ಶ್ರೀಲಂಕಾಕ್ಕೆ ಭಾರತದಿಂದ ಅಕ್ಕಿ ಸರಬರಾಜು ಆರಂಭ: ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಸಹಾಯಹಸ್ತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 03, 2022 | 10:10 AM

ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ಶ್ರೀಲಂಕಾಕ್ಕೆ ಭಾರತ ಸರ್ಕಾರವು ಒಂದು ಶತಕೋಟಿ ಡಾಲರ್​ ಮೊತ್ತದ ಹಣಕಾಸು ಸಹಕಾರ ಒದಗಿಸುವ ಭರವಸೆ ನೀಡಿದೆ.

ಶ್ರೀಲಂಕಾಕ್ಕೆ ಭಾರತದಿಂದ ಅಕ್ಕಿ ಸರಬರಾಜು ಆರಂಭ: ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಸಹಾಯಹಸ್ತ
ಶ್ರೀಲಂಕಾಕ್ಕೆ ಭಾರತ ಸರ್ಕಾರವು ಅಕ್ಕಿ ಪೂರೈಕೆ ಆರಂಭಿಸಿದೆ
Follow us on

ಕೊಲಂಬೊ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ಭಾರತ ಸರ್ಕಾರವು (Sri Lanka Economic Crisis) 40 ಸಾವಿರ ಟನ್ ಅಕ್ಕಿ ಪೂರೈಸುವ ಭರವಸೆ ನೀಡಿದೆ. ದೇಶದ ವಿವಿಧೆಡೆಯಿಂದ ಅಕ್ಕಿ ತುಂಬಿಕೊಂಡ ಟ್ರಕ್​ಗಳು ಶ್ರೀಲಂಕಾಕ್ಕೆ ಹೊರಟಿರುವ ಹಡಗಿನತ್ತ ಪ್ರಯಾಣ ಆರಂಭಿಸಿವೆ. ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ಶ್ರೀಲಂಕಾಕ್ಕೆ ಭಾರತ ಸರ್ಕಾರವು ಒಂದು ಶತಕೋಟಿ ಡಾಲರ್​ ಮೊತ್ತದ ಹಣಕಾಸು ಸಹಕಾರ ಒದಗಿಸುವ ಭರವಸೆ ನೀಡಿದೆ. ಈ ಒಪ್ಪಂದದ ಭಾಗವಾಗಿ ಅಕ್ಕಿ ಪೂರೈಕೆ ಪ್ರಕ್ರಿಯೆ ಆರಂಭವಾಗಿದೆ. 2.2 ಕೋಟಿ ಜನಸಂಖ್ಯೆಯ ಶ್ರೀಲಂಕಾದ ವಿದೇಶಿ ಮೀಸಲು ನಿಧಿ ಕಳೆದ ಎರಡು ವರ್ಷಗಳಲ್ಲಿ ಶೇ 70ರಷ್ಟು ಕುಸಿದಿದೆ. ಇದರಿಂದಾಗಿ ಅಲ್ಲಿನ ಕರೆನ್ಸಿ ಮೌಲ್ಯ ಕಳೆದುಕೊಂಡಿದ್ದು, ಹಣದುಬ್ಬರ ತೀವ್ರಗತಿಯಲ್ಲಿ ಹೆಚ್ಚಾಗಿದೆ. ದೈನಂದಿನ ಅಗತ್ಯ ವಸ್ತುಗಳಿಗಾಗಿ ಜನರು ಪರದಾಡುವಂತಾಗಿದೆ. ವಿಶ್ವದ ಹಲವು ದೇಶಗಳ ಬಳಿ ಶ್ರೀಲಂಕಾ ನೆರವು ಯಾಚಿಸುತ್ತಿದೆ. ಪ್ರತಿವರ್ಷ ಏಪ್ರಿಲ್ ಮಧ್ಯದಲ್ಲಿ ಹೊಸ ವರ್ಷ ಆಚರಿಸುವುದು ಶ್ರೀಲಂಕಾದ ವಾಡಿಕೆ. ಇದು ಶ್ರೀಲಂಕಾದ ದೊಡ್ಡ ಹಬ್ಬವೂ ಹೌದು. ಹಬ್ಬವು ಆರಂಭವಾಗುವುದಕ್ಕೆ ಮೊದಲೇ ಭಾರತದ ಅಕ್ಕಿ ಶ್ರೀಲಂಕಾ ತಲುಪಲಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನೂ ಭಾರತದ ಶ್ರೀಲಂಕಾಕ್ಕೆ ಒದಗಿಸುತ್ತಿದೆ.

ಶ್ರೀಲಂಕಾದಲ್ಲಿ ಶುಕ್ರವಾರದಿಂದ ತುರ್ತುಪರಿಸ್ಥಿತಿ (Srilanka Economic Crisis) ಜಾರಿಗೆ ಬಂದಿದೆ. ಇದರಿಂದಾಗಿ ಭದ್ರತಾ ಪಡೆಗಳಿಗೆ ದೊಡ್ಡಮಟ್ಟದ ಅಧಿಕಾರ ಲಭ್ಯವಾಗಿದ್ದು, ಪ್ರತಿಭಟನೆಗಳನ್ನು ಮುಂದಿನ ದಿನಗಳಲ್ಲಿ ಹತ್ತಿಕ್ಕಲು ಸರ್ಕಾರಕ್ಕೆ ಹೊಸ ಅಸ್ತ್ರ ಸಿಕ್ಕಂತೆ ಆಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟ ಅನುಭವಿಸುತ್ತಿರುವ ನೂರಾರು ಜನರು ಶುಕ್ರವಾರ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ಕೆಲವರು ಅಧ್ಯಕ್ಷರ ಮನೆಗೂ ನುಗ್ಗಲು ಯತ್ನಿಸಿದರು. ಪರಿಸ್ಥಿತಿ ಕೈಮೀರುವುದನ್ನು ಗಮನಿಸಿದ ಅಧ್ಯಕ್ಷ ಗೊಟಬಾಯ ರಾಜಪಕ್ಸ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದರು.

ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತುರ್ತು ಪರಿಸ್ಥಿತಿ ವಿಧಿಸಲಾಗಿದೆ. ಅಗತ್ಯವಸ್ತುಗಳ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳಲು, ಜನರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು ಭದ್ರತಾ ಪಡೆಗಳು ಅಗತ್ಯ ಕ್ರಮ ತೆಗೆದುಕೊಳ್ಳಲಿವೆ ಎಂದು ಅಧ್ಯಕ್ಷ ಗೊಟಬಾಯ ರಾಜಪಕ್ಸ ಹೇಳಿದರು. 2 2 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಶ್ರೀಲಂಕಾ ದೇಶವು ಅಗತ್ಯ ವಸ್ತುಗಳ ಕೊರತೆಯಿಂದ ಕಂಗಾಲಾಗಿದೆ. ಹಣದುಬ್ಬರ ಹೆಚ್ಚಾಗಿದ್ದು ಬೆಲೆಗಳು ಗಗನಕ್ಕೇರಿವೆ. 1948ರಲ್ಲಿ ಬ್ರಿಟನ್​ನಿಂದ ಸ್ವಾತಂತ್ರ್ಯ ಪಡೆದ ನಂತರ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯವಸ್ತಗೊಂಡಿದೆ.

ರಾಜಪಕ್ಸ ಕುಟುಂಬ ಅಧಿಕಾರದಿಂದ ದೂರ ಸರಿಯಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ‘ಭ್ರಷ್ಟಾಚಾರ ಸಾಕು, ಮನೆಗೆ ಹೋಗು ಗೋಟ’ ಎಂಬರ್ಥದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ದೇಶಾದ್ಯಂತ ಪ್ರತಿಭಟಿಸುತ್ತಿದ್ದಾರೆ. ಪೆಟ್ರೋಲ್ ಬಂಕ್​ಗಳ ಎದುರು ಜನರು ದೊಡ್ಡ ಸಂಖ್ಯೆಯಲ್ಲಿ ಪಾಳಿಗಳಲ್ಲಿ ನಿಲ್ಲುತ್ತಿರುವ ಕಾರಣ ಸರ್ಕಾರ ಮಿಲಿಟರಿ ನಿಯೋಜಿಸಿದೆ. ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಜನರು ಘರ್ಷಣೆಗೆ ಇಳಿಯುತ್ತಿದ್ದಾರೆ. ಭದ್ರತಾ ಪಡೆಗಳ ವಾಹನಗಳನ್ನು ಸುಟ್ಟುಹಾಕುತ್ತಿದ್ದಾರೆ. ಶ್ರೀಲಂಕಾದ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ ಎಂದು ಬಿಂಬಿಸಲು ಯತ್ನಿಸುತ್ತಿರುವ ಅಲ್ಲಿನ ಪೊಲೀಸರು ಸ್ಥಳೀಯ ಮಾಧ್ಯಮ ಪ್ರತಿನಿಧಿಗಳನ್ನು ಹತ್ತಿಕ್ಕುತ್ತಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿರುವ ತಮಿಳಿಗರಿಗೆ ನಾವು ಸಹಾಯ ಮಾಡುತ್ತೇವೆ, ಅನುಮತಿ ಕೊಡಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ ಸ್ಟಾಲಿನ್​

ಇದನ್ನೂ ಓದಿ: ಶ್ರೀಲಂಕಾನಲ್ಲಿ ಅರಾಜಕತೆ, ಅಧ್ಯಕ್ಷ ರಾಜಪಕ್ಸಾ ಮನೆ ಮುಂದೆ ಸಾವಿರಾರು ಜನರಿಂದ ಪ್ರತಿಭಟನೆ