
ದುರಂಧರ್ ಸರಣಿಯ ಸಿನಿಮಾಗಳು ಪಾಕಿಸ್ತಾನದ ಭೂಗತ ಲೋಕವನ್ನು ಭಾರತೀಯ ಜನಸಾಮಾನ್ಯರಿಗೆ ಸ್ಪಷ್ಟವಾಗಿ ಪರಿಚಯಿಸಿವೆ. ಮುಂಬೈ ಅಂಡರ್ವರ್ಲ್ಡ್ ಸ್ಟೋರಿಗಳನ್ನು ನೆನಪಿಸುವಂತಹ ಕ್ರೈಮ್ಗಳು ಕರಾಚಿಯಲ್ಲಿ ನಡೆದಿರುವುದನ್ನು ಈ ಸಿನಿಮಾಗಳಲ್ಲಿ ನೋಡಬಹುದು. ಪಾಕಿಸ್ತಾನದಲ್ಲಿ ಭೂಗತಲೋಕ, ಪೊಲೀಸ್, ರಾಜಕಾರಣಿಗಳು, ಭಾರತೀಯ ಗೂಢಚಾರಿಗಳ ಜಾಲ ಇವೆಲ್ಲವೂ ಹೇಗಿದೆ ಎನ್ನುವುದನ್ನು ದುರಂಧರ್ಗಳಲ್ಲಿ ಕಾಣಬಹುದು. ಆದರೆ, ಅವು ಅಪ್ಪಟ ವಾಸ್ತವವಾ, ಕಾಲ್ಪನಿಕವಾ ಇದು ಯಾವತ್ತಿಗೂ ಹೊರಬರದ ಸಂಗತಿ. ಇದೇ ವೇಳೆ, ಅಕ್ಷಯ್ ಖನ್ನಾ ನಟಿಸಿದ್ದ ರೆಹಮಾನ್ ಡೆಕಾಯಿಟ್ ಪಾತ್ರ ರಿಯಲ್ ಲೈಫ್ನಲ್ಲಿ ಇದ್ದಂಥದ್ದೇ. ಮುಂಬೈ ಭೂಗತಲೋಕ ಆಳಿ ನಂತರ ಕರಾಚಿಗೆ ಶಿಫ್ಟ್ ಆಗಿದ್ದ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ರಹಮಾನ್ ಡಕಾಯಿಟ್ (Rahman Dikait) ನಡುವಿನ ರಿಯಲ್ ಲೈಫ್ ಡೆಡ್ಲಿ ಫೈಟ್ಗಳ ಕಥೆ ಹರಿದಾಡುತ್ತಿದೆ.
ಬೆಂಗಳೂರು, ಮುಂಬೈ, ಮಂಗಳೂರು ಇತ್ಯಾದಿ ನಗರಗಳಲ್ಲಿ ಭೂಗತ ಲೋಕದಲ್ಲಿ ವಿವಿಧ ಗ್ಯಾಂಗ್ಗಳ ನಡುವೆ ಗ್ಯಾಂಗ್ ವಾರ್ ಸಾಮಾನ್ಯ. ಕರಾಚಿಯೂ ಹೊರತಲ್ಲ. ದಾವೂದ್ ಇಬ್ರಾಹಿಂ ಕರಾಚಿ ಭೂಗತಲೋಕದ ದೊರೆ. ಆದರೆ, ರೆಹಮಾನ್ ಡೆಕಾಯಿಟ್ ನೊಟೋರಿಯಸ್ ಲಯಾರಿ ಏರಿಯಾದ ಕಿಂಗ್. ಇವರಿಬ್ಬರ ನಡುವಿನ ಗ್ಯಾಂಗ್ ವಾರ್ ಭೀಕರವಾಗಿತ್ತಂತೆ.
ಇದನ್ನೂ ಓದಿ: ‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್
ಕರಾಚಿಯ ಪ್ರಮುಖ ಪ್ರದೇಶವೊಂದರಲ್ಲಿ 100ರಿಂದ 400 ಕೋಟಿ ರೂ ಮೌಲ್ಯವಿರುವ ಜಾಗವೊಂದರಲ್ಲಿ ದಾವೂದ್ ಒಂದು ಮಾಲ್ ಕಟ್ಟಲು ಯೋಜಿಸುತ್ತಾನೆ. ಕೇವಲ ಒಂದು ಕೋಟಿ ರೂಗೆ ನೀಡಬೇಕೆಂದು ಆ ಜಾಗದ ಮಾಲೀಕನಿಗೆ ಧಮಕಿ ಹಾಕಿಸುತ್ತಾನೆ. ಮುಂಬೈನಲ್ಲೂ ದಾವೂದ್ ಮಾಡುತ್ತಿದ್ದುದು ಇಂಥ ಕೆಲಸಗಳನ್ನೇ. ಆದರೆ, ಆ ಜಾಗವು ರೆಹಮಾನ್ ಡೆಕಾಯಿಟ್ನ ಸಂಬಂಧಿಯದ್ದಾಗಿರುತ್ತದೆ. ರೆಹಮಾನ್ ಎಂಟ್ರಿಯಾಗಬೇಕಾಗುತ್ತದೆ. ಈ ಜಮೀನಿನ ತಂಟೆಗೆ ಬರಬೇಡವೆಂದು ಫೋನ್ನಲ್ಲೇ ದಾವೂದ್ಗೆ ಧಮಕಿ ಹಾಕುತ್ತಾನೆ. ರೆಹಮಾನ್ನನ್ನು ದಾವೂದ್ ಹೀಯಾಳಿಸುತ್ತಾನೆ.
ದಾವೂದ್ಗೆ ಪಾಠ ಕಲಿಸಬೇಕೆಂದು ನಿರ್ಧರಿಸುವ ರೆಹಮಾನ್ ಡೆಕಾಯಿಟ್, ಆತನ ಸಹೋದರ ನೂರ್ ಉಲ್ ಹಕ್ ಅಲಿಯಾಸ್ ನೂರಾನನ್ನು ಕಿಡ್ನಾಪ್ ಮಾಡಿಸುತ್ತಾನೆ. ಫಾರ್ಮ್ಹೌಸ್ವೊಂದರಲ್ಲಿ ನೂರಾನನ್ನು ಇರಿಸಿ ವಿಪರೀತ ಚಿತ್ರಹಿಂಸೆ ಕೊಡುತ್ತಾನೆ. ಸಹೋದರನ ಚೀರಾಟದ ಶಬ್ದವನ್ನು ದಾವೂಡ್ಗೆ ನೇರವಾಗಿ ಕೇಳಿಸಿಸುತ್ತಾನೆ. ಇಷ್ಟು ದಿನ ಎಲ್ಲರಿಗೂ ಚಿತ್ರಹಿಂಸೆ ಕೊಡುತ್ತಿದ್ದ ದಾವೂದ್ಗೆ ಈಗ ತನ್ನ ಆಟ ರುಚಿ ತಾನೇ ಮೆಲ್ಲುವಂತಾಗುತ್ತದೆ. ಯಾವ ಜಾಗವನ್ನು ಒಂದು ಕೋಟಿಗೆ ಖರೀದಿಸಬೇಕೆಂದಿದ್ದರೋ ಅದಕ್ಕೆ 580 ಕೋಟಿ ರೂ ಕೊಡಲು ಒಪ್ಪಬೇಕಾಗುತ್ತದೆ. ಇದು ದಾವೂದ್ಗೆ ಆದ ಮೊದಲ ಅವಮಾನ.
ಇದನ್ನೂ ಓದಿ: ‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ
ಇಷ್ಟಾದ ಬಳಿಕ ನೂರಾನನ್ನು ಡೆಕಾಯಿಟ್ ಬಿಡುಗಡೆ ಮಾಡದೆ ಕೊಂದು ಹಾಕುತ್ತಾನೆ. ಕರಾಚಿಯಲ್ಲಿರುವ ದಾವೂದ್ ಮನೆ ಸಮೀಪ ನೂರಾನ ಶವ ಎಸೆಯಲಾಗುತ್ತದೆ. ಇದು ದಾವೂದ್ಗೆ ಆದ ಅವಮಾನದ ಮೇಲೆ ಅವಮಾನ. ಇದಾಗಿದ್ದು, 2009ರ ಮಧ್ಯಭಾಗದಲ್ಲಿ. ಈ ಘಟನೆ ನಡೆದು ಒಂದು ತಿಂಗಳಲ್ಲಿ ರೆಹಮಾನ್ ಡೆಕಾಯಿಟ್ನನ್ನು ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಎನ್ಕೌಂಟರ್ನಲ್ಲಿ ಸಾಯಿಸುತ್ತಾರೆ. ಈ ಘಟನೆ ದುರಂಧರ್ ಸಿನಿಮಾದಲ್ಲಿದೆ.
ಅನಧಿಕೃತ ದಾಖಲೆಗಳು, ಗೂಢಚಾರಿಗಳು, ಪೊಲೀಸ್ ಗುಪ್ತಚರರು ಮೊದಲಾದವರು ನೀಡಿರುವ ಮಾಹಿತಿಯನ್ನಾಧರಿಸಿ ಹರಿದಾಡುತ್ತಿರುವ ಕಥೆಗಳಾಗಿವೆ. ಅನೇಕ ಭೂಗತಲೋಕದ ಕಥೆಗಳು ಇರುವುದೇ ಹೀಗೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ