ಬಲೂಚಿಸ್ತಾನದ ಗಣಿಯಲ್ಲಿ ಉಗ್ರರ ದಾಳಿ; ಟರ್ಕಿಶ್ ಪ್ರಜೆ ಸೇರಿದಂತೆ 10 ಜನ ಸಾವು

ಪಾಕಿಸ್ತಾನದ ಬಲೂಚಿಸ್ತಾನ್‌ನ ಗಣಿಗಾರಿಕೆ ಸ್ಥಳದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 10 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ತಾಮ್ರ ಮತ್ತು ಚಿನ್ನದ ಗಣಿಗಾರಿಕೆ ಯೋಜನೆಯ ಮೇಲೆ ನಡೆದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 10 ಜನರಲ್ಲಿ ಟರ್ಕಿಶ್ ಪ್ರಜೆಯೂ ಸೇರಿದ್ದಾರೆ. ಈ ಸುದ್ದಿಯನ್ನು ದೃಢಪಡಿಸಿದ ಅಧಿಕಾರಿಗಳು, ದಾಳಿಕೋರರು ಮತ್ತೊಬ್ಬ ಟರ್ಕಿಶ್ ಪ್ರಜೆಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಬಲೂಚಿಸ್ತಾನದ ಗಣಿಯಲ್ಲಿ ಉಗ್ರರ ದಾಳಿ; ಟರ್ಕಿಶ್ ಪ್ರಜೆ ಸೇರಿದಂತೆ 10 ಜನ ಸಾವು
Representative Image

Updated on: Apr 23, 2026 | 11:09 PM

ಬಲೂಚಿಸ್ತಾನ್, ಏಪ್ರಿಲ್ 23: ಪಾಕಿಸ್ತಾನದ ಬಲೂಚಿಸ್ತಾನ್ (Balochistan) ಪ್ರಾಂತ್ಯದಲ್ಲಿ ತಾಮ್ರ ಮತ್ತು ಚಿನ್ನದ ಗಣಿಗಾರಿಕೆ ಸ್ಥಳದಲ್ಲಿ ಭಯೋತ್ಪಾದಕರು ಗುರಿಯಿಟ್ಟು ದಾಳಿ ನಡೆಸಿದ ನಂತರ 10 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಘಟನೆಯು ಈ ಪ್ರದೇಶದ ದುರ್ಬಲ ಭದ್ರತಾ ಪರಿಸ್ಥಿತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ನ್ಯಾಷನಲ್ ರಿಸೋರ್ಸಸ್ ಲಿಮಿಟೆಡ್ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಡೆಸುವ ಚಾಗೈ ಜಿಲ್ಲೆಯ ದರಿಗ್ವಾನ್ ಸ್ಥಳದಲ್ಲಿ ಈ ದಾಳಿ ನಡೆದಿದೆ.

“ಘಟನೆಯಲ್ಲಿ ಟರ್ಕಿಶ್ ಪ್ರಜೆ, 6 ಕಾರ್ಮಿಕರು ಮತ್ತು ಮೂವರು ಕಾವಲುಗಾರರು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ” ಎಂದು ಸ್ಥಳೀಯ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಮಿಕರು ತಮ್ಮ ಪಾಳಿಯನ್ನು ಮುಗಿಸುವ ಸಂದರ್ಭದಲ್ಲೇ ಈ ದಾಳಿಯನ್ನು ನಡೆಸಲಾಗಿದೆ. ಇದು ಟಾರ್ಗೆಟ್ ಮಾಡಿ ನಡೆಸಲಾದ ದಾಳಿಯಾಗಿದ್ದು, ಕಾರ್ಮಿಕರು ತಮ್ಮ ಪಾಳಿಯನ್ನು ಮುಕ್ತಾಯಗೊಳಿಸುತ್ತಿದ್ದ ಸಮಯದಲ್ಲಿ ಇದನ್ನು ನಡೆಸಲಾಯಿತು” ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಇರಾನ್, ಅಮೆರಿಕ ನಡುವೆ ಬಿಲ್ಡಪ್ ಕೊಡಲು ಹೋಗಿ ಮುಖಭಂಗ ಅನುಭವಿಸಿದ ಪಾಕಿಸ್ತಾನ

ಮೃತರ ಶವಗಳನ್ನು ದಲ್ಬಂದಿನ್‌ನ ಪ್ರಿನ್ಸ್ ಫಹಾದ್ ಆಸ್ಪತ್ರೆಗೆ ಸಾಗಿಸಲಾಯಿತು. ಭಯೋತ್ಪಾದಕ ದಾಳಿ ನಡೆದ ಸ್ಥಳದಲ್ಲಿ ತಾಮ್ರ, ಚಿನ್ನ, ಸೀಸ ಮತ್ತು ಸತುವಿನ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಇತ್ತೀಚೆಗೆ ವರದಿ ಮಾಡಲಾಗಿತ್ತು. ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us