
ನ್ಯೂಯಾರ್ಕ್, ಏಪ್ರಿಲ್ 29: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್(Pahalgam)ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಅದರ ನೀತಿಗಳ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನದ ಮುಖವಾಡವನ್ನು ಕಳಚಿದೆ. ಇದು ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಒಂದು ರಕ್ಕಸ ದೇಶ ಎಂದು ಪಾಕಿಸ್ತಾನವನ್ನು ಕರೆದಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಯೋಜ್ನಾ ಪಟೇಲ್ ಮಾತನಾಡಿ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಸಂದರ್ಶನದಲ್ಲಿ ಭಯೋತ್ಪಾದನೆಗೆ ಬೆಂಬಲ ಹಾಗೂ ಹಣಕಾಸು ಸಹಾಯ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಅದನ್ನು ಇಡೀ ಜಗತ್ತೇ ನೋಡಿದೆ.
ಖ್ವಾಜಾ ತಪ್ಪೊಪ್ಪಿಗೆಯಿಂದ ಯಾರಿಗೂ ಆಶ್ಚರ್ಯವಾಗಿಲ್ಲ, ಏಕೆಂದರೆ ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುವ ರಕ್ಕಸ ರಾಷ್ಟ್ರವಾಗಿದೆ ಎಂದು ಹೇಳಿದರು. 2008 ರ ಮುಂಬೈ ದಾಳಿಯ ನಂತರ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಅತಿ ಹೆಚ್ಚು ಸಾವುಗಳಿಗೆ ಕಾರಣವಾಗಿದೆ ಎಂದು ಪಟೇಲ್ ಹೇಳಿದರು.
ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿರುವ ಭಾರತ, ಇಂತಹ ದಾಳಿಗಳು ಬೀರುವ ಪರಿಣಾಮವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಪಹಲ್ಗಾಮ್ ದಾಳಿಯ ನಂತರ ವಿಶ್ವದಾದ್ಯಂತದ ದೇಶಗಳು ಮತ್ತು ಅವುಗಳ ನಾಯಕರಿಂದ ದೊರೆತ ಬೆಂಬಲವನ್ನು ಭಾರತವು ಪೂರ್ಣ ಹೃದಯದಿಂದ ಶ್ಲಾಘಿಸುತ್ತದೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ನಾವು 3 ದಶಕಗಳಿಂದ ಈ ನೀಚ ಕೆಲಸ ಮಾಡ್ತಿದ್ದೀವಿ, ಪಾಕ್ ರಕ್ಷಣಾ ಸಚಿವ ಖ್ವಾಜಾ ಹೀಗೆ ಹೇಳಿದ್ದೇಕೆ?
ಭಯೋತ್ಪಾದನೆ ನಿಗ್ರಹದ ಕುರಿತಾದ ವಿಶ್ವಸಂಸ್ಥೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಜ್ನಾ ಪಟೇಲ್, ಭಾರತದ ವಿರುದ್ಧ ಅಸಂಬದ್ಧ ಆರೋಪಗಳನ್ನು ಮಾಡಲು ಮತ್ತು ಪ್ರಚಾರವನ್ನು ಹರಡಲು ಅಂತಾರಾಷ್ಟ್ರೀಯ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪಾಕಿಸ್ತಾನವನ್ನು ಖಂಡಿಸಿದರು.
ಖ್ವಾಜಾ ಆಸಿಫ್ ಹೇಳಿದ್ದೇನು?
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಇತ್ತೀಚೆಗೆ ಸ್ಕೈ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ, ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ದೀರ್ಘ ಇತಿಹಾಸವನ್ನು ಹೊಂದಿದ್ದಾಗಿ ಒಪ್ಪಿಕೊಂಡರು.ನಾವು 30 ವರ್ಷಗಳಿಂದ ಅಮೆರಿಕಕ್ಕಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಯೋಜ್ನಾ ವಿಡಿಯೋ
Amb. DPR @PatelYojna delivered India’s statement at the launch of the Victims of Terrorism Association Network. (1/2) @MEAIndia @UN pic.twitter.com/1fd7arhjXy
— India at UN, NY (@IndiaUNNewYork) April 28, 2025
ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕಿಸ್ತಾನವನ್ನು ಹೆಸರಿಸದೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಯೋಜ್ನಾ ಪಟೇಲ್,ನಿರ್ದಿಷ್ಟ ನಿಯೋಗವೊಂದು ಈ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿದರು. ಭಾರತವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿದೆ. ಅವರಿಗೆ ನ್ಯಾಯ ಒದಗಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ.
ಈ ದಾಳಿಗೂ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೂ ಸಂಬಂಧವಿದೆ ಎಂದು ಶಂಕಿಸಲಾಗಿದೆ. ಏತನ್ಮಧ್ಯೆ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರೇ ಸಂದರ್ಶನವೊಂದರಲ್ಲಿ ತಮ್ಮ ದೇಶವು ಪಾಶ್ಚಿಮಾತ್ಯ ದೇಶಗಳು ಮತ್ತು ಅಮೆರಿಕದ ಆಜ್ಞೆಯ ಮೇರೆಗೆ ಭಯೋತ್ಪಾದನೆಯನ್ನು ಪೋಷಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ