ತಾಲಿಬಾನ್​ಗೆ ಪಂಜ್​ಶಿರ್ ಪ್ರಾಂತ್ಯದ ಸವಾಲು: ಫಲಿತಾಂಶದ ಬಗ್ಗೆ ವಿಶ್ವ ಸಮುದಾಯದಲ್ಲಿ ಕುತೂಹಲ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 23, 2021 | 7:54 PM

ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನ್ ಉಗ್ರರು ಪಂಜ್​ಶಿರ್​ ಪ್ರಾಂತ್ಯದಲ್ಲಿ ಆಶ್ರಯ ಪಡೆದಿರುವ ಹಿಂದಿನ ಸರ್ಕಾರದ ಪಡೆಗಳೊಂದಿಗೆ ಸಮರ ಶುರುವಾಗಿದೆ. ಉಗ್ರಗಾಮಿಗಳ ಆಳ್ವಿಕೆಗೆ ದೇಶವನ್ನು ಒಪ್ಪಿಸುವುದಿಲ್ಲ ಎಂದು ಈ ಪಡೆಗಳು ತೊಡೆತಟ್ಟಿ ನಿಂತಿವೆ.

ತಾಲಿಬಾನ್​ಗೆ ಪಂಜ್​ಶಿರ್ ಪ್ರಾಂತ್ಯದ ಸವಾಲು: ಫಲಿತಾಂಶದ ಬಗ್ಗೆ ವಿಶ್ವ ಸಮುದಾಯದಲ್ಲಿ ಕುತೂಹಲ
ಪಂಜ್​ಶಿರ್ ಪ್ರಾಂತ್ಯದಲ್ಲಿ ಮಸೂದ್ ಫ್ಲೆಕ್ಸ್
Follow us on

ಅಫ್ಘಾನಿಸ್ತಾನದಲ್ಲಿ ಈಗ ಮತ್ತೆ ಯುದ್ಧ ಶುರುವಾಗಿದೆ. ಆದರೆ, ಇದು ಅಂತರಿಕ ಯುದ್ಧ. ತಾಲಿಬಾನ್ ಉಗ್ರಗಾಮಿಗಳು ಹಾಗೂ ಪಂಜಶಿರ್ ಪ್ರಾಂತ್ಯದ ಸಿಂಹಗಳ ನಡುವಿನ ಯುದ್ಧ. ಪಂಜಶಿರ್ ಪ್ರಾಂತ್ಯ ಈಗಲೂ ತಾಲಿಬಾನ್ ವಶಕ್ಕೆ ಬಂದಿಲ್ಲ. ತಾಲಿಬಾನ್ ಮತ್ತು ಪಂಜಶಿರ್ ಪ್ರಾಂತ್ಯದ ನಡುವಿನ ಯುದ್ಧ ಯಾವ ಹಂತಕ್ಕೆ ಹೋಗಬಹುದು ಎಂಬ ವಿಶ್ಲೇಷಣೆ ವಿಶ್ವ ಸಮುದಾಯದಲ್ಲಿ ಆರಂಭವಾಗಿದೆ.

ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನ್ ಉಗ್ರರು ಪಂಜ್​ಶಿರ್​ ಪ್ರಾಂತ್ಯದಲ್ಲಿ ಆಶ್ರಯ ಪಡೆದಿರುವ ಹಿಂದಿನ ಸರ್ಕಾರದ ಪಡೆಗಳೊಂದಿಗೆ ಸಮರ ಶುರುವಾಗಿದೆ. ಉಗ್ರಗಾಮಿಗಳ ಆಳ್ವಿಕೆಗೆ ದೇಶವನ್ನು ಒಪ್ಪಿಸುವುದಿಲ್ಲ ಎಂದು ಈ ಪಡೆಗಳು ತೊಡೆತಟ್ಟಿ ನಿಂತಿವೆ. ಅಫ್ಘಾನಿಸ್ತಾನದಲ್ಲಿ ಒಟ್ಟು 34 ಪ್ರಾಂತ್ಯಗಳಿವೆ. ಇವುಗಳ ಪೈಕಿ 33 ಪ್ರಾಂತ್ಯಗಳು ಈಗಾಗಲೇ ತಾಲಿಬಾನ್ ನಿಯಂತ್ರಣಕ್ಕೆ ಸಿಕ್ಕಿವೆ. ಆದರೆ, ಪಂಜಶಿರ್ ಪ್ರಾಂತ್ಯ ಮಾತ್ರ ತಾಲಿಬಾನ್ ಆಡಳಿತದ ವಶಕ್ಕೆ ಸಿಲುಕಿಲ್ಲ. ಇದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಆಗಸ್ಟ್​ 22ರ ರಾತ್ರಿಯೇ ತಾಲಿಬಾನ್ ದಂಡಯಾತ್ರೆ ಹೊರಟಿತ್ತು. ಅದರ ವಿಡಿಯೊ ತುಣುಕುಗಳನ್ನೂ ಬಿಡುಗಡೆ ಮಾಡಿತ್ತು.

ಪಂಜಶಿರ್ ಪ್ರಾಂತ್ಯದೊಳಗೆ ನುಗ್ಗಲು ತಾಲಿಬಾನ್ ಪಡೆಗೆ ಇನ್ನೂ ಸಾಧ್ಯವಾಗಿಲ್ಲ. ಪ್ರಾಂತ್ಯದ ಸೇತುವೆ, ಪ್ರವೇಶ ದ್ವಾರಗಳಲ್ಲಿ ತಾಲಿಬಾನ್ ಉಗ್ರರು ನಿಂತಿದ್ದಾರೆ. ಪಂಜಶಿರ್ ಪ್ರಾಂತ್ಯವು ಪಂಚ ಸಿಂಹಗಳ ನಾಡು ಎಂದೇ ಹೆಸರಾಗಿದೆ. ಈ ಪ್ರಾಂತ್ಯದಲ್ಲಿದ್ದ ಐವರು ಸಹೋದರರು ಐದು ಸಿಂಹಗಳಿದ್ದಂತೆ. ಪಂಜಶಿರ್ ಪ್ರಾಂತ್ಯವು ಈವರೆಗೆ ಎಂದೂ ವಿದೇಶಿ ಶಕ್ತಿಗಳು ಅಥವಾ ತಾಲಿಬಾನ್ ಆಳ್ವಿಕೆಗೆ ಒಳಪಟ್ಟಿಲ್ಲ. 1980ರ ದಶಕದಲ್ಲಿ ಸೋವಿಯತ್ ರಷ್ಯಾ ದಾಳಿ ನಡೆಸಿದಾಗಲೂ ಪಂಜಶಿರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ಈ ಪ್ರಾಂತ್ಯದ ನಾಯಕ ಅಹಮದ್ ಶಾ ಮಸೂದ್ ತನ್ನದೇ ಆದ ಪಡೆ ಕಟ್ಟಿಕೊಂಡು ರಷ್ಯಾ ವಿರುದ್ಧ ಹೋರಾಟ ನಡೆಸಿದ್ದ.

ಬಳಿಕ 1996ರಿಂದ 2001ರವರೆಗೆ ಅಫ್ಘಾನಿಸ್ತಾನದಲ್ಲಿ ಆಳ್ವಿಕೆ ನಡೆಸಿದ್ದ ತಾಲಿಬಾನಿಗಳಿಗೂ ಪಂಜಶಿರ್ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಇಡೀ ದೇಶ ಗೆದ್ದರೂ ಈ ಪ್ರಾಂತ್ಯ ಗೆಲ್ಲಲು ತಾಲಿಬಾನಿಗಳಿಗೆ ಸಾಧ್ಯವಾಗಿಲ್ಲ. ಈ ಪ್ರಾಂತ್ಯದಲ್ಲಿ ಈಗ ಅಹಮದ್ ಶಾ ಮಸೂದ್ ಪುತ್ರ ಅಹಮದ್ ಮಸೂದ್ ತನ್ನದೇ ಪಡೆ ಹಾಗೂ ನಾರ್ತನ್ ಅಲೈಯನ್ಸ್ ಒಕ್ಕೂಟದ ಪಡೆಗಳೊಂದಿಗೆ ತಾಲಿಬಾನಿಗಳ ಆಳ್ವಿಕೆಗೆ ಪ್ರತಿರೋಧ ತೋರಿದ್ದಾರೆ. ನಾನು ಅಹ್ಮದ್ ಶಾ ಮಸೂದ್ ಪುತ್ರ. ಅವರಂತೆಯೇ ತಾಲಿಬಾನ್ ವಿರುದ್ಧ ಹೋರಾಡುತ್ತೇನೆ ಎಂದು ಅಹ್ಮದ್ ಮಸೂದ್ ಘೋಷಿಸಿದ್ದಾರೆ. ಪಂಜಶಿರ್ ಸಿಂಹ ಎಂದೇ ಹೆಸರಾದ ಅಹಮದ್ ಶಾ ಮಸೂದ್ ಈ ಹಿಂದೆ ಅಫ್ಘನಿಸ್ತಾನದಲ್ಲಿ ರಕ್ಷಣಾ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಪಂಜ್​ಶಿರ್ ಪ್ರಾಂತ್ಯವು ರಾಜಧಾನಿ ಕಾಬೂಲ್​ನಿಂದ 125 ಕಿಮೀ ದೂರದಲ್ಲಿ ಉತ್ತರ ದಿಕ್ಕಿನಲ್ಲಿದೆ. ಕಾಬೂಲ್​ನಿಂದ 3 ಗಂಟೆ ಪ್ರಯಾಣದ ಅವಧಿ. ಇದೇ ಪಂಜ್​ಶಿರ್ ಪ್ರಾಂತ್ಯದಲ್ಲಿ ಹುಟ್ಟಿದವರು ಅಮರುಲ್ಲಾ ಸಲೇಹಾ. ಅಮರುಲ್ಲಾ ಸಲೇಹಾ ಅಶ್ರಫ್ ಘನಿ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದರು. ಈಗ ತಾವೇ ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಅಹಮದ್ ಮಸೂದ್ ಜೊತೆಗೆ ಅಮರುಲ್ಲಾ ಸಲೇಹಾ ಕೈ ಜೋಡಿಸಿದ್ದಾರೆ. ತಾಲಿಬಾನ್ ಆಳ್ವಿಕೆ ವಿರೋಧಿಸುವ, ಅಮರುಲ್ಲಾ ಸಲೇಹಾ ನಾಯಕತ್ವದಲ್ಲಿ ನಿಷ್ಠೆ ಹೊಂದಿರುವ ಅಫ್ಘಾನ್ ಸೈನಿಕರು ಶಸ್ತ್ರಾಸ್ತ್ರ ಮತ್ತು ಸಶಸ್ತ್ರ ವಾಹನಗಳ ಸಮೇತ ಪಂಜ್​ಶಿರ್ ಪ್ರಾಂತ್ಯಕ್ಕೆ ಬಂದಿದ್ದಾರೆ. ತಾವು ಈಗಲೂ ತಾಲಿಬಾನಿಗಳ ವಿರುದ್ಧ ಹೋರಾಡುತ್ತೇವೆ ಎಂದು ಸೈನಿಕರು ಪಣ ತೊಟ್ಟಿದ್ದಾರೆ.

ಇದನ್ನೂ ಓದಿ: ಆ. 31ರೊಳಗೆ ಅಫ್ಘಾನ್​ನಿಂದ ಸೇನೆ ಹಿಂಪಡೆಯದಿದ್ದರೆ ಅಪಾಯ ಎದುರಿಸಬೇಕಾದೀತು; ಅಮೆರಿಕಕ್ಕೆ ತಾಲಿಬಾನ್ ಎಚ್ಚರಿಕೆ

ಪಂಜ್​ಶಿರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ನಾರ್ದನ್ ಅಲಯನ್ಸ್ ಯೋಧರ ತಾಲೀಮು

ಬಂದೂಕು ಹಿಡಿದಿದ್ದಾರೆ ಮಹಿಳೆಯರು
ಪಂಜಶಿರ್ ಪ್ರಾಂತ್ಯದಲ್ಲಿ ಈಗ ಪುರುಷರು ಮಾತ್ರವಲ್ಲ, ಮಹಿಳೆಯರು, ಮಕ್ಕಳು ಕೂಡ ತಾಲಿಬಾನಿಗಳ ವಿರುದ್ಧ ಬಂದೂಕು ಹಿಡಿದು ಪಂಜಶಿರ್ ಪ್ರಾಂತ್ಯದ ರಕ್ಷಣೆಗೆ ನಿಂತಿದ್ದಾರೆ. ಪಂಜಶಿರ್ ಪ್ರಾಂತ್ಯದಲ್ಲಿ ಅದರದ್ದೇ ಆದ ಧ್ವಜವನ್ನು ಹಾರಿಸಲಾಗಿದೆ. ಈವರೆಗೆ 300 ತಾಲಿಬಾನ್ ಉಗ್ರರನ್ನು ನಾರ್ದನ್ ಅಲೈಯನ್ಸ್ ಹಾಗೂ ಪ್ರತಿರೋಧ ಪಡೆಯು ಹತ್ಯೆ ಮಾಡಿದೆ. ಟೆಂಟ್​ಗಳಲ್ಲಿ ಹೆಣಗಳ ರಾಶಿಯೇ ಬಿದ್ದಿವೆ. ತಾಲಿಬಾನ್ ಈಗ ಒಂದು ಸಾವಿರ ಹೆಚ್ಚುವರಿ ಸೈನಿಕರನ್ನು ಪಂಜ್​ಶಿರ್ ಪ್ರಾಂತ್ಯಕ್ಕೆ ಕಳಿಸಿದೆ. ಪಕ್ಕದಲ್ಲೇ ಇರುವ ಅಂದ್ರಾಬ್ ಪ್ರಾಂತ್ಯದಲ್ಲಿ 50 ಮಂದಿ ತಾಲಿಬಾನ್ ಉಗ್ರರನ್ನು ಪ್ರತಿರೋಧ ಪಡೆ ಹತ್ಯೆ ಮಾಡಿದೆ.

ಪಂಜ್​ಶಿರ್ ಪ್ರಾಂತ್ಯಕ್ಕೆ ಅದರ ಭೌಗೋಳಿಕ ಸ್ವರೂಪವೇ ದೊಡ್ಡ ರಕ್ಷಣೆಯನ್ನು ನೀಡುತ್ತಿದೆ. ನೈಸರ್ಗಿಕವಾಗಿಯೂ ಇದು ಕೋಟೆಯಂತೆ ಇದೆ. ಇದೇ ಈಗ ನಾರ್ದನ್ ಅಲೈಯಲ್ಸ್​ಗೆ ದೊಡ್ಡ ಅನುಕೂಲ ಒದಗಿಸಿದೆ. ಹಿಂದೂಖುಷ್ ಪರ್ವತ ಶ್ರೇಣಿಯಲ್ಲಿರುವ ಪಂಜ್​ಶಿರ್ ಪ್ರಾಂತ್ಯದಲ್ಲಿ ದೊಡ್ಡದೊಡ್ಡ ಬೆಟ್ಟಗುಡ್ಡಗಳಿವೆ. ಕೆಲವು ಕಡೆಗಳಿಂದ ಮಾತ್ರವೇ ಈ ಪ್ರಾಂತ್ಯವನ್ನು ಪ್ರವೇಶಿಸಲು ಸಾಧ್ಯ. ಪ್ರಾಂತ್ಯದ ಎಂಟ್ರಿ ಗೇಟ್​ನ ಗುಡ್ಡಗಳ ಮೇಲೆ ಕುಳಿತು ನಾರ್ದನ್ ಅಲೈಯನ್ಸ್ ಯೋಧರು ಕಾವಲು ಕಾಯುತ್ತಿದ್ದಾರೆ. ರಸ್ತೆಯಲ್ಲಿ ತಾಲಿಬಾನ್ ಉಗ್ರರು ಕಂಡರೆ, ಮೇಲಿನಿಂದ ಗುಂಡು ಹಾರಿಸಿ ಹತ್ಯೆ ಮಾಡುವುದು ಸುಲಭ. ಕೆಳಭಾಗದಿಂದ ತಾಲಿಬಾನ್ ಉಗ್ರರು ಮೇಲ್ಬಾಗದಲ್ಲಿ ಕುಳಿತವರ ಮೇಲೆ ಗುಂಡುಹಾರಿಸಿ ಹತ್ಯೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪಂಜಶಿರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವುದು ತಾಲಿಬಾನ್​ಗೆ ಸುಲಭವಲ್ಲ. ಹೀಗಾಗಿಯೇ ಪಂಜಶಿರ್ ಪ್ರಾಂತ್ಯದಲ್ಲಿ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹಾ ಆರಾಮಾಗಿ ಜನರ ಜೊತೆಗೆ ವಾಲಿಬಾಲ್ ಆಡುತ್ತಾ ಸಮಯ ಕಳೆಯುತ್ತಿದ್ದಾರೆ.

ದಿಗ್ಬಂಧನ ವಿಧಿಸಿರುವ ತಾಲಿಬಾನ್
ರಕ್ಷಣಾ ತಜ್ಞರ ಪ್ರಕಾರ, ಪಂಜ್​ಶಿರ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಳ್ಳುವುದು ಸುಲಭವಲ್ಲ. ಅಹಮ್ಮದ್ ಮಸೂದ್ ಕೆಲ ತಿಂಗಳಗಳ ಕಾಲ ಯುದ್ಧಕ್ಕೆ ಸಿದ್ದತೆ ನಡೆಸಿದ್ದಾರೆ. ಆದರೆ, ತಾಲಿಬಾನ್ ಪಂಜಶಿರ್ ಪ್ರಾಂತ್ಯವನ್ನು ಸುತ್ತುವರಿದಿರುವುದರಿಂದ ಪ್ರಾಂತ್ಯದ ಒಳ ಹೋಗುವ, ಹೊರ ಬರುವ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಪಂಜಶಿರ್ ಪ್ರಾಂತ್ಯಕ್ಕೆ ದಿಗ್ಭಂಧನ ವಿಧಿಸಬಹುದು. ಇದರಿಂದ ನಾರ್ದನ್ ಅಲೈಯಲ್ಸ್​ಗೆ ಕಷ್ಟ ಎದುರಾಗಬಹುದು ಎಂದು ಹೇಳುತ್ತಿದ್ದಾರೆ.

ಇನ್ನು ತಾಲಿಬಾನ್ ಉಗ್ರರು ಹಾಗೂ ಪಂಜ್​ಶಿರ್ ಪ್ರಾಂತ್ಯದ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಇದನ್ನು ಅಹಮದ್ ಮಸೂದ್ ನಿರಾಕರಿಸಿದ್ದಾರೆ. ಮತ್ತೊಂದೆಡೆ ಆಶ್ರಫ್ ಘನಿ ಸೋದರ ಹಸ್ಮತ್ ಗನಿ ತಾಲಿಬಾನ್ ಆಳ್ವಿಕೆಯನ್ನು ಒಪ್ಪಿಕೊಂಡಿದ್ದು, ತಾಲಿಬಾನ್ ಸಂಘಟನೆ ಹಾಗೂ ಪಂಜಶಿರ್ ಪ್ರಾಂತ್ಯದ ನಡುವೆ ಸೇತುವೆಯಾಗಿ ಮಾತುಕತೆ ನಡೆಸಲು ಸಿದ್ದ ಎಂದು ಹೇಳಿದ್ದಾರೆ.

(War in Panjshir Valley Taliban Defeating from Northern Alliance in Afghanistan)

ಇದನ್ನೂ ಓದಿ: Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​

ಇದನ್ನೂ ಓದಿ: ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್​ಶಿರ್​ ಕಣಿವೆಯತ್ತ ಧಾವಿಸಿದ ಉಗ್ರರು

Published On - 7:53 pm, Mon, 23 August 21