ಸೇತುವೆ ಮೇಲಿಂದ ರಭಸವಾಗಿ ಹರಿಯುವ ನದಿಗೆ ಬಲವಂತವಾಗಿ ನಾಯಿಯನ್ನು ಎಸೆದ ಮಹಿಳೆ

ನೇಪಾಳದ ಬಜಂಗ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಸೇತುವೆಯ ಮೇಲಿಂದ ನಾಯಿಯನ್ನು ರಭಸವಾಗಿ ಹರಿಯುವ ಸೇತಿ ನದಿಗೆ ಎಸೆದ ಅಮಾನವೀಯ ಕೃತ್ಯ ನಡೆದಿತ್ತು. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿಪ್ರಿಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಾಯಿಗಳನ್ನು ದೈವಿಕವಾಗಿ ಪೂಜಿಸುವ 'ಕುಕುರ್ ತಿಹಾರ್' ಆಚರಿಸುವ ನೇಪಾಳದಲ್ಲಿ ಇಂತಹ ಕ್ರೌರ್ಯ ನಡೆದಿರುವುದು ಆಘಾತಕಾರಿಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸೇತುವೆ ಮೇಲಿಂದ ರಭಸವಾಗಿ ಹರಿಯುವ ನದಿಗೆ  ಬಲವಂತವಾಗಿ ನಾಯಿಯನ್ನು ಎಸೆದ ಮಹಿಳೆ
ನಾಯಿ
Image Credit source: Screen shot taken from Video

Updated on: Sep 18, 2026 | 1:14 PM

ಕಟ್ಮಂಡು, ಸೆಪ್ಟೆಂಬರ್ 18: ಮನುಷ್ಯನನ್ನು ತನಗಿಂತಲೂ ಹೆಚ್ಚಾಗಿ ಪ್ರೀತಿಸುವ ಏಕೈಕ ಜೀವಿ ನಾಯಿ. ತನ್ನ ಮಾಲೀಕನ ಮುಖದಲ್ಲಿನ ಸಣ್ಣ ನಗುವಿಗೆ ಬಾಲ ಅಲ್ಲಾಡಿಸುತ್ತಾ, ಅವರು ತೋರಿಸುವ ಪ್ರೀತಿಯ ನೆರಳಲ್ಲೇ ಬದುಕುವ ಅಂತಹ ಮೂಕ ಪ್ರಾಣಿಯೊಂದಕ್ಕೆ, ತಾನು ನಂಬಿದ ಮನುಷ್ಯರೇ ಅಷ್ಟು ಘೋರ ಸಾವಿನ ಶಿಕ್ಷೆ ವಿಧಿಸಬಹುದು ಎಂದು ಆ ಮುಗ್ಧ ಜೀವ ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ.

ನೇಪಾಳದ ಬಜಂಗ್ ಜಿಲ್ಲೆಯ ಸೇತಿ ನದಿಯ ಪಂಕೋಟಕ್ ಸೇತುವೆಯ ಮೇಲೆ ಆ ದಿನ ನಡೆದದ್ದು ಕೇವಲ ಒಂದು ಅಪರಾಧವಲ್ಲ, ಬದಲಾಗಿ ಮನುಷ್ಯತ್ವಕ್ಕೇ ಬಿದ್ದ ಕಪ್ಪು ಚುಕ್ಕೆ. ಆ ಮಹಿಳೆ ಸೇತುವೆಯತ್ತ ಬರುತ್ತಿದ್ದಾಗಲೂ, ಆ ಶ್ವಾನ ಯಾವುದೇ ಪ್ರತಿರೋಧ ತೋರದೆ, ಎಂದಿನಂತೆಯೇ ಶಾಂತವಾಗಿ ಆಕೆಯ ಜೊತೆಯೇ ಹೆಜ್ಜೆ ಹಾಕಿತ್ತು. ಆದರೆ, ಆ ಸೇತುವೆಯ ಅಂಚಿನಲ್ಲಿ ನಿಂತು ತನ್ನನ್ನು ಅಷ್ಟು ಎತ್ತರದಿಂದ ರಭಸವಾಗಿ ಹರಿಯುವ ನದಿಗೆ ತಳ್ಳಲಾಗುತ್ತದೆ ಎಂದು ಆ ಜೀವಕ್ಕೆ ಹೇಗೆ ತಾನೇ ತಿಳಿದೀತು.

ಬೇಡ, ಹಾಗೆ ಮಾಡಬೇಡಿ, ಎಂದು ಪಕ್ಕದಲ್ಲಿದ್ದ ಪಶುವೈದ್ಯ ನಬಿನ್ ಪಾಂಡೆ ಅಂಗಲಾಚಿ ಬೇಡಿಕೊಂಡರೂ ಆಕೆಯ ಕಣ್ಣಿಗೆ ಕರುಣೆ ಕಾಣಿಸಲಿಲ್ಲ. ಕ್ಷಣಾರ್ಧದಲ್ಲಿ ಆ ಮೂಕ ಪ್ರಾಣಿಯನ್ನು ನೀರಿನ ರಭಸದ ಪ್ರವಾಹಕ್ಕೆ ಎಸೆದುಬಿಡಲಾಯಿತು. ಮೇಲಿಂದ ಕೆಳಕ್ಕೆ ಬೀಳುವ ಆ ನಡುಗುವ ಕ್ಷಣದಲ್ಲೂ, ಅದು ತಾನು ನಂಬಿದ ಅದೇ ಮನುಷ್ಯರನ್ನೇ ದಿಟ್ಟಿಸಿ ನೋಡುತ್ತಿತ್ತೇನೋ. ಕಲ್ಲಿನ ನಡುವೆ ಉಕ್ಕಿ ಹರಿಯುತ್ತಿದ್ದ ಪ್ರವಾಹದಲ್ಲಿ ಸ್ವಲ್ಪ ಹೊತ್ತು ಉಸಿರಾಡಲು, ಈಜಿ ದಡ ಸೇರಲು ಅದು ಹರಸಾಹಸ ಪಟ್ಟಿತು, ಕೊನೆಗೆ ರಕ್ಕಸ ನದಿಯ ಅಲೆಗಳೊಳಗೆ ಸದಾಕಾಲ ಕಣ್ಮರೆಯಾಗಿಹೋಯಿತು.

ದೀಪಾವಳಿಯ ವೇಳೆ ನಾಯಿಗಳಿಗೆ ಹೂವಿನ ಮಾಲೆಯಿಟ್ಟು, ತಿಲಕವಿಟ್ಟು ‘ಕುಕುರ್ ತಿಹಾರ್’ ಎಂದು ದೈವಿಕವಾಗಿ ಪೂಜಿಸುವ ಪವಿತ್ರ ನೆಲದಲ್ಲೇ ಈ ಕ್ರೌರ್ಯ ನಡೆದಿರುವುದು ಎದೆ ಕಲಕುವಂತಿದೆ. ಅದು ಕಚ್ಚಿತ್ತು ಎಂಬ ಒಂದೇ ಒಂದು ಒಣ ಕಾರಣಕ್ಕೆ ಒಂದು ಜೀವವನ್ನು ನದಿಗೆಸೆಯುವಷ್ಟು ಕ್ರೂರಿಗಳಾಗಿದ್ದಾರೆ.

ಮತ್ತಷ್ಟು ಓದಿ: ಜನರ ಗೋಳು ಕೇಳದ ಅಧಿಕಾರಿಗಳಿಗೆ ವಿಶಿಷ್ಟ ಪಾಠ: ನಾಸಿಕ್ ಪಾಲಿಕೆ ಅಧಿಕಾರಿ ಕಚೇರಿಯೊಳಗೆ ನಾಯಿಗಳ ಬಿಟ್ಟ ಯುವಸೇನಾ ಕಾರ್ಯಕರ್ತರು

ಸೇತುವೆಯ ಮೇಲಿಂದ ಮುಗ್ಧ ನಾಯಿಯೊಂದನ್ನು ರಭಸವಾಗಿ ಹರಿಯುವ ನದಿಗೆ ಮಹಿಳೆಯೊಬ್ಬಳು ನಿರ್ದಯವಾಗಿ ಎಸೆದಿರುವ ಕರುಳು ಹಿಂಡುವ ಆಘಾತಕಾರಿ ಘಟನೆ ನೇಪಾಳದ ಬಜಂಗ್ ಜಿಲ್ಲೆಯಲ್ಲಿ ನಡೆದಿದೆ. ಸೆಪ್ಟೆಂಬರ್ 2 ರಂದು ಜೈಪೃಥ್ವಿ ಪುರಸಭೆಯ ಚೈನ್‌ಪುರ ಪ್ರದೇಶದಲ್ಲಿ ನಡೆದ ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಗತ್ತಿನಾದ್ಯಂತ ಪ್ರಾಣಿಪ್ರಿಯರು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ.

ವಿಡಿಯೋ

ಪಂಕೋಟಕ್ ಸೇತುವೆಯ ಮೇಲೆ ನಾಯಿಯನ್ನು ಎಳೆದುಕೊಂಡು ಬಂದ ಮಹಿಳೆ, ಸ್ಥಳೀಯರು ತಡೆಯಲು ಯತ್ನಿಸಿದರೂ ಕ್ಯಾರೆ ಎನ್ನದೆ ಅದನ್ನು ಸೇತಿ ನದಿಯ ಭೀಕರ ಪ್ರವಾಹಕ್ಕೆ ಎಸೆದಿದ್ದಾಳೆ. ಸ್ಥಳೀಯ ಜಾತ್ರೆಯ ಫೋಟೋ ತೆಗೆಯಲು ಬಂದಿದ್ದ ಪಶುವೈದ್ಯ ನಬಿನ್ ಪಾಂಡೆ ಈ ಕೃತ್ಯವನ್ನು ಕಣ್ಣಾರೆ ಕಂಡು ಮಹಿಳೆಯನ್ನು ತಡೆಯಲು ಯತ್ನಿಸಿದ್ದರು. ಆದರೆ ಆಕೆ ಕೇಳದೆ ನಾಯಿಯನ್ನು ಕೆಳಕ್ಕೆ ಎಸೆದಿದ್ದು, ನೀರಿನ ರಭಸಕ್ಕೆ ನಾಯಿ ಸ್ವಲ್ಪ ದೂರ ಕೊಚ್ಚಿಹೋಗಿ ನಂತರ ಕಣ್ಮರೆಯಾಗಿದೆ.

ಪೊಲೀಸ್ ತನಿಖೆ ಆರಂಭ: ಘಟನೆಯ ವಿಡಿಯೋ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದಂತೆ ಬಜಂಗ್ ಜಿಲ್ಲಾ ಪೊಲೀಸ್ ಕಚೇರಿ ಮಾಹಿತಿ ಅಧಿಕಾರಿ ದೀಪಕ್ ಬಿಶ್ತ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಆರಂಭವಾಗಿದ್ದು, ವಿಡಿಯೋ ಆಧರಿಸಿ ಆ ಮಹಿಳೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ನೇಪಾಳದ ದಂಡ ಸಂಹಿತೆಯ ಪ್ರಕಾರ ಪ್ರಾಣಿಗಳಿಗೆ ಕ್ರೂರವಾಗಿ ಹಿಂಸೆ ನೀಡುವುದು ಅಥವಾ ಅಮಾನವೀಯವಾಗಿ ಕೊಲ್ಲುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ಮತ್ತು ಜೈಲು ಶಿಕ್ಷೆಗೆ ಅವಕಾಶವಿದೆ.

ನೇಪಾಳದಲ್ಲಿ ದೀಪಾವಳಿಯ ಸಂದರ್ಭದಲ್ಲಿ ‘ಕುಕುರ್ ತಿಹಾರ್’ ಹಬ್ಬವನ್ನು ಆಚರಿಸಿ, ನಾಯಿಗಳಿಗೆ ಹೂವಿನ ಮಾಲೆ ಹಾಕಿ ತಿಲಕವಿಟ್ಟು ಪೂಜಿಸುವ ಪವಿತ್ರ ಸಂಪ್ರದಾಯವಿದೆ. ಶ್ವಾನಗಳನ್ನು ದೈವಿಕವಾಗಿ ಕಾಣುವ ನೆಲದಲ್ಲೇ ಇಂತಹ ಕ್ರೂರ ಕೃತ್ಯ ನಡೆದಿರುವುದು ಸಾರ್ವಜನಿಕರ ಆಘಾತ ಮತ್ತು ನೋವನ್ನು ದುಪ್ಪಟ್ಟು ಮಾಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us