುಂಬಾ ಹೊತ್ತು ನಿಂತಲ್ಲೇ ನಿಲ್ಲಬೇಕಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಶಬ್ದ ಮಾಡಿ ಆನೆಗಳನ್ನು ಕಾಡಿಗೆ ಓಡಿಸಿದ್ದಾರೆ.
ಇದೇ ರೀತಿ, ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲೂ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಬೇಲೂರು ತಾಲೂಕಿನ ಗಂಗಾವರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ. ಬೆಳ್ಳೊಟ್ಟೆ, ತೊಳಲು, ಅನುಘಟ್ಟ, ಕಣಗುಪ್ಪೆ ಸೇರಿದಂತೆ ತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಬೆಳೆ ನಾಶದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಫಿ, ಭತ್ತ, ಅಡಿಕೆ, ಮೆಕ್ಕೆಜೋಳದಂತಹ ಬೆಳೆಗಳು ಆನೆಗಳ ದಾಳಿಯಿಂದ ಹಾಳಾಗುತ್ತಿವೆ. ಒಂಟಿ ಸಲಗಗಳ ಹಾವಳಿಯಿಂದಲೂ ಬೆಳೆ ನಾಶದ ಪ್ರಮಾಣ ಹೆಚ್ಚಿದೆ ಎಂದು ತಿಳಿದುಬಂದಿದೆ. ಓಡಿಸಲು ಬಂದ ಇಟಿಎಫ್ ಸಿಬ್ಬಂದಿಯನ್ನು ಒಂಟಿ ಸಲಗವೊಂದು ಘೀಳಿಡುತ್ತಾ ಬೆನ್ನಟ್ಟಿದ ಘಟನೆಯೂ ನಡೆಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
