
ನವದೆಹಲಿ, ನವೆಂಬರ್ 3: ಬಹುಕೋಟಿ ವಂಚನೆ ಮಾಡಿ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು (Mehul Choksi) ಭಾರತಕ್ಕೆ ಹಸ್ತಾಂತರಿಸಬೇಕೆಂದು ಬೆಲ್ಜಿಯಂನ ನ್ಯಾಯಾಲಯ ಆದೇಶಿಸಿತ್ತು. ಆದರೆ, ಆ ಆದೇಶವನ್ನು ಪ್ರಶ್ನಿಸಿ ಅವರು ಬೆಲ್ಜಿಯಂನ ಕ್ಯಾಸೇಶನ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಕ್ಯಾಸೇಶನ್ ನ್ಯಾಯಾಲಯವು ಬೆಲ್ಜಿಯಂನ ಸುಪ್ರೀಂ ಕೋರ್ಟ್ ಆಗಿದೆ.
ಅಕ್ಟೋಬರ್ 17ರಂದು ಆಂಟ್ವೆರ್ಪ್ನ ಮೇಲ್ಮನವಿ ನ್ಯಾಯಾಲಯದ ನಾಲ್ವರು ಸದಸ್ಯರ ದೋಷಾರೋಪಣಾ ಕೊಠಡಿಯು ನವೆಂಬರ್ 29, 2024ರಂದು ಜಿಲ್ಲಾ ನ್ಯಾಯಾಲಯದ ಪೂರ್ವ-ವಿಚಾರಣಾ ಕೊಠಡಿಯು ಹೊರಡಿಸಿದ ಆದೇಶಗಳಲ್ಲಿ ಯಾವುದೇ ದೋಷವಿಲ್ಲ ಎಂದು ಕಂಡುಕೊಂಡಿತು. ಮುಂಬೈ ವಿಶೇಷ ನ್ಯಾಯಾಲಯವು ಮೇ 2018 ಮತ್ತು ಜೂನ್ 2021ರಲ್ಲಿ ಹೊರಡಿಸಿದ ಬಂಧನ ವಾರಂಟ್ಗಳನ್ನು ಜಾರಿಗೊಳಿಸಬಹುದಾಗಿದೆ ಎಂದು ಘೋಷಿಸಿತು. ಇದು ಚೋಕ್ಸಿಯ ಹಸ್ತಾಂತರಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಇದನ್ನೂ ಓದಿ: ಮೆಹುಲ್ ಚೋಕ್ಸಿ ಹಸ್ತಾಂತರ ಕೋರಿ ಬೆಲ್ಜಿಯಂಗೆ ಭಾರತ ಮನವಿ
13,000 ಕೋಟಿ ರೂ. ಮೊತ್ತದ ಪಿಎನ್ಬಿ ಹಗರಣದ ಪ್ರಮುಖ ಆರೋಪಿಯಾಗಿರುವ, ಭಾರತದಿಂದ ಪರಾರಿಯಾಗಿರುವ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ತೀರ್ಪು ನೀಡಲಾಗಿತ್ತು. 13,000 ಕೋಟಿ ರೂ. ಹಗರಣದಲ್ಲಿ, ಮೆಹುಲ್ ಚೋಕ್ಸಿ ಒಬ್ಬನೇ 6,400 ಕೋಟಿ ರೂ.ಗಳನ್ನು ವಂಚನೆ ಮಾಡಿದ್ದಾರೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ತನ್ನ ಆರೋಪಪಟ್ಟಿಯಲ್ಲಿ ಆರೋಪಿಸಿದೆ.
ಇದನ್ನೂ ಓದಿ: ಸ್ವಿಜರ್ಲೆಂಡ್ಗೆ ಪರಾರಿಯಾಗುವ ಮೆಹುಲ್ ಚೋಕ್ಸಿಯ ಪ್ಲಾನ್ ಭಾರತದಿಂದ ವಿಫಲಗೊಂಡಿದ್ದು ಹೇಗೆ?
ಈ ಹಗರಣ ಪತ್ತೆಯಾಗುವ ಕೆಲವು ದಿನಗಳ ಮೊದಲು, ಜನವರಿ 2018ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾಗೆ ಪರಾರಿಯಾಗಿದ್ದ ಮೆಹುಲ್ ಚೋಕ್ಸಿ ಚಿಕಿತ್ಸೆ ಪಡೆಯಲು ಬೆಲ್ಜಿಯಂನಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನ ವಿಶೇಷ ನ್ಯಾಯಾಲಯವು ಹೊರಡಿಸಿದ ಬಂಧನ ವಾರಂಟ್ಗಳ ಆಧಾರದ ಮೇಲೆ ಭಾರತವು ಆಗಸ್ಟ್ 27, 2024ರಂದು ಬೆಲ್ಜಿಯಂಗೆ ಹಸ್ತಾಂತರ ವಿನಂತಿಯನ್ನು ಕಳುಹಿಸಿತ್ತು. ಚೋಕ್ಸಿಯ ಸುರಕ್ಷತೆ, ಭಾರತದಲ್ಲಿ ವಿಚಾರಣೆಯ ಸಮಯದಲ್ಲಿ ಅವರು ಎದುರಿಸಬೇಕಾದ ಆರೋಪಗಳು, ಜೈಲು ವ್ಯವಸ್ಥೆಗಳು, ಮಾನವ ಹಕ್ಕುಗಳು ಮತ್ತು ವೈದ್ಯಕೀಯ ಅಗತ್ಯಗಳ ಬಗ್ಗೆ ಭಾರತವು ಬೆಲ್ಜಿಯಂಗೆ ಹಲವಾರು ಭರವಸೆಗಳನ್ನು ನೀಡಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ