ಅಫ್ಘಾನ್​-ತಜಿಕಿಸ್ತಾನ್​ ಗಡಿಯಲ್ಲಿ ಆತ್ಮಾಹುತಿ ಬಾಂಬರ್​ಗಳ ಬೆಟಾಲಿಯನ್​ ನಿಯೋಜಿಸುವುದಾಗಿ ಹೇಳಿದ ತಾಲಿಬಾನ್​

ತಾಲಿಬಾನ್​ ಮತ್ತು ತಜಕಿಸ್ತಾನದ ನಡುವೆ ಬಹಿರಂಗವಾಗಿ ಮಾತಿನ ಸಮರ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂಥದ್ದೊಂದು ಬೆಟಾಲಿಯನ್​ ನಿಯೋಜನೆಯ ಘೋಷಣೆಯನ್ನು ತಾಲಿಬಾನ್​ ಮಾಡಿದ್ದು ಮಹತ್ವದ ಬೆಳವಣಿಗೆಯೆನಿಸಿದೆ.

ಅಫ್ಘಾನ್​-ತಜಿಕಿಸ್ತಾನ್​ ಗಡಿಯಲ್ಲಿ ಆತ್ಮಾಹುತಿ ಬಾಂಬರ್​ಗಳ ಬೆಟಾಲಿಯನ್​ ನಿಯೋಜಿಸುವುದಾಗಿ ಹೇಳಿದ ತಾಲಿಬಾನ್​
ತಾಲಿಬಾನ್​ ಉಗ್ರರ ಚಿತ್ರ
Edited By:

Updated on: Oct 03, 2021 | 2:55 PM

ಅಫ್ಘಾನಿಸ್ತಾನದಲ್ಲಿ ಆಡಳಿತ ಶುರು ಮಾಡಿರುವ ತಾಲಿಬಾನ್​ (Taliban) ದೇಶದ ಗಡಿ ಭಾಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಅಫ್ಘಾನ್​-ತಜಿಕಿಸ್ತಾನ(Tajikistan)ದ ಗಡಿ ಭಾಗವಾದ ಬಡಕ್ಷಾನ್​ ಪ್ರಾಂತ್ಯದಲ್ಲಿ ವಿಶೇಷ ಆತ್ಮಾಹುತಿ ಬಾಂಬರ್(Suicide Bombers Battalion)ಗಳ ಬೆಟಾಲಿಯನ್​​ನ್ನು ನಿಯೋಜಿಸಲಿದೆ ಎಂದು ಹೇಳಲಾಗಿದೆ.  ಈ ಸೂಸೈಡ್​ ಬಾಂಬರ್​ಗಳ ಬೆಟಾಲಿಯನ್​ ಹೆಸರು ಲಷ್ಕರ್-ಎ-ಮನ್ಸೂರಿ ಅಥವಾ ಮನ್ಸೂರ್ ಸೇನೆ ಎಂದು ಪ್ರಾಂತ್ಯದ ಡೆಪ್ಯೂಟಿ ಗವರ್ನರ್​ ಮುಲ್ಲಾ ನಿಸಾರ್​ ಅಹ್ಮದ್​ ಅಹ್ಮದಿ ತಿಳಿಸಿದ್ದಾರೆ. ಈ ಹಿಂದಿನ ಅಫ್ಘಾನಿಸ್ತಾನ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ರಚಿಸಲಾಗಿದ್ದ ಆತ್ಮಾಹುತಿ ಬಾಂಬರ್​ಗಳ ತಂಡದಂತೆಯೇ ಇದೂ ಕೂಡ ಇರಲಿದೆ ಎಂದೂ ಹೇಳಲಾಗಿದೆ.  

ಈ ಆತ್ಮಾಹುತಿ ಬಾಂಬರ್​ಗಳ ಬೆಟಾಲಿಯನ್ ಇಲ್ಲದೆ ಇದ್ದರೆ ಯುಎಸ್​​ನ್ನು ಸೋಲಿಸಲು ಸಾಧ್ಯವಿಲ್ಲ. ಪ್ರಸಕ್ತ ತಂಡದಲ್ಲಿರುವ ಶೂರ ಸದಸ್ಯರು ತಮ್ಮ ಸೊಂಟಕ್ಕೆ ಸ್ಫೋಟಕಗಳನ್ನು ಕಟ್ಟಿಕೊಳ್ಳುತ್ತಾರೆ ಮತ್ತು ಅಫ್ಘಾನಿಸ್ತಾನದಲ್ಲಿರುವ ಯುಎಸ್​ ನೆಲೆಗಳನ್ನು ಸ್ಫೋಟಿಸುತ್ತಾರೆ. ಈ ಸೂಸೈಡ್​ ಬಾಂಬರ್​ಗಳಲ್ಲಿ ಸ್ವಲ್ಪವೂ ಭಯವೆನ್ನುವುದು ಇಲ್ಲ. ಅಲ್ಲಾನಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಅಹ್ಮದ್​ ಅಹ್ಮದಿ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮ ಖಾಮಾ ಪ್ರೆಸ್​ ವರದಿ ಮಾಡಿದೆ. ಈ ಲಷ್ಕರ್​ ಇ  ಮನ್ಸೂರಿ ಎಂಬ ಹೆಸರಿನ ಸೂಸೈಡ್​ ಬಾಂಬರ್​ಗಳ ಬೆಟಾಲಿಯನ್​ ಜತೆ ಇನ್ನೊಂದು ಪ್ರಮುಖ ಬೆಟಾಲಿಯನ್​ ಕೂಡ ಕಾರ್ಯ ನಿರ್ವಹಿಸುತ್ತಿದೆ. ಅದು ಆಧುನಿಕ ಶಸ್ತ್ರಾಸ್ತ್ರ, ಯುದ್ಧ ತರಬೇತಿ ಹೊಂದಿರುವ ತಾಲಿಬಾನಿಗಳ ಪಡೆ ಬದ್ರಿ 313. ಇದರಲ್ಲೂ ಕೂಡ ಸೂಸೈಡ್​ ಬಾಂಬರ್​ಗಳಿದ್ದು, ಕಾಬೂಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ.

ತಾಲಿಬಾನ್​-ತಜಿಕಿಸ್ತಾನ ನಡುವೆ ಮಾತಿನ ಚಕಮಕಿ
ತಾಲಿಬಾನ್​ ಮತ್ತು ತಜಕಿಸ್ತಾನದ ನಡುವೆ ಬಹಿರಂಗವಾಗಿ ಮಾತಿನ ಸಮರ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂಥದ್ದೊಂದು ಬೆಟಾಲಿಯನ್​ ನಿಯೋಜನೆಯ ಘೋಷಣೆಯನ್ನು ತಾಲಿಬಾನ್​ ಮಾಡಿದ್ದು ಮಹತ್ವದ ಬೆಳವಣಿಗೆಯೆನಿಸಿದೆ. ಅದರಲ್ಲೂ ಅಫ್ಘಾನ್​-ತಜಿಕಿಸ್ತಾನ್​ ಗಡಿಯಲ್ಲೇ ನಿಯೋಜಿಸಲು ಮುಂದಾಗಿದೆ. ಇತ್ತೀಚೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ತಜಿಕ್​ ಅಧ್ಯಕ್ಷ ಎಮೋಮಾಲಿ ರಹಮಾನ್​, ಅಫ್ಘಾನಿಸ್ತಾನದಲ್ಲಿ ಎದುರಾಗಿರುವ ರಾಜಕೀಯ ಮತ್ತು ಮಿಲಿಟರಿ  ಅಸ್ಥಿರತೆಯನ್ನು, ವಿವಿಧ ಉಗ್ರ ಸಂಘಟನೆಗಳು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ. ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಅಫ್ಘಾನಿಸ್ತಾನ ಮತ್ತೊಮ್ಮೆ ವೇದಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಹೇಳಿದ್ದರು. ಅದಕ್ಕೆ ತಿರುಗೇಟು ನೀಡಿದ್ದ, ಅಫ್ಘಾನಿಸ್ತಾನದ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ. ಇಲ್ಲಿನ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ತಾಲಿಬಾನ್​ ಯಾವುದೇ ಅನ್ಯ ದೇಶಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿತ್ತು. ಅದಾದ ಬೆನ್ನಲ್ಲೇ ಈಗ ತಜಕಿಸ್ತಾನದ ಗಡಿಯಲ್ಲಿ ಸೂಸೈಡ್ ಬಾಂಬರ್​ ಬೆಟಾಲಿಯನ್​ ನಿಯೋಜನೆ ಮಾಡಲು ತಾಲಿಬಾನ್​ ಮುಂದಾಗಿದೆ.

ಇದನ್ನೂ ಓದಿ: ‘ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವವರ ಮೇಲೆ ದಯೆ ತೋರಬೇಡಿ’; ನಾಗ ಚೈತನ್ಯಗೆ ಕಂಗನಾ ಟಾಂಟ್​

West Bengal By-Election Results ಚುನಾವಣಾ ಫಲಿತಾಂಶದ ನಂತರ ಸಂಭ್ರಮಾಚರಣೆ ಬೇಡ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ

Published On - 2:38 pm, Sun, 3 October 21