Russia-Ukraine Crisis: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್​ ಯುದ್ಧ; ಇಂದು 3ನೇ ಸುತ್ತಿನ ಮಾತುಕತೆ ಫಲಪ್ರದವಾಗಬಹುದೇ?

| Updated By: Lakshmi Hegde

Updated on: Mar 07, 2022 | 12:22 PM

ಉಕ್ರೇನ್​ ಸೈನ್ಯವನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ದಾಳಿಯ ಉದ್ದೇಶ ಎಂದು ಹೇಳಿದ್ದ ರಷ್ಯಾ ನಾಗರಿಕರನ್ನೂ ಹತ್ಯೆಗೈಯುತ್ತಿದೆ ಎಂಬ ಆರೋಪವನ್ನು ಉಕ್ರೇನ್​ ಅಧ್ಯಕ್ಷರ ಸಲಹೆಗಾರ ಒಲೆಕ್ಸಿ ಒಲೆಕ್ಸಿ ಅರೆಸ್ಟೋವಿಚ್ ಆರೋಪಿಸಿದ್ದಾರೆ.

Russia-Ukraine Crisis: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್​ ಯುದ್ಧ; ಇಂದು 3ನೇ ಸುತ್ತಿನ ಮಾತುಕತೆ ಫಲಪ್ರದವಾಗಬಹುದೇ?
ಉಕ್ರೇನ್​ ಮತ್ತು ರಷ್ಯಾ ಅಧ್ಯಕ್ಷರು
Follow us on

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿ 12ನೇ ದಿನ ಇಂದು. ರಷ್ಯಾ ದಾಳಿಗೆ ಉಕ್ರೇನ್​ ಪ್ರತಿ ದಾಳಿ ನಡೆಸುತ್ತಿದ್ದು, ಎಲ್ಲಿ ನೋಡಿದರೂ ಬಾಂಬ್​, ಶೆಲ್​, ಮಿಸೆಲ್​ ದಾಳಿ ನಡೆಯುತ್ತಿದೆ. ಅದರಲ್ಲೂ ಕೀವ್​​ನ ಹೊರವಲಯ, ಉಕ್ರೇನ್​​ ಉತ್ತರದಲ್ಲಿರುವ ಚೆರ್ನಿಹಿವ್​, ದಕ್ಷಿಣದ ಮೈಕೊಲೈವ್, ಖಾರ್ಕೀವ್​​ಗಳಲ್ಲಿ ಯುದ್ಧತೀವ್ರತೆ ಹೆಚ್ಚಾಗಿದೆ.  ಇನ್ನೊಂದೆಡೆ ಉಕ್ರೇನ್​ ಮೇಲೆ ದಾಳಿ ನಡೆಸಿರುವ ರಷ್ಯಾದ ಕ್ರಮ ವಿರೋಧಿಸಿ ವಿವಿಧ ದೇಶಗಳು, ಕಂಪನಿಗಳು ಅದರ ಮೇಲಿನ ನಿರ್ಬಂಧ ಹೆಚ್ಚಿಸುತ್ತಿವೆ. ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದ್ದು, ಅದು ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಈ ಮಧ್ಯೆ ಇಂದು ಎರಡೂ ದೇಶಗಳ ಮಧ್ಯೆ ಮೂರನೇ ಸುತ್ತಿನ ಮಾತುಕತೆ ನಡೆಯಲಿದೆ.

ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಮೂರನೇ ಸುತ್ತಿನ ಮಾತುಕತೆ ಸೋಮವಾರ ನಡೆಯಲಿದೆ ಎಂದು ಶನಿವಾರ ಉಕ್ರೇನಿಯನ್​ ಸಂಧಾನಕಾರ ಡೆವಿಡ್​ ಅರಾಖ್​​ಮಿಯಾ ತಿಳಿಸಿದ್ದರು. ಉಕ್ರೇನ್​​ ಪರ ಮಾತುಕತೆಯಲ್ಲಿ ತೊಡಗಿಕೊಂಡಿದ್ದ ಡೆನಿಸ್ ಕಿರೀವ್​ ಕಳೆದ ವಾರ ಮೃತಪಟ್ಟಿದ್ದಾರೆ. ಇವರನ್ನು ಉಕ್ರೇನ್​​ನ ಗುಪ್ತ ಸೇವೆ ಸಿಬ್ಬಂದಿಯೇ ಹತ್ಯೆ ಮಾಡಿದ್ದಾರೆ ಎಂಬುದು ಬಲವಾದ ಮೂಲಗಳಿಂದಲೇ ತಿಳಿದಿದೆ ಎಂದು ಮಾಸ್ಕೋ ಮೂಲದ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಡೆನಿಸ್​ ದೇಶದ್ರೋಹದ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಶಂಕೆ ಮೇರೆಗೆ ಉಕ್ರೇನಿಯನ್​ ಗುಪ್ತ ಸೇವೆ ಅವರನ್ನು ಕೊಂದಿದೆ ಎಂದು ರಷ್ಯಾ ಪ್ರತಿಪಾದಿಸಿದರೂ, ಉಕ್ರೇನಿಯನ್ ರಕ್ಷಣಾ ಸಚಿವಾಲಯ ಅದನ್ನು ನಿರಾಕರಿಸಿದೆ.

ಉಕ್ರೇನ್​ ಸೈನ್ಯವನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ದಾಳಿಯ ಉದ್ದೇಶ ಎಂದು ಹೇಳಿದ್ದ ರಷ್ಯಾ ನಾಗರಿಕರನ್ನೂ ಹತ್ಯೆಗೈಯುತ್ತಿದೆ ಎಂಬ ಆರೋಪವನ್ನು ಉಕ್ರೇನ್​ ಅಧ್ಯಕ್ಷರ ಸಲಹೆಗಾರ ಒಲೆಕ್ಸಿ ಒಲೆಕ್ಸಿ ಅರೆಸ್ಟೋವಿಚ್ ಆರೋಪಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಕೂಡ ಈಗಾಗಲೇ ಹಲವು ಬಾರಿ ಇದನ್ನು ಪ್ರತಿಪಾದಿಸಿದ್ದಾರೆ. ರಷ್ಯಾ ಸೇನೆ ಉಕ್ರೇನ್​ನ ವಸತಿ ಪ್ರದೇಶಗಳ ಮೇಲೆ ಶೆಲ್ಲಿಂಗ್ ಮಾಡುತ್ತಿದೆ.  ಎಲ್ಲ ಕಡೆ ಆಹಾರ, ನೀರು, ಔಷಧ, ಗ್ಯಾಸ್​ ಪೂರೈಕೆಗೆ ಅಡ್ಡಿಯಾಗಿದೆ ಎಂದು ಉಕ್ರೇನ್​ ನಾಯಕರು ಆರೋಪಿಸುತ್ತಿದ್ದಾರೆ. ಸದ್ಯ ರಷ್ಯಾ ನಾಲ್ಕು ನಗರಗಳಲ್ಲಿ 11ತಾಸುಗಳ ಕದನ ವಿರಾಮ ಘೋಷಣೆ ಮಾಡಿದೆ.  ಈ ಸುತ್ತಿನ ಶಾಂತಿ ಮಾತುಕತೆಯತ್ತ ಕುತೂಹಲ ಮೂಡಿದೆ.

ಇದನ್ನೂ ಓದಿ: ಅಧ್ಯಕ್ಷ ಝೆಲೆನ್​ಸ್ಕಿ ಹತ್ಯೆಯಾದರೂ ಹೋರಾಟ ನಿಲ್ಲುವುದಿಲ್ಲ: ಪರ್ಯಾಯ ಯೋಜನೆಗಳನ್ನು ರೂಪಿಸಿಕೊಂಡಿದೆ ಉಕ್ರೇನ್

Published On - 11:10 am, Mon, 7 March 22