ಪವಿತ್ರ ಮರದ ಮೇಲೆ ನಗ್ನ ಫೋಟೋಶೂಟ್; ರಷ್ಯಾದ ಜೋಡಿಯನ್ನು ಬಾಲಿಯಿಂದ ಗಡಿಪಾರು ಮಾಡಲು ನಿರ್ಧಾರ

TV9 Digital Desk

| Edited By: shivaprasad.hs

Updated on: May 08, 2022 | 1:24 PM

Viral News | Russian Couple: ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿರುವ ಅಲೀನಾ ಫಜ್ಲೀವಾ ಅವರು ತಬನಾನ್ ಜಿಲ್ಲೆಯ ದೇವಾಲಯವೊಂದರಲ್ಲಿ 700 ವರ್ಷಗಳಷ್ಟು ಹಳೆಯದಾದ ಆಲದ ಮರದ ಮೇಲೆ ನಗ್ನವಾಗಿ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಅವರ ಪತಿ ಆಂಡ್ರೆ ಫಜ್ಲೀವ್ ಕ್ಲಿಕ್ಕಿಸಿದ್ದಾರೆ. ಆ ಫೋಟೋ ವೈರಲ್ ಆಗಿದ್ದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪವಿತ್ರ ಮರದ ಮೇಲೆ ನಗ್ನ ಫೋಟೋಶೂಟ್; ರಷ್ಯಾದ ಜೋಡಿಯನ್ನು ಬಾಲಿಯಿಂದ ಗಡಿಪಾರು ಮಾಡಲು ನಿರ್ಧಾರ
ಬಾಲಿಯಿಂದ ಗಡಿಪಾರಾದ ರಷ್ಯಾದ ಜೋಡಿ

ಬಾಲಿ (Bali) ಪ್ರವಾಸಿ ಕೇಂದ್ರವಾಗಿದ್ದರೂ ಕೂಡ ಅಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಪಾರಂಪರಿಕ ನಂಬಿಕೆಗಳನ್ನು ಬಹಳ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ರಷ್ಯಾದ ಜೋಡಿಯೊಂದು ಬಾಲಿಯ ಜನರು ಪವಿತ್ರವೆಂದು ಪೂಜಿಸುವ ಮರದ ಮೇಲೆ ನಗ್ನ ಫೋಟೋಶೂಟ್ ಮಾಡಿಸಿದ್ದಾರೆ. ಇದು ವಿವಾದ ಸೃಷ್ಟಿಸಿರುವುದಲ್ಲದೇ ಆಕ್ರೋಶಕ್ಕೆ ಕಾರಣವಾಗಿದೆ. ದ್ವೀಪ ರಾಷ್ಟ್ರದ ಸ್ಥಳೀಯ ಸಂಸ್ಕೃತಿಯನ್ನು ಉಲ್ಲಂಘಿಸಿದ ಕಾರಣ, ರಷ್ಯಾದ ಸಾಮಾಜಿಕ ಜಾಲತಾಣ ಪ್ರಭಾವಿ ಜೋಡಿಯನ್ನು (Instagram Influencer) ಬಾಲಿಯಿಂದ ಗಡೀಪಾರು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಹೇಳಿಕೆ ಉಲ್ಲೇಖಿಸಿ AFP ವರದಿ ಮಾಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿರುವ ಅಲೀನಾ ಫಜ್ಲೀವಾ ಅವರು ತಬನಾನ್ ಜಿಲ್ಲೆಯ ದೇವಾಲಯವೊಂದರಲ್ಲಿ 700 ವರ್ಷಗಳಷ್ಟು ಹಳೆಯದಾದ ಆಲದ ಮರದ ಮೇಲೆ ನಗ್ನವಾಗಿ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಅವರ ಪತಿ ಆಂಡ್ರೆ ಫಜ್ಲೀವ್ ಕ್ಲಿಕ್ಕಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿಯೂ ಈ ಫೋಟೋ ಹಂಚಿಕೊಳ್ಳಲಾಗಿದೆ. ಅದು ವೈರಲ್ (Viral) ಆಗಿದ್ದಲ್ಲದೇ ಬಾಲಿಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪತಿ-ಪತ್ನಿ ಜೋಡಿಯನ್ನು ಕನಿಷ್ಠ ಆರು ತಿಂಗಳ ಕಾಲ ಇಂಡೋನೇಷ್ಯಾದಿಂದ ನಿಷೇಧಿಸಲಾಗುವುದು ಹಾಗೂ ಸ್ಥಳೀಯ ನಂಬಿಕೆಗೆ ಅನುಗುಣವಾಗಿ ಆ ಪವಿತ್ರ ಸ್ಥಳದಲ್ಲಿ ನಡೆಯುವ ಶುದ್ಧೀಕರಣ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಬಾಲಿ ಪ್ರವಾಸಿ ಮುಖ್ಯಸ್ಥ ಜಮರುಲಿ ಮಣಿಹುರುಕ್ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದಾರೆ.

ಬಾಲಿನೀಸ್ ಅರ್ಥಾತ್ ಬಾಲಿಯ ಹಿಂದೂ ಸಂಸ್ಕೃತಿಯಲ್ಲಿ ಪರ್ವತಗಳು, ಮರಗಳು ಮತ್ತು ಇತರ ನೈಸರ್ಗಿಕ ಲಕ್ಷಣಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ದೇವರ ನಿವಾಸಗಳೆಂದು ಪೂಜಿಸಲಾಗುತ್ತದೆ. ಆದರೆ ರಷ್ಯಾದ ಜೋಡಿ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುವ ಮತ್ತು ಸ್ಥಳೀಯ ನಿಯಮಗಳಿಗೆ ಅಗೌರವ ತೋರುವ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ಸಾಬೀತಾಗಿದೆ ಎಂದು ಮಣಿಹುರುಕ್ ಹೇಳಿದ್ದಾರೆ.

ಇದನ್ನೂ ಓದಿ

ರೂಪದರ್ಶಿ ಫಜ್ಲೀವಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಇಂಗ್ಲಿಷ್ ಮತ್ತು ಬಹಾಸಾದಲ್ಲಿ ಕ್ಷಮೆಯಾಚಿಸಿದ್ದಾರೆ. ‘ದೊಡ್ಡ ತಪ್ಪು ಮಾಡಿದೆ’ ಎಂದಿರುವ ಅವರು, ‘ಬಾಲಿಯಲ್ಲಿ ಬಹಳಷ್ಟು ಪವಿತ್ರ ಸ್ಥಳಗಳಿವೆ. ಆದರೆ ಅವುಗಳ ಮೇಲೆ ಮಾಹಿತಿಯ ಚಿಹ್ನೆಗಳು ಇಲ್ಲ. ಅದಾಗ್ಯೂ ಆ ಸ್ಥಳಗಳನ್ನು ಮತ್ತು ಸಂಪ್ರದಾಯಗಳನ್ನು ಗೌರವದಿಂದ ಪರಿಗಣಿಸಬೇಕು’ ಎಂದಿದ್ದಾರೆ.

ಬಾಲಿಯ ಗವರ್ನರ್ ವಯಾನ್ ಕೋಸ್ಟರ್ ಪ್ರಕರಣದ ಬಗ್ಗೆ ಮಾತನಾಡಿ, ಸ್ಥಳೀಯ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪ್ರವಾಸಿಗರನ್ನು ಇನ್ನು ಮುಂದೆ ಆಡಳಿತವು ಸಹಿಸುವುದಿಲ್ಲ ಎಂದು ಕಟುವಾಗಿ ನುಡಿದಿದ್ದಾರೆ. ಕಳೆದ ವರ್ಷ ಸುಮಾರು 200 ಜನರನ್ನು ದ್ವೀಪ ರಾಷ್ಟ್ರದಿಂದ ಗಡೀಪಾರು ಮಾಡಲಾಗಿದೆ. ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹೆಚ್ಚಿನ ಜನರನ್ನು ಗಡಿಪಾರು ಮಾಡಲಾಗಿತ್ತು.

ಇನ್ನಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada