ಧರ್ಮ ನಿಂದನೆ ಆರೋಪ: ಪಾಕಿಸ್ತಾನದಲ್ಲಿ ಶ್ರೀಲಂಕಾ ಪ್ರಜೆಯ ಬರ್ಬರ ಹತ್ಯೆ

ಪಾಕಿಸ್ತಾನಿ ಯುವಕರ ಈ ಕೃತ್ಯ ಹಾಗೂ ಅಲ್ಲಿ ಸೇರಿದ್ದ ಜನರು ಟಿಎಲ್ ಪಿ ಪರ ಘೋಷಣೆ ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಧರ್ಮನಿಂದನೆ ಆರೋಪ ಹೊರಿಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ

ಧರ್ಮ ನಿಂದನೆ ಆರೋಪ: ಪಾಕಿಸ್ತಾನದಲ್ಲಿ ಶ್ರೀಲಂಕಾ ಪ್ರಜೆಯ ಬರ್ಬರ ಹತ್ಯೆ
ಸಾಂದರ್ಭಿಕ ಚಿತ್ರ
Edited By:

Updated on: Dec 03, 2021 | 7:05 PM

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮ ನಿಂದನೆಯ ಆರೋಪದ ಮೇಲೆ ಶ್ರೀಲಂಕಾ ಪ್ರಜೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ಗುಂಪೊಂದು ಶುಕ್ರವಾರ ಈ ಕೃತ್ಯ ಎಸಗಿದೆ. 40 ವರ್ಷದ ಪ್ರಿಯಾಂತ ಕುಮಾರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪ್ರಿಯಾಂತ್ ಕುಮಾರ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ಕೋಟ್ ನ ಗೋಡೆಯಲ್ಲಿದ್ದ ಹ್ರೀಕ್ ಲಬ್ಬೈಕ್ (ಟಿಎಲ್​ಪಿ) ಬಿತ್ತಿಪತ್ರವನ್ನು ಕಿತ್ತು ಕಸದಬುಟ್ಟಿಗೆ ಎಸೆದು, ಗೋಡೆಯ ಮೇಲೆ ಕುರಾನ್ ಪದ್ಯಗಳನ್ನು ಕೆತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ ಗುಂಪೊಂದು ಪ್ರಯಾಂತ್ ಕುಮಾರ್ ಅವರನ್ನು ಹತ್ಯೆಗೈದಿದೆ. ಪ್ರಯಾಂತ್ ಅವರು ಸಿಯಾಲ್​ ಕೋಟ್​ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕರ ಗುಂಪು ಎಕಾಏಕಿ ನುಗ್ಗಿ ಪ್ರಿಯಾಂತ್ ಅವರನ್ನು ಕಾರ್ಖಾನೆಯಿಂದ ಹೊರಗೆ ಎಳೆದುತಂದು ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಪ್ರಿಯಾಂತ್ ಕುಮಾರ್ ಅವರನ್ನು ಪೊಲಿಸರು ಸ್ಥಳಕ್ಕೆ ಆಗಮಿಸುವ ಮೊದಲೇ ಬೆಂಕಿ ಹಚ್ಚಿ ಸುಟ್ಟಿದ್ದರು. ಇದೇ ವೇಳೆ ಕಾರ್ಖಾನೆಯ ಹೊರಗೆ ಟಿಎಲ್ ಪಿ ಬೆಂಬಲಿತ ನೂರಾರು ಜನರು ಜಮಾಯಿಸಿದ್ದರು.

ಪಾಕಿಸ್ತಾನಿ ಯುವಕರ ಈ ಕೃತ್ಯ ಹಾಗೂ ಅಲ್ಲಿ ಸೇರಿದ್ದ ಜನರು ಟಿಎಲ್ ಪಿ ಪರ ಘೋಷಣೆ ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಧರ್ಮನಿಂದನೆ ಆರೋಪ ಹೊರಿಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗೆ ಪಾಕಿಸ್ತಾನಿ ಸರ್ಕಾರ ಟಿಎಲ್ ಪಿ ಜತೆಗಿನ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಬಳಿಕ ಅದರ ಮುಖ್ಯಸ್ಥ ಸಾದ್ ರಿಜ್ಜಿ ಸೇರಿದಂತೆ ಭಯೋತ್ಪಾದನೆ ಆರೋಪ ಹೊತ್ತ 1,500ಕ್ಕೂ ಹೆಚ್ಚು ಮಂದಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಹತ್ಯೆ ನಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಶ್ರೀಲಂಕಾ ಪ್ರಜೆ ಪ್ರಿಯಾಂತ್ ಹತ್ಯೆ ಬಳಿಕ ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸಿಯಾಲ್ಕೋಟ್ ಜಿಲ್ಲಾ ಪೊಲೀಸ್​ ಅಧಿಕಾರಿ ಉಮರ್​ ಸಯದ್​ ಮಲಿಕ್ ತಿಳಿಸಿದ್ದಾರೆ.

Web contact

TV9 Kannada

Read More
Follow Us