AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ

ಕೆಲವೇ ದಿನಗಳ ಹಿಂದೆ ‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಇದೇ ರೀತಿ ಆರೋಪ ಬಂದಿತ್ತು. ಈಗ ‘ಧುರಂಧರ್ 2’ ಚಿತ್ರತಂಡದ ಮೇಲೆ ಕೃತಿಚೌರ್ಯ ಆರೋಪ ಎದುರಾಗಿದೆ. ನಿರ್ದೇಶಕ ಸಂತೋಷ್ ಕುಮಾರ್ ಆರ್.ಎಸ್. ಅವರು ಸುದ್ದಿಗೋಷ್ಠಿ ನಡೆಸಿ ಈ ಆರೋಪ ಮಾಡಿದ್ದಾರೆ.

‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ
Santosh Kumar Rs, Ranveer Singh
ಮದನ್​ ಕುಮಾರ್​
|

Updated on: Mar 31, 2026 | 9:46 PM

Share

ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2: ದ ರಿವೆಂಜ್’ (Dhurandhar 2: The Revenge) ಚಿತ್ರ ಈಗ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಚಿತ್ರದ ಕಥೆಯು ತಾವು 2023ರಲ್ಲಿ ಬರೆದ ಸ್ಕ್ರಿಪ್ಟ್ ಅನ್ನು ಆಧರಿಸಿದೆ ಎಂದು ನಿರ್ದೇಶಕ ಸಂತೋಷ್ ಕುಮಾರ್ ಆರ್.ಎಸ್. ಅವರು ಆರೋಪಿಸಿದ್ದಾರೆ. ಅಲ್ಲದೇ ‘ಧುರಂಧರ್ 2’ (Dhurandhar 2) ಚಿತ್ರತಂಡದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ಕುಮಾರ್ ಈ ಬಗ್ಗೆ ಪೂರ್ತಿ ವಿವರ ನೀಡಿದ್ದಾರೆ. ‘ನೀವೆಲ್ಲರೂ ಧುರಂಧರ್ 2 ಸಿನಿಮಾ ನೋಡಿರಬಹುದು. ಅದು ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ ಆ ಸಿನಿಮಾ ನೋಡಿದ ನಂತರವಷ್ಟೇ ಅದು ನನ್ನ ಕಥೆ ಎಂಬುದು ನನಗೆ ತಿಳಿಯಿತು. ನಾನು 2023ರಲ್ಲಿ ತುಂಬಾ ಕಷ್ಟಪಟ್ಟು ಈ ಸ್ಕ್ರಿಪ್ಟ್ ಬರೆದಿದ್ದೆ. ದೊಡ್ಡ ನಟರನ್ನು ಆಯ್ಕೆ ಮಾಡಬೇಕು ಎಂದರೆ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲ ಬೇಕು ಎಂದು ತಿಳಿಸಿದ್ದರಿಂದ ನಾನು ಹಲವು ದೊಡ್ಡ ಪ್ರೊಡಕ್ಷನ್ ಕಂಪನಿಗಳಿಗೆ ಈ ಕಥೆ ವಿವರಿಸಿದ್ದೆ’ ಎಂದು ಹೇಳಿದ್ದಾರೆ.

ಸಂತೋಷ್ ಕುಮಾರ್ ಪ್ರಕಾರ ಅವರು ಈ ಸ್ಕ್ರಿಪ್ಟ್ ಅನ್ನು ಸೋನಿ ಪಿಕ್ಚರ್ಸ್, ಜೀ ಸ್ಟುಡಿಯೋಸ್, ಟಿ-ಸಿರೀಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳಿಗೆ ಹೋಗಿ ಹೇಳಿದ್ದರು. ಅಷ್ಟೇ ಅಲ್ಲದೇ, ಈ ಚಿತ್ರಕ್ಕೆ ನಟ ಆದಿತ್ಯ ರಾಯ್ ಕಪೂರ್ ಅವರನ್ನು ನಾಯಕನನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲಾ ಪುರಾವೆಗಳು ತಮ್ಮ ಬಳಿ ಇವೆ ಎಂದು ಅವರು ಹೇಳಿದ್ದಾರೆ. ‘ನಾನು ನನ್ನ ಕಥೆಯನ್ನು ನವೆಂಬರ್ 2023ರಲ್ಲಿ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ಇಮೇಲ್ ದಾಖಲೆಗಳು ಮತ್ತು ಇತರ ಪುರಾವೆಗಳು ನನ್ನ ಬಳಿ ಇವೆ. ಕಥೆಯನ್ನು ಕಳ್ಳತನ ಮಾಡಿ ಈಗ ಸಿನಿಮಾ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ತೀವ್ರ ಗತಿಯಲ್ಲಿ ಕುಸಿದ ‘ಧುರಂಧರ್ 2’ ಗಳಿಕೆ; ಆ ದಾಖಲೆ ಮುರಿಯೋದು ಕಷ್ಟ?

ಸಿನಿಮಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿರುವ ಸಂತೋಷ್, ‘ನಾನು ಈ ಕಥೆಯನ್ನು ಸಿನಿಮಾ ಮತ್ತು ಮನರಂಜನೆಗಾಗಿ ಬರೆದಿದ್ದೆ. ಆದರೆ ಅವರು ಇದನ್ನು ರಾಜಕೀಯ ಪ್ರಚಾರದ ವಸ್ತುವನ್ನಾಗಿ ಮಾಡಿದ್ದಾರೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಕಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಅದಕ್ಕಾಗಿಯೇ ನಾನು ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us