Bangladesh Floods: ಪ್ರವಾಹಕ್ಕೆ ಭಾರತವೇ ಕಾರಣವೆಂದ ಬಾಂಗ್ಲಾದೇಶ; ತಪ್ಪು ಮಾಹಿತಿ ಹರಡಬೇಡಿ ಎಂದು ಮೋದಿ ಸರ್ಕಾರ ಎಚ್ಚರಿಕೆ

ನೆರೆಯ ದೇಶವಾದ ಬಾಂಗ್ಲಾದೇಶ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಬಾಂಗ್ಲಾದೇಶಕ್ಕೆ ಮಾಹಿತಿ ನೀಡದೆ ಭಾರತದಿಂದ ಹೆಚ್ಚುವರಿ ನೀರನ್ನು ಬಾಂಗ್ಲಾಗೆ ಬಿಡುಗಡೆ ಮಾಡಿದ್ದೇ ಈ ಪ್ರವಾಹಕ್ಕೆ ಕಾರಣ ಎಂಬ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಶೇಮ್ ಆನ್ ಇಂಡಿಯಾ ಎಂಬ ಹ್ಯಾಶ್​ಟ್ಯಾಗ್ ಕೂಡ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ.

Bangladesh Floods: ಪ್ರವಾಹಕ್ಕೆ ಭಾರತವೇ ಕಾರಣವೆಂದ ಬಾಂಗ್ಲಾದೇಶ; ತಪ್ಪು ಮಾಹಿತಿ ಹರಡಬೇಡಿ ಎಂದು ಮೋದಿ ಸರ್ಕಾರ ಎಚ್ಚರಿಕೆ
ಬಾಂಗ್ಲಾದೇಶ ಪ್ರವಾಹ
Follow us
|

Updated on: Aug 23, 2024 | 4:56 PM

ನವದೆಹಲಿ: ಭಾರತವು ‘ಬಾಂಗ್ಲಾದೇಶ ವಿರೋಧಿ ನೀತಿ’ ಅನುಸರಿಸಿ ಡ್ಯಾಂನಿಂದ ದಿಢೀರನೆ ನೀರು ಬಿಟ್ಟಿದ್ದರಿಂದ ಬಾಂಗ್ಲಾದೇಶ ಪ್ರವಾಹದಲ್ಲಿ ಮುಳುಗುತ್ತಿದೆ ಎಂದು ಬಾಂಗ್ಲಾದೇಶ ಆರೋಪಿಸಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಭಾರತ ಸರ್ಕಾರ ‘ತಪ್ಪಾದ ಮಾಹಿತಿಯನ್ನು ಹರಡಿಬೇಡಿ’ ಎಂದು ಎಚ್ಚರಿಕೆ ನೀಡಿದೆ. ತ್ರಿಪುರಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿರುವುದರಿಂದ ಬಾಂಗ್ಲಾದೇಶದಲ್ಲಿ ಪ್ರವಾಹ ಉಂಟಾಗಿದೆ ಎಂಬ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಭಾರೀ ಮಳೆಯ ಕಾರಣದಿಂದ ಬಾಂಗ್ಲಾದಲ್ಲಿ ಪ್ರವಾಹ ಉಂಟಾಗಿದೆಯೇ ವಿನಃ ಭಾರತ ಇದಕ್ಕೆ ಹೊಣೆಯಲ್ಲ ಎಂದಿದೆ. ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರು ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರನ್ನು ಭೇಟಿಯಾಗಿ ದ್ವಿಪಕ್ಷೀಯ ಸಹಕಾರವನ್ನು ಪುನರುಚ್ಚರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯ ನಂತರ ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ತೀವ್ರ ಪ್ರವಾಹವು ಹಾನಿಯನ್ನುಂಟುಮಾಡಿದೆ. ಬೃಹತ್ ವಿನಾಶದ ಮಧ್ಯೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಲಹೆಗಾರ ಮೊಹಮ್ಮದ್ ನಹಿದ್ ಇಸ್ಲಾಂ, “ಯಾವುದೇ ಪೂರ್ವ ಎಚ್ಚರಿಕೆಯಿಲ್ಲದೆ” ತ್ರಿಪುರಾ ಅಣೆಕಟ್ಟಿನ ಸ್ಲೂಸ್ ಗೇಟ್‌ಗಳನ್ನು ತೆರೆದಿದ್ದಕ್ಕಾಗಿ ಭಾರತದ ವಿರುದ್ಧ ಆರೋಪಿಸಿದ್ದರು. ನಹಿದ್ ಅವರು ಭಾರತವನ್ನು “ಬಾಂಗ್ಲಾದೇಶ ವಿರೋಧಿ” ನೀತಿಯಿಂದ ಹೊರಬರುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ: Modi in Ukraine: ರಷ್ಯಾ- ಉಕ್ರೇನ್ ಯುದ್ಧ; ಕೈವ್​ನಲ್ಲಿ ಝೆಲೆನ್ಸ್ಕಿಯನ್ನು ತಬ್ಬಿಕೊಂಡ ಪ್ರಧಾನಿ ನರೇಂದ್ರ ಮೋದಿ

ಇದಕ್ಕೆ ಭಾರತ ತಿರುಗೇಟು ನೀಡಿದೆ. ಬಾಂಗ್ಲಾದೇಶದ ಜಿಲ್ಲೆಗಳಲ್ಲಿ ಪ್ರವಾಹವು ಭಾರೀ ಮಳೆಯಿಂದ ಉಂಟಾಗಿದೆಯೇ ಹೊರತು ತ್ರಿಪುರಾದ ಗುಮ್ಟಿ ನದಿಯ ಮೇಲಿನ ಡಂಬೂರ್ ಅಣೆಕಟ್ಟಿನಿಂದ ಬಿಡುಗಡೆಯಾದ ನೀರಿನಿಂದಲ್ಲ ಎಂದು ಹೇಳಿದೆ. ಬಾಂಗ್ಲಾದೇಶದಲ್ಲಿ 1.8 ಮಿಲಿಯನ್ ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

“ತ್ರಿಪುರಾದ ಗುಮ್ಟಿ ನದಿಯ ಮೇಲ್ಭಾಗದ ದುಂಬೂರು ಅಣೆಕಟ್ಟನ್ನು ತೆರೆಯುವ ಮೂಲಕ ಬಾಂಗ್ಲಾದೇಶದ ಪೂರ್ವ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಪ್ರಸ್ತುತ ಪ್ರವಾಹದ ಪರಿಸ್ಥಿತಿ ಉಂಟಾಗಿದೆ ಎಂದು ಬಾಂಗ್ಲಾದೇಶದಲ್ಲಿ ಕಳವಳ ವ್ಯಕ್ತಪಡಿಸುವುದನ್ನು ನಾವು ನೋಡಿದ್ದೇವೆ. ಇದು ವಾಸ್ತವಿಕವಾಗಿ ಸರಿಯಲ್ಲ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Bangladesh Crisis: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾರನ್ನು ಹಸ್ತಾಂತರಿಸಲು ಭಾರತಕ್ಕೆ ಪ್ರತಿಪಕ್ಷ ಬಿಎನ್‌ಪಿ ಒತ್ತಾಯ

ಗುಮ್ಟಿ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ಈಶಾನ್ಯ ಭಾರತದ ರಾಜ್ಯವಾದ ತ್ರಿಪುರಾ ಮೂಲಕ ಹರಿಯುತ್ತದೆ. ತ್ರಿಪುರಾದಲ್ಲಿರುವ ದುಂಬೂರ್ ಅಣೆಕಟ್ಟು ಬಾಂಗ್ಲಾದೇಶದ ಗಡಿಯಿಂದ 120 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿದೆ ಎಂದು MEA ವಿವರಿಸಿದೆ. ಆದರೆ, ಬಾಂಗ್ಲಾದೇಶದಲ್ಲಿ ವಿನಾಶಕ್ಕೆ ಕಾರಣವಾದ ಪ್ರವಾಹವು ಅಣೆಕಟ್ಟಿನ ಕೆಳಗಿರುವ ದೊಡ್ಡ ಜಲಾನಯನ ಪ್ರದೇಶಗಳಿಂದ ನೀರಿನಿಂದ ಉಂಟಾಗಿದೆ ಎಂದು ಅದು ಹೇಳಿದೆ.

ಬಾಂಗ್ಲಾದೇಶದ ಆರು ಜಿಲ್ಲೆಗಳಲ್ಲಿ ಸುಮಾರು 18 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಎಂಟು ಜಿಲ್ಲೆಗಳಲ್ಲಿ 3 ಮಿಲಿಯನ್ ಜನರು ಸಿಲುಕಿಕೊಂಡಿದ್ದಾರೆ. ತ್ರಿಪುರಾ ಮತ್ತು ಬಾಂಗ್ಲಾದೇಶದ ಪಕ್ಕದ ಜಿಲ್ಲೆಗಳಲ್ಲಿ ಆಗಸ್ಟ್ 21ರಿಂದ ಭಾರೀ ಮಳೆಯು ಮುಂದುವರಿದಿದೆ. ಇದು ತ್ರಿಪುರಾದಿಂದ ನೀರಿನ ಸ್ವಯಂಚಾಲಿತ ಬಿಡುಗಡೆಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ