ಇತಿಹಾಸದಲ್ಲೇ ಅತಿದೊಡ್ಡ ಸಾಮೂಹಿಕ ಧ್ಯಾನಕ್ಕೆ ರವಿಶಂಕರ್ ಗುರೂಜಿ ನೇತೃತ್ವ; 1.21 ಕೋಟಿ ಧ್ಯಾನಾಸಕ್ತರು ಭಾಗಿ
World Meditation Day: ವಿಶ್ವ ಧ್ಯಾನ ದಿನದ ಅಂಗವಾಗಿ ವಿಶ್ವಸಂಸ್ಥೆಯಿಂದ ಧ್ಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ 150 ದೇಶಗಳಿಂದ 1.21 ಕೋಟಿ ಜನರು ಭಾಗಿಯಾಗಿದ್ದರು. ಇದರಲ್ಲಿ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಈ ಐತಿಹಾಸಿಕ ಧ್ಯಾನಕ್ಕೆ ನೇತೃತ್ವ ವಹಿಸಿದ್ದರು. ಹಾಗೇ, ರವಿಶಂಕರ್ ಗುರೂಜಿ ಅವರ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಗ್ಯಾಲಪ್ ಜಾಗತಿಕ ಕಲ್ಯಾಣ ಅಧ್ಯಯನಕ್ಕೆ ಚಾಲನೆ ನೀಡಲಾಯಿತು.

ನ್ಯೂಯಾರ್ಕ್, ಡಿಸೆಂಬರ್ 22: ದಿ ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕ ಹಾಗೂ ಜಾಗತಿಕ ಆಧ್ಯಾತ್ಮಿಕ ಗುರು ಗುರುದೇವ ಶ್ರೀ ಶ್ರೀ ರವಿಶಂಕರ್ (Sri Sri Ravi Shankar) ಅವರ ನೇತೃತ್ವದಲ್ಲಿ 150 ದೇಶಗಳಿಂದ 1.21 ಕೋಟಿಗೂ ಹೆಚ್ಚಿನ ಜನರು ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ಧ್ಯಾನದಲ್ಲಿ ಭಾಗವಹಿಸಿದರು. ತಜ್ಞರು ಇದನ್ನು ಜಾಗತಿಕ ಕಲ್ಯಾಣಕ್ಕೆ ಹೊಸ ಆಯಾಮವನ್ನು ನೀಡುವ ಮಹತ್ವದ ಕ್ಷಣವೆಂದು ಹೇಳುತ್ತಿದ್ದಾರೆ. ವಿಶ್ವ ಧ್ಯಾನ ದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಗತ್ತಿನೆಲ್ಲೆಡೆ ಜನರಲ್ಲಿ ಹೆಚ್ಚುತ್ತಿರುವ ಆತಂಕ, ಒತ್ತಡ, ಸಂಘರ್ಷ ಮತ್ತು ಮಾನಸಿಕ ಆರೋಗ್ಯ ಸವಾಲುಗಳ ನಡುವೆಯೇ ಮಾನವಕುಲ ಹುಡುಕುತ್ತಿರುವ ಶಾಂತಿ ಮತ್ತು ಸಹನಶೀಲತೆಯನ್ನು ಧ್ಯಾನದ ಅಭ್ಯಾಸದ ಮೂಲಕ ಕಂಡುಕೊಳ್ಳುವ ಬಗೆಯನ್ನು ಈ ಧ್ಯಾನಾಸಕ್ತರ ಸಂಖ್ಯೆ ಸ್ಪಷ್ಟವಾಗಿ ಸಾಬೀತುಪಡಿಸಿತು.
ಜಗತ್ತಿನಲ್ಲಿ ಮಾನಸಿಕ ನೆಮ್ಮದಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ನೆಲೆಗೊಳಿಸುವ ಉದ್ದೇಶದಿಂದ 2024ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21ನ್ನು ‘ವಿಶ್ವ ಧ್ಯಾನ ದಿನ’ವೆಂದು ಅಧಿಕೃತವಾಗಿ ಅಂಗೀಕರಿಸಿತು. ಈ ವರ್ಷದ ಕಾರ್ಯಕ್ರಮವು ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯ ಟ್ರಸ್ಟೀಶಿಪ್ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು. ಗುರುದೇವ ರವಿಶಂಕರ್ ಅವರ ನೇತೃತ್ವದಲ್ಲಿ ನಡೆದ ಧ್ಯಾನದ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಧ್ಯಾನದಲ್ಲಿ ಭಾರತದ ಗ್ರಾಮೀಣ-ನಗರ ಪ್ರದೇಶಗಳೂ ಸೇರಿದಂತೆ ಆಫ್ರಿಕಾ, ಯುರೋಪ್, ಏಷ್ಯಾ, ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಖಂಡಗಳಿಂದಲೂ ಜನರು ಆನ್ಲೈನ್ ಮೂಲಕ ಭಾಗವಹಿಸಿದ್ದರು.
ಇದನ್ನೂ ಓದಿ: World Meditation Day: ವಿಶ್ವಸಂಸ್ಥೆಯಲ್ಲಿ ವಿಶ್ವ ಧ್ಯಾನ ದಿನದ ಪ್ರಯುಕ್ತ ಜಗತ್ತಿಗೆ ಧ್ಯಾನದ ಮಹತ್ವ ಸಾರಿದ ರವಿಶಂಕರ್ ಗುರೂಜಿ
ಈ ಕಾರ್ಯಕ್ರಮವು ಗಾಢವಾದ ಮೌನದ ಮಾರ್ದನಿಯಾಗಿತ್ತು. 60ಕ್ಕೂ ಅಧಿಕ ದೇಶಗಳಿಂದ ವಿದ್ಯಾರ್ಥಿಗಳು, ವೃತ್ತಿಪರರು, ರೈತರು, ಹಾಗೂ ಕಾರಾಗೃಹ ಕೈದಿಗಳವರೆಗೆ ವಿಭಿನ್ನ ಹಿನ್ನೆಲೆಯ ಜನರು ಒಂದೇ ಸಮಯದಲ್ಲಿ ಧ್ಯಾನದ ಅನುಭವಕ್ಕೆ ಸಾಕ್ಷಿಯಾಗಿದ್ದು ಇದರ ವಿಶೇಷತೆ.

ವಿಶ್ವಾದ್ಯಂತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಜಾಗತಿಕ ಸಂಸ್ಥೆಯಾದ ಗ್ಯಾಲಪ್ ಮತ್ತು ದಿ ಆರ್ಟ್ ಆಫ್ ಲಿವಿಂಗ್ ಸಂಯುಕ್ತವಾಗಿ ಧ್ಯಾನ ಮತ್ತು ಸಮಾಜ ಕಲ್ಯಾಣ ಕುರಿತಾದ ಜಾಗತಿಕ ಅಧ್ಯಯನವನ್ನು ಪ್ರಾರಂಭಿಸಿದ್ದು, ಈ ಜಾಗತಿಕ ಚಳವಳಿಗೆ ಮತ್ತೊಂದು ಮಹತ್ವದ ಆಯಾಮವನ್ನು ನೀಡಿತು.
ವಿಶ್ವ ಧ್ಯಾನ ದಿನದ ಮುನ್ನ ಘೋಷಿಸಲಾದ ಈ ಸಹಕಾರದಡಿಯಲ್ಲಿ, ಗ್ಯಾಲಪ್ ತನ್ನ ಪ್ರಸಿದ್ಧ ‘ಗ್ಯಾಲಪ್ ವರ್ಲ್ಡ್ ಪೋಲ್’ ನಲ್ಲಿ ಧ್ಯಾನಕ್ಕೆ ಸಂಬಂಧಿಸಿದ ಹೊಸ ಪ್ರಶ್ನೆಗಳನ್ನು ಸೇರಿಸಲಿದೆ. ಇದರಿಂದ ಮಾನಸಿಕ ಆರೋಗ್ಯ, ಜೀವನ ಮೌಲ್ಯಮಾಪನ ಹಾಗೂ ಸಾಮಾಜಿಕ ಕಲ್ಯಾಣಕ್ಕೆ ಧ್ಯಾನದ ಪಾತ್ರವನ್ನು ವಿಶ್ಲೇಷಿಸಲಿದೆ. ಇದುವರೆಗೆ ಲಭ್ಯವಿರದ ಮಹತ್ತರ ಡೇಟಾ ಇದರಿಂದ ಸೃಷ್ಟಿಯಾಗಲಿದೆ.
ಇದನ್ನೂ ಓದಿ: ಧ್ಯಾನ ಫ್ಯಾಷನ್ ಅಲ್ಲ, ಇಂದಿನ ಸಮಾಜದ ಅಗತ್ಯ; ಜಿನೀವಾದಲ್ಲಿ ರವಿಶಂಕರ್ ಗುರೂಜಿ ಅಭಿಮತ
ಗ್ಯಾಲಪ್ನ ಇತ್ತೀಚಿನ ಸಂಶೋಧನೆಗಳು, ಜಾಗತಿಕ ಮಟ್ಟದಲ್ಲಿ ಒತ್ತಡ ಮತ್ತು ಚಿಂತೆಯಂತಹ ನಕಾರಾತ್ಮಕ ಭಾವನೆಗಳು ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವುದನ್ನು ತೋರಿಸುತ್ತವೆ. ಇದರಿಂದ ಮಾನಸಿಕ ಆರೋಗ್ಯ ಸುಧಾರಣಾ ಪರಿಹಾರಗಳ ಅಗತ್ಯತೆ ತೀವ್ರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಈ ಅಧ್ಯಯನದ ಜಾಗತಿಕ ಫಲಿತಾಂಶಗಳು ಡಿಸೆಂಬರ್ 2026ರಲ್ಲಿ ಪ್ರಕಟವಾಗಲಿದ್ದು, ಸಾರ್ವಜನಿಕ ನೀತಿ, ಶಿಕ್ಷಣ ಹಾಗೂ ಕಾರ್ಯಕ್ಷೇತ್ರದಲ್ಲಿ ಫಲಿತಾಂಶಗಳು ಉತ್ತಮಗೊಳ್ಳುವ ನಿರೀಕ್ಷೆಯಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




