ಎಲ್ಲ ಗೊಂದಲಗಳಿಗೆ, ರಕ್ತಪಾತಕ್ಕೆ ಅಮೆರಿಕ ಕಾರಣ: ಉಕ್ರೇನ್​ ಸಂಘರ್ಷದ ಹಿನ್ನೆಲೆ ಬಹಿರಂಗಪಡಿಸಿದ ರಷ್ಯಾ ಅಧ್ಯಕ್ಷ ಪುಟಿನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 28, 2022 | 3:09 PM

‘ನಾನು ಬ್ರಿಟನ್ ಪ್ರಧಾನಿಯಾದರೆ ರಷ್ಯಾ ವಿರುದ್ಧ ಅಣ್ವಸ್ತ್ರ ಬಳಸಲು ಹಿಂಜರಿಯುವುದಿಲ್ಲ‘ ಎಂಬ ಬ್ರಿಟನ್​ನ ಮಾಜಿ ಪ್ರಧಾನಿ ಲಿಜ್ ಟ್ರಸ್​​ ಹೇಳಿಕೆಯನ್ನು ಪುಟಿನ್ ನೆನಪಿಸಿಕೊಂಡರು.

ಎಲ್ಲ ಗೊಂದಲಗಳಿಗೆ, ರಕ್ತಪಾತಕ್ಕೆ ಅಮೆರಿಕ ಕಾರಣ: ಉಕ್ರೇನ್​ ಸಂಘರ್ಷದ ಹಿನ್ನೆಲೆ ಬಹಿರಂಗಪಡಿಸಿದ ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us on

ಮಾಸ್ಕೊ: ಉಕ್ರೇನ್ ವಿರುದ್ಧ ಅಣ್ವಸ್ತ್ರ ಬಳಸುವ ಸಾಧ್ಯತೆಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಜಾಗತಿಕ ಮೇಲ್ಮೆ ಸಾಧಿಸುವ ಪಾಶ್ಚಿಮಾತ್ಯ ದೇಶಗಳ ಪ್ರಯತ್ನಗಳಿಂದಾಗಿ ಇಂಥ ಪರಿಸ್ಥಿತಿ ಉದ್ಭವಿಸಿದೆ. ಅವರ ಪ್ರಯತ್ನಗಳು ವಿಫಲವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿದೇಶಾಂಗ ವ್ಯವಹಾರಗಳ ಜಾಗತಿಕ ತಜ್ಞರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಉಕ್ರೇನ್ ವಿರುದ್ಧ ಅಣ್ವಸ್ತ್ರ ಬಳಸಲು ರಷ್ಯಾ ಚಿಂತನೆ ನಡೆಸಿದೆ ಎನ್ನುವುದು ಆಧಾರವಿಲ್ಲದ ಆರೋಪ’ ಎಂದು ಸ್ಪಷ್ಟವಾಗಿ ತಳ್ಳಿಹಾಕಿದರು.

‘ಉಕ್ರೇನ್ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಬೇಕಾದ ಅನಿವಾರ್ಯತೆಯೇ ಉದ್ಭವಿಸಿಲ್ಲ. ಅಂಥ ಕ್ರಮಕ್ಕೆ ಮುಂದಾಗಬೇಕಾದ ರಾಜಕೀಯ ಅಥವಾ ಮಿಲಿಟರಿ ಕಾರಣಗಳೂ ಗೋಚರಿಸುತ್ತಿಲ್ಲ. ಅಣ್ವಸ್ತ್ರ ಸಿಡಿತಲೆಗಳನ್ನು ಸಜ್ಜುಗೊಳ್ಳಲು ಸಶಸ್ತ್ರ ಪಡೆಗಳಿಗೆ ಸೂಚಿಸಿರುವುದರ ಹಿಂದೆ ರಷ್ಯಾವನ್ನು ರಕ್ಷಿಸಿಕೊಳ್ಳಬೇಕೆಂಬ ಉದ್ದೇಶಮಾತ್ರವೇ ಇದೆ’ ಎಂದು ಪುಟಿನ್ ಸ್ಪಷ್ಟಪಡಿಸಿದರು.

ಬ್ರಿಟನ್​ನ ನಿಕಟಪೂರ್ವ ಪ್ರಧಾನಿ ಲಿಜ್ ಟ್ರಸ್​ ನೀಡಿದ್ದ ಅಣ್ವಸ್ತ್ರ ಬಳಕೆ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ‘ನಾನು ಬ್ರಿಟನ್ ಪ್ರಧಾನಿಯಾದರೆ ರಷ್ಯಾ ವಿರುದ್ಧ ಅಣ್ವಸ್ತ್ರ ಬಳಸಲು ಹಿಂಜರಿಯುವುದಿಲ್ಲ ಎಂಬ ಅವರ ಮಾತನ್ನು ನಾವು ಏನೆಂದು ಅರ್ಥೈಸಿಕೊಳ್ಳಬೇಕು. ಇದು ಪಾಶ್ಚಿಮಾತ್ಯ ದೇಶಗಳು ನಮ್ಮನ್ನು ಬೆದರಿಸಲು ಅನುಸರಿಸುತ್ತಿರುವ ತಂತ್ರ ಎಂದುಕೊಂಡೆವು. ನಿಜಕ್ಕೂ ನಮಗೆ ಆತಂಕವಾಗಿತ್ತು’ ಎಂದು ಪುಟಿನ್ ಹೇಳಿದರು.

ಅಮೆರಿಕ ಮತ್ತು ಅದರ ಮಿತ್ರಪಕ್ಷಗಳನ್ನು ಹೀಗಳೆಯುವ ಸುದೀರ್ಘ ಭಾಷಣ ಮಾಡಿದ ಪುಟಿನ್, ‘ಅವರು ತಮ್ಮಿಷ್ಟದ ನಿಯಮಗಳಂತೆ ಜಗತ್ತು ನಡೆಯಬೇಕು ಎನ್ನುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ, ರಕ್ತಸಿಕ್ತ ಮತ್ತು ಕೆಟ್ಟ ರೀತಿಯಲ್ಲಿ ಪಾರಮ್ಯ ಸಾಬೀತುಪಡಿಸುವ ಆಟಕ್ಕೆ ಮುನ್ನುಡಿ ಬರೆಯುತ್ತಿದೆ’ ಎಂದು ಟೀಕಿಸಿದರು. ‘ಭವಿಷ್ಯದಲ್ಲಿ ಜಾಗತಿಕ ಶಾಂತಿ ನೆಲೆಸಬೇಕೆಂದರೆ ರಷ್ಯಾ ಮತ್ತು ಇತರ ದೇಶಗಳೊಂದಿಗೆ ಅಮೆರಿಕ ಮತ್ತು ಇತರ ದೇಶಗಳು ಮಾತುಕತೆ ನಡೆಸಬೇಕು’ ಎಂದು ತಾಕೀತು ಮಾಡಿದರು.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಪಾಶ್ಚಾತ್ಯ ಶಕ್ತಿಗಳೊಂದಿಗಿನ ಸಂಘರ್ಷ ಎಂದು ವ್ಯಾಖ್ಯಾನಿಸಿದ ಅವರು, ಈಗ ಜಗತ್ತು ಮಹತ್ವದ ತಿರುವಿಗೆ ಬಂದು ನಿಂತಿದೆ. ಪಾಶ್ಚಾತ್ಯ ಶಕ್ತಿಗಳು ಜಗತ್ತು ಹೇಗೆ ನಡೆಯಬೇಕು ಎಂಬುದನ್ನು ಏಕಮುಖವಾಗಿ ನಿರ್ಧರಿಸಲು ಇನ್ನು ಸಾಧ್ಯವಿಲ್ಲ. ವಿಶ್ವದ ಬಹುತೇಕ ದೇಶಗಳು ಈ ದಬ್ಬಾಳಿಕೆಯನ್ನು ಸಹಿಸಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ನುಡಿಯುವ ಸ್ಥಿತಿಗೆ ಬಂದಿವೆ ಎಂದು ಹೇಳಿದರು.

ಪಾಶ್ಚಾತ್ಯ ದೇಶಗಳ ದಬ್ಬಾಳಿಕೆ ನೀತಿಗಳು ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ. ಯಾರು ಗಾಳಿ ಬೀಸುವ ಪ್ರಕ್ರಿಯೆ ಆರಂಭಿಸುತ್ತಾರೋ ಅವರು ಖಂಡಿತ ಬಿರುಗಾಳಿಯಲ್ಲಿ ಕೊಚ್ಚಿಹೋಗುತ್ತಾರೆ. ಈಗ ವಿಶ್ವದ ಎದುರು ಇರುವುದು ಎರಡೇ ಆಯ್ಕೆ. ಒಂದು ನಮ್ಮನ್ನು ತುಳಿದುಹಾಕುವ ಸಮಸ್ಯೆಗಳ ಮಹಾಪೂರವನ್ನು ಹೊರುವುದು ಅಥವಾ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಈ ಪರಿಹಾರಗಳು ಎಲ್ಲ ಸಂದರ್ಭದಲ್ಲಿಯೂ ಅತ್ಯುತ್ತಮವಾದುವೇ ಆಗಿರುತ್ತವೆ ಎಂದಲ್ಲ. ಆದರೆ, ಜಗತ್ತನ್ನು ಮತ್ತಷ್ಟು ಸ್ಥಿರ ಮತ್ತು ಸುರಕ್ಷಿತ ಸ್ಥಿತಿಗೆ ಕೊಂಡೊಯ್ಯಬಲ್ಲದು.

ಈಗ ನಾವು 2ನೇ ಮಹಾಯುದ್ಧದ ನಂತರ ಅತ್ಯಂತ ಮಹತ್ವದ ಕಾಲಘಟ್ಟದಲ್ಲಿ ನಿಂತಿದ್ದೇವೆ. ಇದು ಅತ್ಯಂತ ಅಪಾಯಕಾರಿ, ಅನೂಹ್ಯವಾದ ತಿರುವುಗಳನ್ನು ಒಳಗೊಂಡಿದೆ. ರಷ್ಯಾದ ಮರ್ಯಾದೆ ತೆಗೆಯಬೇಕೆಂದು ಉಕ್ರೇನ್ ಸ್ವತಃ ತಾನೆ ಅಣುವಿಕಿರಣ ಹೊರಸೂಸುವ ಬಾಂಬ್ ಒಂದನ್ನು ಸ್ಫೋಟಿಸಲು ಚಿಂತನೆ ನಡೆಸಿದೆ ಎಂದು ಆರೋಪಿಸಿದರು. ಆದರೆ ಯಾವುದೇ ಆಧಾರ ಒದಗಿಸಲಿಲ್ಲ.

Published On - 3:05 pm, Fri, 28 October 22