ಅಮ್ಮಾ, ನೀನಿರುವ ಸ್ವರ್ಗಕ್ಕೆ ಬರಲು ನಾನೂ ಒಳ್ಳೆಯ ಕೆಲಸಗಳನ್ನೇ ಮಾಡುತ್ತೇನೆ; ರಷ್ಯಾ ಸೈನಿಕರ ದಾಳಿಗೆ ಮೃತಪಟ್ಟ ತಾಯಿಗೆ ಪುಟ್ಟ ಮಗಳ ಪತ್ರ

ಒಂದು ಪುಟ್ಟ ಡೈರಿಯಲ್ಲಿ ಮಗಳು ತನ್ನ ತೀರಿಹೋದ ತಾಯಿಗೆ ಬರೆದ ಪತ್ರದ ಫೋಟೋವನ್ನು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ ಎಂಬುವರು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಅಮ್ಮಾ, ನೀನಿರುವ ಸ್ವರ್ಗಕ್ಕೆ ಬರಲು ನಾನೂ ಒಳ್ಳೆಯ ಕೆಲಸಗಳನ್ನೇ ಮಾಡುತ್ತೇನೆ; ರಷ್ಯಾ ಸೈನಿಕರ ದಾಳಿಗೆ ಮೃತಪಟ್ಟ ತಾಯಿಗೆ ಪುಟ್ಟ ಮಗಳ ಪತ್ರ
ತೀರಿಕೊಂಡ ಅಮ್ಮನಿಗೆ ಪತ್ರ ಬರೆದ ಬಾಲಕಿ
Edited By:

Updated on: Apr 10, 2022 | 3:23 PM

ಯುದ್ಧ ಪೀಡಿತ ಉಕ್ರೇನ್​ನಿಂದ ಒಂದಲ್ಲ ಒಂದು ಮನಕಲಕುವ, ಕರುಣಾಜನಕ ಘಟನೆಗಳು ವರದಿಯಾಗುತ್ತಿವೆ. ಅಲ್ಲಿ ಹೆತ್ತ ತಂದೆ-ತಾಯಿಯನ್ನು ಕಳೆದುಕೊಂಡ ಅದೆಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡು ಪರಿತಪಿಸುತ್ತಿರುವ ಹೆತ್ತವರೂ ಇದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ, ಪ್ರಮುಖ ಮಾಧ್ಯಮಗಳಲ್ಲಿ ಇಂಥ ಹತ್ತು-ಹಲವು ವಿಚಾರಗಳು ವೈರಲ್​ ಆಗುತ್ತಿವೆ. ಹಾಗೇ ಈಗ 9 ವರ್ಷದ ಹುಡುಗಿಯೊಬ್ಬಳು ತನ್ನ ಮೃತ ತಾಯಿಗೆ ಬರೆದ ಮನಮಿಡಿಯುವ, ಭಾವನಾತ್ಮಕ ಪತ್ರವೊಂದು ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ. 

ಒಂದು ಪುಟ್ಟ ಡೈರಿಯಲ್ಲಿ ಮಗಳು ತನ್ನ ತೀರಿಹೋದ ತಾಯಿಗೆ ಬರೆದ ಪತ್ರದ ಫೋಟೋವನ್ನು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ ಎಂಬುವರು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಪುಟ್ಟ ಹುಡುಗಿಯ ತಾಯಿ ಬೊರೊಡ್ಯಂಕಾದಲ್ಲಿ, ರಷ್ಯಾ ಸೇನೆಯ ಆಕ್ರಮಣಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಇವರ ಕಾರಿನ ಮೇಲೆಯೇ ರಷ್ಯಾ ಸೈನಿಕರು ದಾಳಿ ನಡೆಸಿದ್ದರು. ತಾಯಿಯನ್ನು ಕಳೆದುಕೊಂಡವಳ ಪತ್ರವಿದು, ‘ಅಮ್ಮಾ, ನೀವು ಈ ಜಗತ್ತಿನಲ್ಲಿಯೇ ಅತ್ಯುತ್ತಮ ತಾಯಿ.ನಾನೆಂದಿಗೂ ನಿನ್ನನ್ನು ಮರೆಯುವುದೇ ಇಲ್ಲ. ನೀವು ತುಂಬ ಒಳ್ಳೆಯವರು. ಈಗಾಗಲೇ ಸ್ವರ್ಗಕ್ಕೆ ಹೋಗಿದ್ದೀರಿ, ಅಲ್ಲಿ ಸಂತೋಷವಾಗಿದ್ದೀರಿ ಎಂದು ಭಾವಿಸುತ್ತೇನೆ. ಹಾಗೇ ನಾನೂ ತುಂಬ ಒಳ್ಳೆಯವಳಾಗಿರಲು ಕೈಲಾದಷ್ಟು ಪ್ರಯತ್ನ ಪಡುತ್ತೇನೆ. ಇದರಿಂದ ನಾನೂ ಸತ್ತ ಮೇಲೆ ಸ್ವರ್ಗಕ್ಕೆ ಬರಬಹುದು. ನಾವಿಬ್ಬರೂ ಸ್ವರ್ಗದಲ್ಲಿ ಭೇಟಿಯಾಗೋಣ’ ಎಂದು ಬರೆದಿದ್ದಾಗಿ ಆಂಟನ್​ ಕ್ಯಾಪ್ಷನ್ ಬರೆದಿದ್ದಾರೆ. ಕೊನೆಯಲ್ಲಿ, ‘ಕಿಸ್​ ಯೂ ಅಮ್ಮಾ..’ ಎಂದು ಬರೆದು, ನಿಮ್ಮವಳು ಗಲಿಯಾ ಎಂದೂ ಆಕೆ ಬರೆದಿದ್ದನ್ನು ಫೋಟೋದಲ್ಲಿ ಕಾಣಬಹುದು.

ಉಕ್ರೇನ್​ನಲ್ಲಿ ಇಂಥ ಹತ್ತು-ಹಲವು ಘಟನೆಗಳು ನಡೆಯುತ್ತಿವೆ. ರಷ್ಯಾ ಸೈನಿಕರು ಯುದ್ಧದ ಹೆಸರಲ್ಲಿ ಕ್ರೈಂಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಸೈನಿಕರು ಅತ್ಯಾಚಾರದಂತ ಹೀನ ಕೃತ್ಯದಲ್ಲೂ ತೊಡಗಿಕೊಳ್ಳುತ್ತಿದ್ದಾರೆ. ಅವರಿಂದ ಪಾರಾಗಲು ಯುವತಿಯರು ತಮ್ಮ ತಲೆಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರವನ್ನು ಇವಾಂಕಿವ್​​ನ ಮೇಯರ್​ ತಿಳಿಸಿದ್ದಾರೆ. ಫೆ.24ರಿಂದ ಉಕ್ರೇನ್​ನಲ್ಲಿ ಯುದ್ಧ ಶುರುವಾಗಿದ್ದು, ಇಲ್ಲಿಯವರೆಗೆ ಸುಮಾರು 4 ಮಿಲಿಯನ್ ನಾಗರಿಕರು ಅಲ್ಲಿಂದ ಪಲಾಯನಗೈದಿದ್ದಾರೆ.

ಇದನ್ನೂ ಓದಿ: ಸ್ಪೆಷಲ್​ ಚಾಪರ್​ನಲ್ಲಿ ಧರ್ಮಸ್ಥಳ ತಲುಪಿದ ಯಶ್​; ಮಂಜುನಾಥನಿಗೆ ವಿಶೇಷ ಪೂಜೆ

Published On - 3:14 pm, Sun, 10 April 22