Russia Ukraine: ಉಕ್ರೇನ್​ನಿಂದ ಹೊರ ಬರುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ

ಉದ್ವಿಗ್ನ ಸ್ಥಿತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಮೂಲದವರು ತಾತ್ಕಾಲಿಕವಾಗಿ ದೇಶ ಬಿಟ್ಟು ಹೊರಡಬೇಕು ಎಂದು ಉಕ್ರೇನ್​ ಭಾರತೀಯ ರಾಯಭಾರ ಕಚೇರಿಯು ಹೇಳಿದೆ.

Russia Ukraine: ಉಕ್ರೇನ್​ನಿಂದ ಹೊರ ಬರುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ
ಉಕ್ರೇನ್-ರಷ್ಯಾ ಗಡಿಯಲ್ಲಿ ಸೇನಾ ಚಟುವಟಿಕೆಗಳು ಹೆಚ್ಚಾಗಿವೆ.
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 20, 2022 | 5:20 PM

ದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷ ಪರಿಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಉಕ್ರೇನ್​ನಲ್ಲಿರುವ ಭಾರತದ ನಾಗರಿಕರು ಮತ್ತು ವಿದ್ಯಾರ್ಥಿಗಳು ಆದಷ್ಟೂ ಬೇಗ ಸ್ವದೇಶಕ್ಕೆ ಹಿಂದಿರುಗಬೇಕು ಎಂದು ವಿದೇಶಾಂಗ ಇಲಾಖೆ ಸೂಚನೆ ನೀಡಿದೆ. ಉಕ್ರೇನ್​ನ ಕ್ಯೀವ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾನುವಾರ ಹೊಸ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಉಕ್ರೇನ್​ನಲ್ಲಿ ಉದ್ವಿಗ್ನ ಸ್ಥಿತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಮೂಲದವರು ತಾತ್ಕಾಲಿಕವಾಗಿ ದೇಶ ಬಿಟ್ಟು ಹೊರಡಬೇಕು ಎಂದು ವಿದೇಶಾಂಗ ಇಲಾಖೆ ಹೇಳಿದೆ. ಉಕ್ರೇನ್​ನಲ್ಲಿ ಉದ್ವಿಗ್ನ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಬೇಕು. ವಿದ್ಯಾರ್ಥಿಗಳು ತಮ್ಮ ಪ್ರವಾಸಿ ಏಜೆಂಟರೊಂದಿಗೆ ಸಂಪರ್ಕದಲ್ಲಿದ್ದು, ಭಾರತಕ್ಕೆ ಹೊರಡುವ ವಿಶೇಷ ವಿಮಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದೆ.

ಚರ್ಚೆಗೆ ಸಿದ್ಧ ಎಂದ ರಷ್ಯಾ ಅಧ್ಯಕ್ಷ ಪುಟಿನ್

ಉಕ್ರೇನ್​ ವಿಚಾರದಲ್ಲಿ ಎದುರಾಗಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸಲು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಚರ್ಚಿಸಲು ತಾನು ಸಿದ್ಧನಿರುವುದಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ‘ತಲೆದೋರಿರುವ ಪಕ್ಷುಬ್ಧ ಸ್ಥಿತಿಯನ್ನು ಹೋಗಲಾಡಿಸುವ ದಿಶೆಯಲ್ಲಿ ಪಶ್ಚಿಮದ ರಾಷ್ಟ್ರಗಳೊಂದಿಗೆ ಜೊತೆಯಾಗಿ ಕೆಲಸ ಮಾಡಲು ನಾವು ತಯಾರಿದ್ದೇವೆ’ ಎಂದು ಮಾಸ್ಕೋನಲ್ಲಿ ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಜೊತೆ ಮಾತುಕತೆಯ ನಂತರ ಉಕ್ರೇನ್ ವಿಚಾರದಲ್ಲಿ ರಷ್ಯಾದ ನಿಲುವಿನ ಸೂಚನೆ ನೀಡಿದರು.

ನಿಸ್ಸಂದೇಹವಾಗಿ ರಷ್ಯಾಕ್ಕೆ ಯುದ್ಧ ಬೇಕಿಲ್ಲ ಮತ್ತೂ ಯಾವತ್ತೂ ಅಂಥ ಸ್ಥಿತಿಯನ್ನು ಬಯಸುವುದಿಲ್ಲ ಎಂದು ಪುಟಿನ್ ಹೇಳಿದರು. ಭದ್ರತೆಯ ವಿಚಾರದಲ್ಲಿ ರಷ್ಯಾದ ಸಾರ್ವಭೌಮತೆಯನ್ನು ವಾಷಿಂಗ್ಟನ್ ಮತ್ತು ನ್ಯಾಟೋ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜರ್ಮನ್ ಚಾನ್ಸಲರ್ ಒಲಾಫ್ ಶೋಲ್ಜ್ ಅವರು ಉಕ್ರೇನ್​ಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಕೈವ್​ಗೆ ಪ್ರಯಾಣಿಸಿ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಜೆಲೆನ್ ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು.

ಉಕ್ರೇನ್ ಗಡಿಭಾಗದಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವ ರಷ್ಯಾ ಈ ಮೊದಲು ದೃಢಪಡಿಸಿತ್ತು. ಕಳೆದ ಕೆಲ ದಿನಗಳಿಂದ ರಷ್ಯಾದ ಮಿಲಿಟರಿ ಪಡೆಗಳು ಉಕ್ರೇನ್ ಗಡಿಭಾಗದಲ್ಲಿ ಜಮಾವಣೆ ಅಗುತ್ತಿರುವುದನ್ನು ಮತ್ತು ರಷ್ಯಾದಿಂದ ಅತಿಕ್ರಮಣದ ಸಾಧ್ಯತೆಯನ್ನು ಅವಲೋಕಿಸುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಏನಾದರೂ ಸೇನಾ ಕಾರ್ಯಾಚರಣೆಗೆ ಮುಂದಾದರೆ ಭಾರಿ ಪ್ರಮಾಣದ ಆರ್ಥಿಕ ಜುಲ್ಮಾನೆ ತೆರಲು ಸಿದ್ಧವಾಗಿರಬೇಕೆಂದು ಎಚ್ಚರಿಸಿವೆ.

ಒಂದು ಪಕ್ಷ ರಷ್ಯಾದ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸಿದರೆ, ಯುರೋಪಿಗೆ ರಷ್ಯಾ ಮಾಡುತ್ತಿರುವ ಅನಿಲ ಪೂರೈಕೆಯನ್ನು ದ್ವಿಗುಣಗೊಳಿಸುವ ನಾರ್ಡ್ ಸ್ಟ್ರೀಮ್ 2 ಪೈಪ್ ಲೈನ್ ಮೇಲೆ ಆರ್ಥಿಕ ದಿಗ್ಭಂದನಗಳನ್ನು ವಿಧಿಸಲಾಗುವುದು ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಮಾಸ್ಕೋಗೆ ಕಟುವಾದ ಎಚ್ಚರಿಕೆ ನೀಡಿವೆ. ರಷ್ಯಾದ ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್ ಅನ್ನು ಕೆಲವು ಪಾಶ್ಚಿಮಾತ್ಯ ದೇಶಗಳು ಭೌಗೋಳಿಕ ರಾಜಕೀಯ ಅಸ್ತ್ರವೆಂದು ಟೀಕಿಸಿದ್ದು, ಇದು ರಷ್ಯಾದ ಅನಿಲದ ಮೇಲೆ ಯುರೋಪ್ ಅವಲಂಬನೆಯನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿವೆ.

ಇದನ್ನೂ ಓದಿ: Russia-Ukraine Crisis: ಉಕ್ರೇನ್ ಗಡಿಯಲ್ಲಿ ರಷ್ಯನ್ ಮಿಲಿಟರಿ ಕಾರ್ಯಾಚರಣೆ ಅಂತ್ಯ; ಸೇನಾ ಪಡೆಯನ್ನು ಹಿಂಪಡೆದ ರಷ್ಯಾ

ಇದನ್ನೂ ಓದಿ: Oil Price: ಉಕ್ರೇನ್ ನೆಪದಲ್ಲಿ ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತ ರಷ್ಯಾ: ಭಾರತಕ್ಕೆ ತೈಲ ಬೆಲೆ ಏರಿಕೆಯ ಜೊತೆಗೆ ಆರ್ಥಿಕ ಕುಸಿತದ ಭೀತಿ