Imran Khan: ವಿಶ್ವಾಸಮತ ಸಾಬೀತುಪಡಿಸಲು ಇಮ್ರಾನ್ ಖಾನ್ ವಿಫಲ: ಪ್ರಧಾನಿ ಹುದ್ದೆಯಿಂದ ಪದಚ್ಯುತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 10, 2022 | 9:20 AM

Pakistan Politics: ವಿಶ್ವಾಸಮತ ಸಾಬೀತು ಪಡಿಸಲು ವಿಫಲರಾದ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡಿದ್ದಾರೆ.

Imran Khan: ವಿಶ್ವಾಸಮತ ಸಾಬೀತುಪಡಿಸಲು ಇಮ್ರಾನ್ ಖಾನ್ ವಿಫಲ: ಪ್ರಧಾನಿ ಹುದ್ದೆಯಿಂದ ಪದಚ್ಯುತಿ
Follow us on

ಇಸ್ಲಾಮಾಬಾದ್: ವಿಶ್ವಾಸಮತ ಸಾಬೀತು ಪಡಿಸಲು ವಿಫಲರಾದ ಇಮ್ರಾನ್ ಖಾನ್ (Pakistan PM Imran Khan) ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಇಮ್ರಾನ್ ಖಾನ್ ಪ್ರಧಾನಿ ನಿವಾಸದಿಂದ ಹೊರ ನಡೆದರು. ಪಾಕಿಸ್ತಾನದಲ್ಲಿ ಶನಿವಾರ ಮತ್ತು ಭಾನುವಾರ (ಏಪ್ರಿಲ್ 9-10) ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ವಿಶ್ವಾಸಮತಯಾಚನೆಗೆ ಮಧ್ಯರಾತ್ರಿ ಸಮಯ ನಿಗದಿಪಡಿಸಲಾಗಿತ್ತು. ಕಲಾಪವನ್ನು ಪದೇಪದೆ ಮುಂದೂಡಿದ್ದರಿಂದ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಸಂಸತ್‌ನ ಸ್ಪೀಕರ್ ಅಸದ್ ಕೈಸರ್ ಮತ್ತು ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಸಹ ರಾಜೀನಾಮೆ ಸಲ್ಲಿಸಿದರು. ಇದಕ್ಕೂ ಮುನ್ನ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ಪ್ರಕ್ರಿಯೆ ಆರಂಭವಾದಾಗಲೇ ಆಡಳಿತಾರೂಢ ಪಿಟಿಐ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು.

ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡ ಇಮ್ರಾನ್‌ ಖಾನ್ ಪಾಕಿಸ್ತಾನದ ಸಂಸತ್ ಭವನದಲ್ಲಿರುವ ಪ್ರಧಾನಿ ಕಚೇರಿಯಿಂದ ನಿರ್ಗಮಿಸಿದರು. ನಂತರ ಪ್ರಧಾನಿಯ ಅಧಿಕೃತ ನಿವಾಸದಿಂದಲೂ ಹೊರ ನಡೆದರು.

ಹುಚ್ಚನ ಕೈಲಿ ಬೆಂಕಿಕಡ್ಡಿ: ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ

ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಷರೀಫ್ ಸಹ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಭಯದಿಂದ ಬಳಲುತ್ತಿರುವ ಮಾನಸಿಕ ಅಸ್ವಸ್ಥನ ಕೈಯಲ್ಲಿ ಬೆಂಕಿಕಡ್ಡಿ ಇದೆ, ಅವನು ಎಲ್ಲಾ ಕಡೆ ಬೆಂಕಿ ಹಚ್ಚಲು ಬಯಸುತ್ತಾನೆ, ಅವನು ಮತ್ತಷ್ಟು ಹಾನಿ ಮಾಡುವ ಮೊದಲು ಅವನನ್ನು ಬಂಧಿಸಬೇಕು. ಅಂತಹವನ ಇಚ್ಛೆಗೆ 22 ಕೋಟಿ ಜನರ ಜೀವನ ನೀಡಲು ಸಾಧ್ಯವಿಲ್ಲ ಎಂದು ಮರ್ಯಮ್ ಆಕ್ರೋಶ ವ್ತಕ್ತಪಡಿಸಿದ್ದರು.

ಕಲಾಪವನ್ನು ಪದೇಪದೇ ಮುಂದೂಡಿದ ಸ್ಪೀಕರ್ ಅಸಾದ್ ಕೈಸರ್ ವಿರುದ್ಧವೂ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದವು. ಇಮ್ರಾನ್ ಖಾನ್​ಗೆ ಸ್ಪೀಕರ್ ನಿಷ್ಠೆ ತೋರುತ್ತಿದ್ದಾರೆ, ಪಾಕಿಸ್ತಾನಕ್ಕೆ ಅವರ ನಿಷ್ಠೆ ವ್ಯಕ್ತವಾಗುತ್ತಿಲ್ಲ. ಎಂದು ಮರ್ಯಮ್ ಆಕ್ರೋಶ ವ್ಯಕ್ತಪಡಿಸಿದರು.

ಪಾಕ್ ರಾಜಕಾರಣದ ನಾಟಕೀಯ ತಿರುವುಗಳು

ವಿರೋಧ ಪಕ್ಷಗಳು ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ ಶನಿವಾರ (ಏಪ್ರಿಲ್ 9) ಬೆಳಿಗ್ಗೆಯೇ ಇಮ್ರಾನ್ ಖಾನ್ ಬಹುಮತ ಸಾಬೀತುಪಡಿಸಬೇಕಿತ್ತು. ಆದರೆ ಇಮ್ರಾನ್ ಖಾನ್ ವಿಳಂಬ ನೀತಿ ಅನುಸರಿಸಿ ಅಧಿಕಾರ ಉಳಿಸಿಕೊಳ್ಳಲು ಕೊನೆಯ ಕ್ಷಣದ ಹೋರಾಟ ನಡೆಸಲು ಮುಂದಾದರು. ಬೆಳಿಗ್ಗೆಯೇ ಸದನ ಆರಂಭವಾದರೂ ಇಮ್ರಾನ್ ಖಾನ್ ಸದನಕ್ಕೆ ಹಾಜರಾಗಿರಲಿಲ್ಲ.‌ ಇಮ್ರಾನ್ ಖಾನ್ ಮಾತ್ರವಲ್ಲದೆ ಪಿಟಿಐ ಪಕ್ಷದ ಕೆಲವೇ ಶಾಸಕರನ್ನು ಹೊರತುಪಡಿಸಿದರೆ ಆಡಳಿತಪಕ್ಷದ ಬಹುತೇಕ ಸದಸ್ಯರು ಗೈರಾಗಿದ್ದರು. ಆದರೆ ವಿರೋಧ‌ಪಕ್ಷಗಳ ಸ್ಥಾನಗಳು ಮಾತ್ರ ಭರ್ತಿಯಾಗಿದ್ದವು.

ಸರ್ಕಾರ ಕೆಡವಲು ವಿದೇಶಿ ಶಕ್ತಿಗಳು ತಂತ್ರ ಹೂಡಿವೆ ಎಂದು ಆರೋಪಿದ್ದ ಇಮ್ರಾನ್ ಖಾನ್ ಹೇಳಿಕೆ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಬಹುಮತ ಸಾಬೀತು ಮಾಡುವುದು ಬಿಟ್ಟು ವಿಳಂಬ ನೀತಿ ಅನಿಸರಿಸುತ್ತಿದ್ದಾರೆ ಎಂದು ವಿರೋಧಪಕ್ಷಗಳ ನಾಯಕರು ಸದನದಲ್ಲಿ ಆಕ್ಷೇಪಣೆ ಸಲ್ಲಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಹಲವು ಬಾರಿ ಕಲಾಪ ಮುಂದೂಡಿದರು. ಅವಿಶ್ವಾಸ ನಿರ್ಣಯದ ಮೇಲೆ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯೂ ನಡೆಯಿತು. ತಡರಾತ್ರಿ ವಿಶೇಷ ಪೀಠವು ನ್ಯಾಯಾಲಯದ ಕಲಾಪ ಮುಂದುವರಿಸಿತು.

ವಿಸ್ವಾಸಮತ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಹಿಂಸಾಚಾರ ನಡೆಯುವ ಸಾಧ್ಯತೆಯಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದ್ದು, ಎಲ್ಲ ವಿಮಾನ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಹಾಕಲಾಗಿತ್ತು. ಅಧಿಕಾರಿಗಳ ಅನುಮತಿಯಿಲ್ಲದೆ ಯಾರೂ ದೇಶದಿಂದ ಹೊರಗೆ ಹೋಗುವಂತಿಲ್ಲ ಎಂದು ಸೂಚಿಸಲಾಗಿತ್ತು.

ಸಂಸತ್ ಭವನದ ಎದುರು ಖೈದಿಗಳನ್ನು ಕರೆದುಕೊಂಡು ಹೋಗುವ ವಾಹನವೂ ಬಂದು ನಿಂತಿತ್ತು. ಇಸ್ಲಾಮಾಬಾದ್ ಪೊಲೀಸ್ ಮತ್ತು ಆಡಳಿತದ ಎಲ್ಲಾ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಇಸ್ಲಾಮಾಬಾದ್‌ನ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: Pakistan Crisis: ಅವಿಶ್ವಾಸ ನಿರ್ಣಯದ ನಡುವೆ ತನ್ನ ನಿವಾಸದಲ್ಲಿ ಸಚಿವ ಸಂಪುಟ ಸಭೆ ಕರೆದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇದನ್ನೂ ಓದಿ: Pakistan political crisis ಇಮ್ರಾನ್ ಖಾನ್​​ಗೆ ಹಿನ್ನಡೆ: ಏಪ್ರಿಲ್ 9 ರಂದು ಅವಿಶ್ವಾಸ ನಿರ್ಣಯ ಮತದಾನಕ್ಕೆ ಪಾಕ್ ಸುಪ್ರೀಂಕೋರ್ಟ್ ಆದೇಶ

Published On - 6:21 am, Sun, 10 April 22