
ಟೆಹ್ರಾನ್, ಜುಲೈ 11: ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿಯವರನ್ನು (Ayatollah Ali Khamenei) ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿ ಹತ್ಯೆ ಮಾಡಿದ್ದವು. ಇದೀಗ ಖಮೇನಿಯವರ ಅಂತ್ಯಕ್ರಿಯೆಗಳು ನೆರವೇರಿದ್ದು, ಭಾರತ ಸೇರಿದಂತೆ ಹಲವು ದೇಶಗಳ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಭದ್ರತಾ ದೃಷ್ಟಿಯಿಂದ ಅಯತೊಲ್ಲಾ ಅಲಿ ಖಮೇನಿಯವರ ಮಗನಾದ ಈಗಿನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಮೊದಲ ಪ್ರತಿಕ್ರಿಯೆ ನೀಡಿರುವ ಮೊಜ್ತಬಾ ಖಮೇನಿ ತಮ್ಮ ತಂದೆ ಹಾಗೂ ಇರಾನ್ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
“ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ಹತ್ಯೆಯಾದ ಎಲ್ಲಾ ಹುತಾತ್ಮರ ರಕ್ತದ ಸೇಡನ್ನು ತೀರಿಸಿಕೊಳ್ಳುವುದಾಗಿ ನಾವು ಶಪಥ ಮಾಡುತ್ತೇವೆ. ಇರಾನ್ ಖಂಡಿತವಾಗಿಯೂ ಈ ಪ್ರತಿಜ್ಞೆಯನ್ನು ಪೂರ್ಣಗೊಳಿಸಲಿದೆ” ಎಂದು ಮೊಜ್ತಬಾ ಖಮೇನಿ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ. “ನಾವು ಇರಲಿ, ಇಲ್ಲದಿರಲಿ. ಸೇಡು ತೀರಿಸಿಕೊಳ್ಳುವುದು ಖಚಿತ,” ಎಂದು ಅವರು ಟ್ರಂಪ್ಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಅಮೆರಿಕದಿಂದ ಇರಾನ್ ಮೇಲೆ ಮತ್ತೆ ಭೀಕರ ದಾಳಿ: ಅಲಿ ಖಮೇನಿ ಅಂತ್ಯಕ್ರಿಯೆಗೂ ಮುನ್ನ ಉದ್ವಿಗ್ನತೆ
ಫೆಬ್ರವರಿ 28ರಂದು ಟೆಹ್ರಾನ್ನಲ್ಲಿರುವ ಅಯತೊಲ್ಲಾ ಅಲಿ ಖಮೇನಿ ಅವರ ನಿವಾಸದ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅವರು ಮೃತಪಟ್ಟಿದ್ದರು. ಅವರ ಜೊತೆ ಅವರ ಮೊಮ್ಮಗು ಸೇರಿದಂತೆ ಇನ್ನೂ ಹಲವು ಕುಟುಂಬಸ್ಥರು ಕೂಡ ಮೃತಪಟ್ಟಿದ್ದರು. ಮೊಜ್ತಬಾ ಖಮೇನಿಗೂ ಗಂಭೀರ ಗಾಯಗಳಾಗಿತ್ತು. ಅವರ ನಿಧನದ ಕೆಲವು ತಿಂಗಳುಗಳ ನಂತರ ಈಗ ನಡೆದ ಅಧಿಕೃತ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಗುರುವಾರ ತಡರಾತ್ರಿ ಮಶಾದ್ನಲ್ಲಿರುವ ಪವಿತ್ರ ಇಮಾಮ್ ರೆಜಾ ಮಸೀದಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ದಫನ ಮಾಡಲಾಯಿತು.
ಇರಾನ್ ತನ್ನನ್ನು ಹತ್ಯೆ ಮಾಡಿದರೆ ಬಾಂಬ್ ದಾಳಿ ನಡೆಸಿ ಎಂದ ಟ್ರಂಪ್:
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ತಮ್ಮನ್ನು ಹತ್ಯೆ ಮಾಡಲು ಇರಾನ್ ರೂಪಿಸುತ್ತಿರುವ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಖಮೇನಿ ಅವರ ಹೇಳಿಕೆಗೂ ಒಂದು ದಿನ ಮುಂಚಿತವಾಗಿ ‘ನ್ಯೂಯಾರ್ಕ್ ಪೋಸ್ಟ್’ ಜೊತೆ ಮಾತನಾಡಿದ್ದ ಟ್ರಂಪ್, “ನಾನು ಬಹಳ ದಿನಗಳಿಂದ ಇರಾನ್ನ ಹಿಟ್ ಲಿಸ್ಟ್ನಲ್ಲಿದ್ದೇನೆ. ನನಗೆ ಏನಾದರೂ ಸಂಭವಿಸಿದರೆ, ಇರಾನ್ ಮೇಲೆ ಇದುವರೆಗೆ ಯಾರೂ ನೋಡಿರದ ಮಟ್ಟದಲ್ಲಿ ಬಾಂಬ್ ದಾಳಿ ನಡೆಸುವಂತೆ ನಾನು ಈಗಾಗಲೇ ನನ್ನ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇರಾನ್ ಜೊತೆ ಮಾತುಕತೆಗೆ ಅಮೆರಿಕ ಒಪ್ಪಿಗೆ, ಕದನ ವಿರಾಮ ಅಂತ್ಯ!; ಟ್ರಂಪ್ ಘೋಷಣೆ
ಇರಾನ್-ಅಮೆರಿಕ ಯುದ್ಧದ ಮೊದಲ ದಿನವಾದ ಫೆಬ್ರವರಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದರು. ಜುಲೈ 4 ಮತ್ತು ಜುಲೈ 9ರ ನಡುವೆ ಇರಾನ್ನಲ್ಲಿ ಅಂತ್ಯಕ್ರಿಯೆಯ ಸೇವೆ ನಡೆಯಿತು. ಜುಲೈ 9ರಂದು ಮಶಾದ್ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಭಾರತ ಮತ್ತು ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಇರಾನಿನ ಸೇನೆಯು ವಾಯು ಮತ್ತು ಗಡಿ ರಂಗಗಳಲ್ಲಿ ಭದ್ರತೆಯನ್ನು ಬಲಪಡಿಸಿತು. ಗಮನಾರ್ಹ ಸಂಗತಿಯೆಂದರೆ, ಇರಾನ್ನಲ್ಲಿ ಯುದ್ಧ ಆರಂಭವಾದಾಗಿನಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ತಂದೆಯ ಅಂತ್ಯಕ್ರಿಯೆಯ ಕಾರ್ಯಕ್ರಮದಿಂದಲೂ ಅವರು ತೀವ್ರ ಭದ್ರತಾ ಕಾರಣಗಳಿಗಾಗಿ ಸಂಪೂರ್ಣವಾಗಿ ದೂರ ಉಳಿದಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ