ಕೆನಡಾದಲ್ಲಿ ಭಾರತೀಯ ಸಮುದಾಯದವರ ಸ್ಥಳಗಳ ಮೇಲೆ ಖಲಿಸ್ತಾನೀ ಉಗ್ರರಿಂದ ದಾಳಿಗೆ ಸಂಚು: ಗುಪ್ತಚರರ ಮಾಹಿತಿ

|

Updated on: Sep 20, 2023 | 12:57 PM

Canada Updates: ಕೆನಡಾದಲ್ಲಿ ಖಲಿಸ್ತಾನೀ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್​ನ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ್ದು ಅಲ್ಲಿನ ಖಲಿಸ್ತಾನೀ ಸಂಘಟನೆಗಳಿಗೆ ಇನ್ನಷ್ಟು ಕುಮ್ಮಕ್ಕು ಸಿಕ್ಕಂತಾಗಿದೆ. ಇದೀಗ ಕೆನಡಾದಲ್ಲಿರುವ ಭಾರತೀಯರು ಮತ್ತವರ ಸ್ಥಳಗಳ ಮೇಲೆ ಖಲಿಸ್ತಾನೀ ಪರ ಉಗ್ರರಿಂದ ದಾಳಿಗಳಾಗುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.

ಕೆನಡಾದಲ್ಲಿ ಭಾರತೀಯ ಸಮುದಾಯದವರ ಸ್ಥಳಗಳ ಮೇಲೆ ಖಲಿಸ್ತಾನೀ ಉಗ್ರರಿಂದ ದಾಳಿಗೆ ಸಂಚು: ಗುಪ್ತಚರರ ಮಾಹಿತಿ
ಖಲಿಸ್ತಾನೀ
Follow us on

ನವದೆಹಲಿ, ಸೆಪ್ಟೆಂಬರ್ 20: ಕೆನಡಾದಲ್ಲಿ ರಾಜಕೀಯ ಬೆಂಬಲದಿಂದ ಪ್ರೇರಿತಗೊಂಡಿರುವ ಖಲಿಸ್ತಾನೀ ಪರ ಸಂಘಟನೆಗಳು ದುಷ್ಕೃತ್ಯಗಳನ್ನು ಎಸಗಲು ಸಜ್ಜಾಗಿವೆ. ಕೆನಡಾದಲ್ಲಿರುವ ಭಾರತೀಯರು ಮತ್ತು ಭಾರತೀಯ ಅಧಿಕಾರಿಗಳ ವಿರುದ್ಧ ದಾಳಿ ಎಸಗಲು ಸಂಚು ರೂಪಿಸುತ್ತಿವೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯರು, ಭಾರತೀಯ ಉದ್ಯಮಿಗಳು ಮತ್ತು ಹಿಂದೂ ಮಂದಿರಗಳನ್ನು ಗುರಿಯಾಗಿಸಿ ದಾಳಿಗಳಾಗಬಹುದು. ಖಲಿಸ್ತಾನೀ ಉಗ್ರರು ಮತ್ತು ಭಾರತೀಯರ ಮಧ್ಯೆ ಗಲಭೆಗಳಾಗುವ ಸಾಧ್ಯತೆ ಇದೆ ಎಂದು ಈ ಗುಪ್ತಚರರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಬಳಿ ಖಲಿಸ್ತಾನೀ ಹೋರಾಟಗಾರರು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದೂ ಎಚ್ಚರಿಸಲಾಗಿದೆ.

ಕೆನಡಾದ ಒಟ್ಟಾವ ನಗರದಲ್ಲಿ ಪ್ರಧಾನ ಭಾರತೀಯ ರಾಯಭಾರ ಕಚೇರಿ ಇದೆ. ಟೊರಂಟೋ ಮತ್ತು ವಾಂಕೂವರ್ ನಗರಗಳಲ್ಲೂ ರಾಜತಾಂತ್ರಿಕ ಕಚೇರಿಗಳಿವೆ. ಖಲಿಸ್ತಾನೀ ಪ್ರತ್ಯೇಕತಾವಾದಿ ಹೋರಾಟಗಾರರು ಈ ಕಚೇರಿಗಳ ಎದುರು ಪ್ರತಿಭಟನೆಗಳನ್ನು ನಡೆಸಬಹುದು. ಅಷ್ಟೇ ಅಲ್ಲ ಆ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗುವ ಸಾಧ್ಯತೆ ಇದೆ. ಭಾರತೀಯ ರಾಜತಾಂತ್ರಿಕ ಕಚೇರಿ ಸಿಬ್ಬಂದಿಗೆ ಪ್ರಾಣಾಪಾಯ ಇಲ್ಲದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ನಿಜ್ಜರ್ ಹತ್ಯೆ ಪ್ರಕರಣ: ಭಾರತದ ವಿರುದ್ಧ ಗುದ್ದಾಡಲು ಸದಸ್ಯ ರಾಷ್ಟ್ರಗಳ ಬೆಂಬಲ ಕೇಳಿದ ಕೆನಡಾ

ಭಾರತೀಯ ಸಮುದಾಯದವರು ನಡೆಸುವ ಹೋಟೆಲ್ ಇತ್ಯಾದಿಗಳು ದಾಳಿಗೆ ಹೆಚ್ಚು ಈಡಾಗಬಹುದು. ಕೆನಡಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಬಹುದು ಎಂದು ಗುಪ್ತಚರರು ಮಾಹಿತಿ ನೀಡಿರುವುದು ತಿಳಿದುಬಂದಿದೆ.

ಕಳೆದ ಕೆಲ ತಿಂಗಳಲ್ಲಿ ಕೆನಡಾದಲ್ಲಿ ಹಿಂದೂ ಮಂದಿರಗಳ ಮೇಲೆ ದಾಳಿ ಘಟನೆಗಳಾಗಿದ್ದವು. ಮಹಾತ್ಮ ಗಾಂಧಿ ಪ್ರತಿಮೆಗೂ ಹಾನಿ ಮಾಡಲಾಗಿತ್ತು. ಭಾರತೀಯ ಸಮುದಾಯದವರ ಕೆಫೆ ಮೇಲೆ ದಾಳಿ ಮಾಡಿ ಬಲವಂತವಾಗಿ ಮುಚ್ಚಿಸಲಾಗಿತ್ತು. ಇಷ್ಟಾದರೂ ಕೆನಡಾದ ಸ್ಥಳೀಯ ಆಡಳಿತದಿಂದ ಸೂಕ್ತ ಕ್ರಮ ಬರಲಿಲ್ಲ ಎಂಬ ಆರೋಪ ಇದೆ.

ಇದನ್ನೂ ಓದಿ: ಹಿಂದೂಗಳೇ ಕೆನಡಾ ಬಿಟ್ಟು ತೊಲಗಿ: ಖಲಿಸ್ತಾನೀ ಪ್ರತ್ಯೇಕತಾವಾದಿ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯಿಂದ ಕೆನಡಾ ಹಿಂದೂಗಳಿಗೆ ಬೆದರಿಕೆ ಕರೆ

ಈ ಹಿನ್ನೆಲೆಯಲ್ಲಿ ಗುಪ್ತಚರರು ಎಚ್ಚರಿಸಿದ ರೀತಿಯಲ್ಲಿ ಕೆನಡಾದ್ಯಂತ ಭಾರತೀಯ ಸಮುದಾಯದವರು ಮತ್ತವರ ಸ್ಥಳಗಳ ಮೇಲೆ ಮತ್ತೆ ದಾಳಿಗಳಾದರೆ ಅಚ್ಚರಿ ಎನಿಸುವುದಿಲ್ಲ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರೇ ಖುದ್ದಾಗಿ ಭಾರತ ಸರ್ಕಾರದ ಮೇಲೆ ಗುರುತರ ಆರೋಪ ಮಾಡಿದ್ದಾರೆ. ಖಲಿಸ್ತಾನಿ ಉಗ್ರ ನಿಜ್ಜರ್​ನ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಅವರು ಬಹಿರಂಗವಾಗಿಯೇ ಆರೋಪಿಸಿದ್ದಾರೆ. ಇದರಿಂದ ಕೆನಡಾದ ಖಲಿಸ್ತಾನೀ ಪರ ವ್ಯಕ್ತಿಗಳು ಇನ್ನಷ್ಟು ಉಗ್ರಗೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Wed, 20 September 23