
ಸಿಂಗಾಪುರ, ಜೂನ್ 07: ಸಿಂಗಾಪುರ(Singapore)ದಲ್ಲಿ ಭಾರತೀಯ ಸಮುದಾಯದ ಬಗ್ಗೆ ವಿಷಬೀಜ ಬಿತ್ತುತ್ತಿದ್ದ 14 ಪೋಸ್ಟ್ಗಳನ್ನು ಸರ್ಕಾರ ನಿರ್ಬಂಧಿಸಿದೆ. ಜಾಗತಿಕ ಮಟ್ಟದಲ್ಲಿ ಬಹುಸಂಸ್ಕೃತಿ ಹಾಗೂ ವಿವಿಧ ಜನಾಂಗಗಳ ಸೌಹಾರ್ದಯುತ ಸಹಬಾಳ್ವೆಗೆ ಹೆಸರಾಗಿರುವ ಸಿಂಗಾಪುರ ಸರ್ಕಾರವು ತನ್ನ ದೇಶದಲ್ಲಿರುವ ಭಾರತ ಮೂಲದ ನಾಗರಿಕರ ಹಿತರಕ್ಷಣೆಗಾಗಿ ಅತ್ಯಂತ ಶ್ಲಾಘನೀಯ ಹಾಗೂ ದೃಢವಾದ ಹೆಜ್ಜೆಯನ್ನಿಟ್ಟಿದೆ. ಸಿಂಗಾಪುರದಲ್ಲಿರುವ ಭಾರತೀಯ ಸಮುದಾಯವನ್ನು ನಕಾರಾತ್ಮಕವಾಗಿ ಚಿತ್ರಿಸಲು ಹಾಗೂ ಜನಾಂಗೀಯ ವಿಭಜನೆ ಸೃಷ್ಟಿಸಲು ವಿದೇಶಿ ಮೂಲಗಳಿಂದ ಹರಡಲಾಗುತ್ತಿದ್ದ 14 ದ್ವೇಷಪೂರಿತ ಆನ್ಲೈನ್ ಪೋಸ್ಟ್ಗಳನ್ನು ಅಲ್ಲಿನ ಸರ್ಕಾರ ತಕ್ಷಣವೇ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಸರ್ಕಾರದ ಈ ತ್ವರಿತ ಮತ್ತು ಕಟ್ಟುನಿಟ್ಟಿನ ಕ್ರಮವು ಸಿಂಗಾಪುರದಲ್ಲಿರುವ ಲಕ್ಷಾಂತರ ಭಾರತೀಯರಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸಿದೆ ಮತ್ತು ದೇಶದ ಸಾಮಾಜಿಕ ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯವು (MHA) ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ‘ಆನ್ಲೈನ್ ಕ್ರಿಮಿನಲ್ ಹಾರ್ಮ್ಸ್ ಆಕ್ಟ್ 2023’ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಚಲಾಯಿಸಿದೆ.
ಯೂಟ್ಯೂಬ್, ಫೇಸ್ಬುಕ್ ಮತ್ತು ಎಕ್ಸ್ (ಟ್ವಿಟರ್) ನಂತಹ ಪ್ರಮುಖ ಅಂತಾರಾಷ್ಟ್ರೀಯ ಇಂಟರ್ನೆಟ್ ಮಾಧ್ಯಮ ವೇದಿಕೆಗಳಿಗೆ ಸಿಂಗಾಪುರ ಪೊಲೀಸರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಪೋಸ್ಟ್ಗಳು ಸಿಂಗಾಪುರದ ಯಾವುದೇ ಬಳಕೆದಾರರಿಗೆ ಗೋಚರಿಸದಂತೆ ತಕ್ಷಣವೇ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಆದೇಶಿಸಲಾಗಿದೆ.
ಲಿಟಲ್ ಇಂಡಿಯಾದ ಜನನಿಬಿಡ ಬೀದಿಗಳು ಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳ ಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ವಾಸ್ತವವನ್ನು ವಿರೂಪಗೊಳಿಸಲು ಯತ್ನಿಸಿದ ಜಾಲವನ್ನು ಸರ್ಕಾರ ಯಶಸ್ವಿಯಾಗಿ ಹತ್ತಿಕ್ಕಿದೆ.
ಮತ್ತಷ್ಟು ಓದಿ: Video: ಖಾಲಿ ರಸ್ತೆಯಲ್ಲೂ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು ನಿಂತ ವ್ಯಕ್ತಿ
‘ಚಾನೆಲ್ ನ್ಯೂಸ್ ಏಷ್ಯಾ’ ವರದಿಯ ಪ್ರಕಾರ, ಉನ್ನತ ಮಟ್ಟದ ತನಿಖಾ ಸಂಸ್ಥೆಗಳು ಈ ಆಕ್ಷೇಪಾರ್ಹ ಪೋಸ್ಟ್ಗಳ ಮೂಲವನ್ನು ಪತ್ತೆಹಚ್ಚಿದ್ದು, ಇವು ಚೀನಾದ ಆನ್ಲೈನ್ ಪ್ಲಾಟ್ಫಾರ್ಮ್ ಒಂದರಲ್ಲಿ ಹುಟ್ಟಿಕೊಂಡಿದ್ದವು ಎಂಬುದನ್ನು ಬಹಿರಂಗಪಡಿಸಿವೆ. ಅಲ್ಲಿಂದ ಇವುಗಳನ್ನು ಇತರ ವೆಬ್ಸೈಟ್ಗಳು ಹಂಚಿಕೊಂಡಿದ್ದವು.
ಕಾನೂನು ಸಚಿವ ಎಡ್ವಿನ್ ಟಾಂಗ್ ಅವರು ಮಾತನಾಡಿ, ಯಾವುದೇ ವಿದೇಶಿ ಸರ್ಕಾರಗಳು ಈ ವಿಷಯದ ಹರಡುವಿಕೆಯನ್ನು ಸಂಘಟಿಸಿವೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ. ಆದರೆ, ಮೂಲ ಯಾವುದೇ ಇರಲಿ, ನಮ್ಮ ಸಮಾಜದಲ್ಲಿ ಸೌಹಾರ್ದತೆಯನ್ನು ಕೆಡಿಸುವ ಇಂತಹ ಪ್ರಯತ್ನಗಳನ್ನು ನಾವು ಕಟುವಾಗಿ ವಿರೋಧಿಸುತ್ತೇವೆ, ಎಂದು ಸ್ಪಷ್ಟಪಡಿಸಿದ್ದಾರೆ.
ಸಿಂಗಾಪುರವು ಬಹುಸಂಸ್ಕೃತಿಯ ಸುಂದರ ಸಮಾಜವಾಗಿದ್ದು, ಇಲ್ಲಿ ಎಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಸಮುದಾಯಗಳನ್ನು ಸಮಾನ ಗೌರವ ಮತ್ತು ಪ್ರೀತಿಯಿಂದ ನೋಡಲಾಗುತ್ತದೆ. ಭಾರತೀಯರ ಸಮಗ್ರತೆ ಮತ್ತು ಘನೆತೆಗೆ ಧಕ್ಕೆ ತರುವ ಯಾವುದೇ ದ್ವೇಷ ಸಂದೇಶಗಳನ್ನು ನಮ್ಮ ದೇಶದಲ್ಲಿ ಸಹಿಸುವುದಿಲ್ಲ.
ಜನಾಂಗೀಯ ಸಾಮರಸ್ಯ ಮತ್ತು ಸಾಮಾಜಿಕ ಸಮತೋಲನವನ್ನೇ ತನ್ನ ಅತಿ ದೊಡ್ಡ ಶಕ್ತಿ ಎಂದು ನಂಬಿರುವ ಸಿಂಗಾಪುರ ಸರ್ಕಾರವು, ಯಾವುದೇ ವದಂತಿಗಳನ್ನು ಕುರುಡಾಗಿ ನಂಬದಂತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ತನ್ನ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಸಿಂಗಾಪುರ ಸರ್ಕಾರದ ಈ ಮಾದರಿ ನಡೆ ಜಾಗತಿಕ ಮಟ್ಟದಲ್ಲಿ ಭಾರತೀಯ ಸಮುದಾಯದ ರಕ್ಷಣೆಗೆ ದಿಕ್ಸೂಚಿಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ