
ಲಾಹೋರ್, ಮೇ 19: ಭಾರತ ಮತ್ತು ಪಾಕಿಸ್ತಾನ(Pakistan) ವಿಭಜನೆಯಾಗಿ 79 ವರ್ಷಗಳ ನಂತರ, ಪಾಕಿಸ್ತಾನ ಸರ್ಕಾರವು ಲಾಹೋರ್ನ ಇತಿಹಾಸವನ್ನು ಪುನಃ ಬರೆಯುವ ಮಹತ್ವದ ಸಾಹಸಕ್ಕೆ ಕೈಹಾಕಿದೆ. ದಶಕಗಳ ಹಿಂದೆ ಇಸ್ಲಾಮೀಕರಣದ ಭಾಗವಾಗಿ ಬದಲಾಗಿದ್ದ ರಸ್ತೆಗಳು, ಚೌಕಗಳು ಮತ್ತು ಐತಿಹಾಸಿಕ ಸ್ಥಳಗಳ ಹೆಸರುಗಳನ್ನು ತೆಗೆದುಹಾಕಿ, ಅವುಗಳ ಮೂಲ ಹಿಂದೂ, ಸಿಖ್ ಮತ್ತು ಬ್ರಿಟಿಷ್ ಯುಗದ ಹೆಸರುಗಳ ಸೈನ್ ಬೋರ್ಡ್ ಮರುಸ್ಥಾಪಿಸುತ್ತಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಲಾಹೋರ್ನ ಪ್ರಮುಖ ಒಂಬತ್ತು ಸ್ಥಳಗಳು ತಮ್ಮ ಮೂಲ ಗುರುತನ್ನು ಮರಳಿ ಪಡೆದಿವೆ.
ಈ ಐತಿಹಾಸಿಕ ಪುನಃಸ್ಥಾಪನೆ ಕಾರ್ಯದ ಹಿಂದೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರಿ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ದೊಡ್ಡ ಲೆಕ್ಕಾಚಾರವಿದೆ. 2025 ರಲ್ಲಿ ಮರ್ಯಮ್ ನವಾಜ್ ನೇತೃತ್ವದಲ್ಲಿ ಆರಂಭವಾದ ‘ಲಾಹೋರ್ ಅಥಾರಿಟಿ ಫಾರ್ ಹೆರಿಟೇಜ್ ರಿವೈವಲ್’ (LAHR) ಸಂಸ್ಥೆಯು ಸುಮಾರು 50 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ ಬಜೆಟ್ನಲ್ಲಿ ಈ ನಗರ ಸಂರಕ್ಷಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಯುರೋಪಿಯನ್ ದೇಶಗಳು ತಮ್ಮ ಐತಿಹಾಸಿಕ ಹೆಸರುಗಳನ್ನು ಎಂದಿಗೂ ಬದಲಾಯಿಸುವುದಿಲ್ಲ, ಅವುಗಳನ್ನು ಉಳಿಸಿಕೊಳ್ಳುತ್ತವೆ.
ಲಾಹೋರ್ನ ಪ್ರಾಚೀನ ಹೆಸರುಗಳು ನಮ್ಮ ಇತಿಹಾಸದ ಭಾಗವಾಗಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಉನ್ನತ ಮಟ್ಟದ ಸಭೆಯಲ್ಲಿ ನವಾಜ್ ಷರೀಫ್ ಪ್ರತಿಪಾದಿಸಿದ್ದಾರೆ. ಶತಮಾನಗಳಿಂದ ಸ್ಥಳೀಯ ಜನ ಸಾಮಾನ್ಯರ ನೆನಪಿನಲ್ಲಿ ಸದ್ದಿಲ್ಲದೆ ಉಳಿದುಕೊಂಡಿದ್ದ ಹಳೆಯ ಹೆಸರುಗಳು ಈಗ ಅಧಿಕೃತವಾಗಿ ಸೈನ್ಬೋರ್ಡ್ಗಳ ಮೇಲೆ ರಾರಾಜಿಸುತ್ತಿವೆ.
ಮತ್ತಷ್ಟು ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಇಸ್ಲಾಂಪುರ-ಕೃಷ್ಣ ನಗರವಾಗಿ, ಸುನ್ನತ್ ನಗರ-ಸಂತನಗರವಾಗಿ, ಮೌಲಾನಾ ಜಾಫರ್ ಅಲಿ ಖಾನ್ ಚೌಕ-ಲಕ್ಷ್ಮಿ ಚೌಕವಾಗಿ, ಬಾಬರಿ ಮಸೀದಿ ಚೌಕ-ಜೈನ ಮಂದಿರ ಚೌಕವಾಗಿ, ಮುಸ್ತಫಾಬಾದ್-ಧರ್ಮಪುರವಾಗಿ, ಸರ್ ಆಗಾ ಖಾನ್ ಚೌಕ-ಡೇವಿಸ್ ರಸ್ತೆಯಾಗಿ, ಅಲ್ಲಾಮ ಇಕ್ಬಾಲ್ ರಸ್ತೆ-ಜೈಲ್ ರಸ್ತೆಯಾಗಿ, ಫಾತಿಮಾ ಜಿನ್ನಾ ರಸ್ತೆ-ಕ್ವೀನ್ಸ್ ರಸ್ತೆಯಾಗಿ, ಬಾಗ್-ಎ-ಜಿನ್ನಾ-ಲಾರೆನ್ಸ್ ಗಾರ್ಡನ್ಸ್ ಆಗಿ ಹಳೆಯ ಹೆಸರುಗಳನ್ನು ಪಡೆಯಲಿವೆ.
ಇವುಗಳಲ್ಲಿ ಜೈನ ಮಂದಿರ ಚೌಕ ಇತಿಹಾಸ ರೋಚಕವಾಗಿದೆ. 1990 ರ ದಶಕದಲ್ಲಿ ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಸೃಷ್ಟಿಯಾಗಿದ್ದ ಧಾರ್ಮಿಕ ಉದ್ವಿಗ್ನತೆಯ ಸಂದರ್ಭದಲ್ಲಿ ಈ ಚೌಕಕ್ಕೆ ‘ಬಾಬರಿ ಮಸೀದಿ ಚೌಕ’ ಎಂದು ಹೆಸರಿಡಲಾಗಿತ್ತು. ಈಗ 79 ವರ್ಷಗಳ ನಂತರ ಅದು ಮತ್ತೆ ಜೈನ ಮಂದಿರ ಚೌಕ ಆಗಿದೆ.
ದಶಕಗಳಿಂದ ತೀವ್ರ ಸೈದ್ಧಾಂತಿಕ ಇಸ್ಲಾಮೀಕರಣಕ್ಕೆ ಒಗ್ಗಿಕೊಂಡಿರುವ ಪಾಕಿಸ್ತಾನದಲ್ಲಿ, ಈ ಹಿಂದೂ-ಸಿಖ್ ಹೆಸರುಗಳ ಪುನಃಸ್ಥಾಪನೆಗೆ ಯಾವುದೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗದೇ ಇರುವುದು ಜಾಗತಿಕ ರಾಜತಾಂತ್ರಿಕರನ್ನು ಅಚ್ಚರಿಗೊಳಿಸಿದೆ. ಲಾಹೋರ್ನ ಈ ಯಶಸ್ಸಿನ ಬೆನ್ನಲ್ಲೇ, ಯೋಜನೆಯ ಎರಡನೇ ಹಂತದಲ್ಲಿ ಸಿಂಧ್ ಮತ್ತು ಖೈಬರ್ ಪಖ್ತುಂಖ್ವಾದ ಕೆಲವು ಭಾಗಗಳಲ್ಲೂ ಹಳೆಯ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.
ಭಾರತದ ಅಮೃತಸರದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಲಾಹೋರ್, ಧರ್ಮದ ಹೆಸರಿನಲ್ಲಿ ಕತ್ತರಿಸಿ ಹೋಗಿದ್ದ ತನ್ನ ವೈವಿಧ್ಯಮಯ ಇತಿಹಾಸದ ಬೇರುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ