Adani Enterprises: ಅದಾನಿ ಎಂಟರ್​ಪ್ರೈಸಸ್​ಗೆ 820 ಕೋಟಿ ನಿವ್ವಳ ಲಾಭ; ಆದಾಯವೂ ಹೆಚ್ಚಳ

ತ್ರೈಮಾಸಿಕ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಎಂಟರ್​​ಪ್ರೈಸಸ್ ಷೇರು ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಮಂಗಳವಾರ (ಫೆ. 14) ಮಧ್ಯಾಹ್ನ 2.30ರ ವೇಳೆಗೆ ಎನ್​ಎಸ್​ಇಯಲ್ಲಿ ಕಂಪನಿಯ ಷೇರು 1,833.25 ರೂ.ನಲ್ಲಿ ವಹಿವಾಟು ನಡೆಸಿದೆ.

Adani Enterprises: ಅದಾನಿ ಎಂಟರ್​ಪ್ರೈಸಸ್​ಗೆ 820 ಕೋಟಿ ನಿವ್ವಳ ಲಾಭ; ಆದಾಯವೂ ಹೆಚ್ಚಳ
ಸಾಂದರ್ಭಿಕ ಚಿತ್ರ

Updated on: Feb 14, 2023 | 4:07 PM

ಮುಂಬೈ: ಅದಾನಿ ಸಮೂಹದ (Adani Group) ಪ್ರಮುಖ ಕಂಪನಿ ಅದಾನಿ ಎಂಟರ್​​ಪ್ರೈಸಸ್ (Adani Enterprises) ಡಿಸೆಂಬರ್​​ನಲ್ಲಿ ಕೊನೆಗೊಂಡ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, 820 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಅದಕ್ಕೂ ವರ್ಷದ ಹಿಂದೆ ಕಂಪನಿ 11.63 ಕೋಟಿ ರೂ. ನಷ್ಟ ಅನುಭವಿಸಿತ್ತು. ಕಾರ್ಯಾಚರಣೆಗಳಿಂದ ದೊರೆಯುವ ಆದಾಯದಲ್ಲಿಯೂ ಶೇ 42ರಷ್ಟು ಹೆಚ್ಚಳ ದಾಖಲಾಗಿದೆ. ಇದು ವರ್ಷದ ಹಿಂದಿನ 18,757.9 ಕೋಟಿ ರೂ.ನಿಂದ 26,612.2 ಕೋಟಿ ರೂ.ಗೆ ಹೆಚ್ಚಾಗಿದೆ. ಅದಾನಿ ಎಂಟರ್​​ಪ್ರೈಸಸ್ 29,245 ಕೋಟಿ ರೂ. ಆದಾಯ ಗಳಿಸಬಹುದು ಮತ್ತು 582.80 ಕೋಟಿ ರೂ. ಲಾಭ ಗಳಿಸಬಹುದು ಎಂದು ‘ಬ್ಲೂಮ್​ಬರ್ಗ್’ ಅಂದಾಜಿಸಿತ್ತು. ಆದರೆ, ಈ ಲೆಕ್ಕಾಚಾರವನ್ನು ಮೀರಿ ಅದಾನಿ ಎಂಟರ್​​ಪ್ರೈಸಸ್ ಆದಾಯ, ಲಾಭ ಗಳಿಸಿದೆ.

ಷೇರು ಮೌಲ್ಯದಲ್ಲಿ ಜಿಗಿತ

ತ್ರೈಮಾಸಿಕ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಎಂಟರ್​​ಪ್ರೈಸಸ್ ಷೇರು ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಮಂಗಳವಾರ (ಫೆ. 14) ಮಧ್ಯಾಹ್ನ 2.30ರ ವೇಳೆಗೆ ಎನ್​ಎಸ್​ಇಯಲ್ಲಿ ಕಂಪನಿಯ ಷೇರು 1,833.25 ರೂ.ನಲ್ಲಿ ವಹಿವಾಟು ನಡೆಸಿದೆ.

ದೊಡ್ಡ ಮಟ್ಟದ ಮೂಲಸೌಕರ್ಯ ಯೋಜನೆಗಳ ಅನುಷ್ಠಾನ ಸಾಮರ್ಥ್ಯ, ಸಂಘಟನಾತ್ಮಕ ಅಭಿವೃದ್ಧಿ ಹಾಗೂ ನಿರ್ವಹಣಾ ಕೌಶಲಗಳು ನಮ್ಮದಾಗಿದ್ದು ಜಾಗತಿಕ ಮಟ್ಟದಲ್ಲೇ ಸ್ಪರ್ಧಾತ್ಮಕವಾಗಿವೆ. ಇದುವೇ ನಮ್ಮ ಶಕ್ತಿ ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ.

ಇದನ್ನೂ ಓದಿ: Adani Row: ಅದಾನಿ-ಹಿಂಡನ್​​ಬರ್ಗ್ ಪ್ರಕರಣ; ತಜ್ಞರ ಸಮಿತಿ ರಚನೆಗೆ ಕೇಂದ್ರ ಸಮ್ಮತಿ

ಅಮೆರಿಕದ ಶಾರ್ಟ್​​ ಸೆಲ್ಲರ್ ಕಂಪನಿ ಅದಾನಿ ಸಮೂಹದ ಕಂಪನಿಗಳ ವಿರುದ್ಧ ಅಕ್ರಮ, ಷೇರು ಮೌಲ್ಯ ತಿರುಚಿದ ಗಂಭೀರ ಆರೋಪ ಮಾಡಿದ ಬಳಿಕ ಮೊದಲ ಬಾರಿಗೆ ತ್ರೈಮಾಸಿಕ ಫಲಿತಾಂಶ ಪ್ರಕಟವಾಗುತ್ತಿರುವ ಕಾರಣ ಈ ಬಾರಿ ಕುತೂಹಲ ಹೆಚ್ಚಿತ್ತು. ಅದಾನಿ-ಹಿಂಡನ್​ಬರ್ಗ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆಯೂ ನಡೆಯುತ್ತಿದೆ. ಹೂಡಿಕೆದಾರರ ಹಿತ ಕಾಯುವ ದೃಷ್ಟಿಯಿಂದ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಇದಕ್ಕೆ ಸರ್ಕಾರ ಸಮ್ಮತಿಯನ್ನೂ ಸೂಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Tue, 14 February 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us